ಸಂಸಾರವ ಬಿಟ್ಟೆನೆಂದು,
ನಿರಾಶಾಪದವ ಮಾಡಿ,
ತಲೆಯ ಬೋಳಿಸಿಕೊಂಡು,
ಕುದಿದು ಕೋಟಲೆಗೊಂಡು,
ಮನೆ ಮನೆ ತಪ್ಪದೆ ಭಿಕ್ಷವ ಬೇಡಿ,
ಉಂಡು, ಎದ್ದು ಹೋಗಿ ತತ್ವವ ಬೋಧಿಸಿ,
ಉದರವ ಹೊರೆವಂದು ಮುನ್ನವಿಲ್ಲ ಮರುಳಾ ?
ಕಾಡಿ ಬೇಡಿ ಹಾಡಿ ಒಡಲ ಹೊರೆವಂಗೆ,
ಮುಕ್ತಿಯುಂಟೆ ಮರುಳಾ ?
ಜಂಗಮದಂಗವು ನಿರ್ಗಮನಿ,
ಭಕ್ತಪ್ರಿಯ ನಮ್ಮ ಗುಹೇಶ್ವರಲಿಂಗದಲ್ಲಿ
ಜಂಗಮದ ನಡೆಯಿಲ್ಲ ಕಾಣಾ, ಎಲೆ ಮರುಳಾ.