ಅಥವಾ
(13) (1) (4) (0) (4) (0) (0) (0) (1) (0) (0) (0) (0) (0) ಅಂ (4) ಅಃ (4) (26) (2) (5) (0) (0) (0) (0) (3) (0) (0) (0) (0) (1) (0) (0) (8) (0) (1) (2) (2) (0) (0) (0) (4) (7) (0) (3) (0) (1) (5) (0) (0) (2) (4) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಾಬುದಕ್ಕೆ ಮೊದಲೆ ಬಯಕೆ ಅರತು, ಕೂಡುವುದಕ್ಕೆ ಮುನ್ನವೆ ಸುಖವರತು, ಉಭಯ ನಾಮಧೇಯ ನಷ್ಟವಾದಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಕಾಯವ ಬಿಟ್ಟು ಪ್ರಾಣಹೋದ ಮತ್ತೆ, ಆ ಕಾಯಕ್ಕೆ ಆ ಪ್ರಾಣ ಪುನರಪಿಯಾಗಿ ಒಪ್ಪುದೆ ? ಅಂಗವ ಬಿಟ್ಟು ಲಿಂಗ ಬಿದ್ದ ಮತ್ತೆ, ಮತ್ತಾ ಅಂಗಕ್ಕೆ ಲಿಂಗವುಂಟೆ ? ಲಯವೆಂದಿದ್ದಡೂ ತಪ್ಪದು. ಪ್ರಾಯಶ್ಚಿತವೆಂದು ಪ್ರಕಾರವ ಮಾಡಿ, ಶ್ವಾನನ ಕಾಲಿನಲ್ಲಿ ಸೋಮಪಾನವನೆರೆದು, ಪಾಯಸ ಶುದ್ಧವಾಯಿತ್ತೆಂದು ಕೊಂಬವನಂತೆ, ಈ ಗುಣವ ಕಾಬುದಕ್ಕೆ ಮೊದಲೆ ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಕಲ್ಲು ರತಿಯಿಂದ ರತ್ನವಾದಂತೆ, ಉದಕ ಸಾರವರತು ಲವಣವಾದಂತೆ, ವಾರಿ ವಾಯುವ ಸಂಗದಿಂದ ಬಲಿದಂತೆ, ಪೂರ್ವವನಳಿದು ಪುನರ್ಜಾತನಾದ ಮತ್ತೆ, ಎನ್ನವರೆಂದು ಬೆರಸಿದಲ್ಲಿ, ಆ ಗುಣ ಆಚಾರಕ್ಕೆ ಹೊರಗಾಯಿತ್ತು. ಮಾತೆ ಪಿತ ಸಹೋದರ ಬಂಧುಗಳೆಂದು ಮನ ಕೂರ್ತು ಬೆರಸಿದಲ್ಲಿ, ಆಚಾರಕ್ಕೆ ಭ್ರಷ್ಟ, ವಿಚಾರಕ್ಕೆ ದೂರ, ಪರಮಾರ್ಥಕ್ಕೆ ಸಲ್ಲ. ಇವನೆಲ್ಲವ ಕಳೆದುಳಿದು ನಿಂದಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಕಾಯವಿಡಿದಿಹನ್ನಕ್ಕ ಕೈಯ ಕುರುಹು. ಜೀವವಿಡಿದಿಹನ್ನಕ್ಕ ಭವಪಾಶ. ಈ ಉಭಯವನರಿದಿಹನ್ನಕ್ಕ ಮಹಾಶರಣರ ಸಂಗಸುಖ ಬೇಕು. ಸುಖ ನಿಶ್ಚಯವಾದಲ್ಲಿ, ನಾ ನೀನೆಂಬ ಭಾವ ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಕೈ ತುಂಬಿ ಹಿಡಿದು, ಕಂಗಳು ತುಂಬಿ ನೋಡಿ, ಮನ ತುಂಬಿ ಹಾರೈಸಿ, ಎಡೆಬಿಡುವಿಲ್ಲದೆ ಅರಿದ ಮತ್ತೆ ಆ ಕುರುಹು ಕೈಗೆ ಆದಿಯಾಗಿ, ಕಂಗಳಿಗೀಡಾಗಿ, ಆತ್ಮನರಿವಿನಲ್ಲಿ ಉಭಯವಳಿದು ನಿಂದಲ್ಲಿಯೆ ಲೀಯವಾಗಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಕರ್ಮದ ಧರ್ಮಂಗಳೊಳಗಾಗಿ ಮಾಡುವ ಮಾಟಂಗಳೆಲ್ಲವೂ ಕರ್ಮಶಕ್ತಿಗೆ ಬೀಜ. ಆ ಉಭಯವ ನೇತಿಗಳೆದು ಮಾಡುವುದೆಲ್ಲವೂ ಜ್ಞಾನಶಕ್ತಿಗೆ ಬೀಜ. ಸಕಲವ ವಿಚಾರಿಸಿ, ಅಹುದಲ್ಲಾ ಎಂದು ಹರಿದು ಮಾಡುವುದೆಲ್ಲವೂ ಮುಂದೊಂದ ಕುರಿತು ವಸ್ತುವೆಂಬ ಒಡಲಿಗೆ ರೂಪಾಯಿತ್ತು. ಸ್ವಯವೆಂಬ ಭಾವ ನಿಜದಲ್ಲಿ ನಿಂದಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಕುರುಹಿನ ಪತಾಕೆಯ ಹಿಡಿದವಂಗೆ, ಕೊರತೆ ಉಂಟೆ, ಆಳ್ದಂಗಲ್ಲದೆ ? ಎಚ್ಚವನಿದ್ದಂತೆ ಅಂಬಿಗೆ ಮುನಿವರೆ ? ಎನ್ನ ಮರವೆ ನಿನ್ನ ಕೇಡಾದ ಕಾರಣ, ನೀ ನಾನೆಂಬುದಕ್ಕೆ ಮೊದಲೆ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಕಂಡೂ ಕಾಣದೆ, ಕೂಡಿಯೂ ಕೂಡದೆ, ಹೆರೆಹಿಂಗಿಯೂ ಹಿಂಗದೆ, ಲಿಂಗಸಂಗವೆಂಬುದಕ್ಕೆ ಮುನ್ನವೆ ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಕಾಯ ಮುಟ್ಟಿದ ಠಾವಿನಲ್ಲಿ ಜೀವ ಮುಟ್ಟಲಿಲ್ಲ. ಜೀವ ಮುಟ್ಟಿದ ಠಾವಿನಲ್ಲಿ ಪರಮ ಮುಟ್ಟಲಿಲ್ಲ. ಪರಮ ಪ್ರಕಾಶವನೆಯ್ದಿ ತ್ರಿವಿಧಗುಣವರತಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಕಾಯದೊಳಗಣ ಚಿತ್ತವ ಭಾವಿಸಿ, ಇದಿರಿಟ್ಟಲ್ಲಿ ಭಾವವೋ, ಜೀವವೋ ? ನಾನೆಂಬುದು ತಾನೋ, ಬೇರೊಂದು ನೆಲೆಯ ಪರಮನೋ ? ಆ ಗುಣ ಸ್ಥೂಲ ಸೂಕ್ಷ್ಮ ಕಾರಣಕ್ಕೆ ಹೊರಗಾದಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಕಂಗಳಿಂದ ಕಂಡೆಹೆನೆಂದಡೆ, ಅಲ್ಲಿಗೆ ಪರಿಪೂರ್ಣ ನೀನು. ಚಿತ್ತದಿಂದ ನೆನೆದೆಹೆನೆಂದಡೆ, ಅಲ್ಲಿಗೆ ಅಚ್ಚೊತ್ತಿದಂತಿಹೆ. ನಾ ನೀನೆಂಬ ಭಾವ ಬೇರಾದಲ್ಲಿ ನೆನಹಿಂಗೆ ಒಡಲಿಲ್ಲ. ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಕಾಯವಿಡಿದಿಹನ್ನಬರ ಆಗುಚೇಗೆಯನರಿಯಬೇಕು. ಆಗೆಂಬುದೆ ಜೀವ, ಚೇಗೆಯೆಂಬುದೆ ಕಾಯ. ಉಭಯವನಳಿದು ತಾ ತೊಲಗಿಪ್ಪುದೆ, ಮನಸಂದುದು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಕಾಣೆನೆಂಬ ಅರಿಕೆ, ಕಂಡೆನೆಂಬ ಸಂತೋಷ. ಉಭಯವ ವಿಚಾರಿಸುವನ್ನಬರ ಮರವೆಯ ಬೀಜ. ಕಂಡೆನೆಂಬ ಕಾಣಿಕೆಯವನಲ್ಲ, ಕಾಣೆನೆಂಬ ಸಂಚಾರದವನಲ್ಲ. ಆ ಉಭಯದ ಅಂಗ ಲೇಪವಾದಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಕರ್ಪುರ ಪುತ್ಥಳಿಯ ಉರಿ ಮುಟ್ಟಲಿಕ್ಕೆ, ಪುತ್ಥಳಿಯಂತುರಿವುದೆ ಚಿತ್ತ ? ಕಾಯದ ಒಪ್ಪವನರಿದಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಕಾಯವಿಡಿದಿಹನ್ನಬರ ಶಿವಭಕ್ತಂಗೆ ಕಾಯಕವೆ ಕೈಲಾಸ. ಕಾಯಕವಿಲ್ಲದವನ ಅರಿವು ವಾಯವಾಯಿತ್ತು. ಅಡುಗೂಲಿಯ ಮನೆಯಂತೆ ಗಡಿಗೆಯ ಗಂಜಿಯಾಸೆಬೇಡ. ಕೊಡುವರೆಂದೊಬ್ಬರ ಮನೆಗೆ ಅಡಿಗಡಿಗೆ ಹೋಗಬೇಡ. ಇಂತಿವರಡಿಯ ಕಾಬುದಕ್ಕೆ ಮೊದಲೆ ಅಡಗಿದೆಯಲ್ಲಾ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಕರ್ಮವ ನೇತಿಗಳೆದು ನಿಂದಲ್ಲಿ, ವರ್ಮವ ವಿಚಾರಿಸಲಿಲ್ಲ. ಕರ್ಮ ವರ್ಮವೆಂಬ ಉಭಯದ ಸಂದಣಿಯಲ್ಲಿ ಹೋರಟೆಗೊಳ್ಳದ ಮುನ್ನವೆ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಕ್ರೀಯಲ್ಲಿ ಇಷ್ಟವ ಪೂಜಿಸುವನ್ನಬರ, ಚಿತ್ತದ ತೊಟ್ಟುಬಿಟ್ಟು ಬೆಚ್ಚಂತಿರಬೇಕು. ಭಾವದಿಂದ ಅಧ್ಯಾತ್ಮವನರಿವನ್ನಬರ, ಜೀವಸಂಸಾರವಿಲ್ಲದಿರಬೇಕು. ಇಂತೀ ಎರಡಳಿದು ಒಂದರಲ್ಲಿ ನಿಜವಹನ್ನಬರ, ಕಾಯಕ್ಕೆ ಕರ್ಮ, ಜೀವಕ್ಕೆ ಅರಿವು. ಅರಿವಿಂಗೆ ಕುರುಹುದೋರುವುದಕ್ಕೆ ಮುನ್ನವೆ ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಕಂಡೆಹೆನೆಂಬ ಭ್ರಾಂತಿ, ಕಾಣೆನೆಂಬ ಬಯಕೆ. ಅರಿವುದಕ್ಕೆ ಮುನ್ನ ಅರಿದ ಅರಿವು, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಕೂಲಿಗೆ ಹಾವ ಕಚ್ಚಿಸಿಕೊಂಡು ಸಾಯಲೇತಕ್ಕೆ ? ಕಂಡವರ ಬೇಡಿ ಜಂಗಮಕ್ಕೆ ಮಾಡಿಹೆನೆಂಬ ದಂದುಗವೇಕೆ ? ಲಂದಣಗಿತ್ತಿಯಂತೆ ಸಾವ ಘಟದಂದವ ಹೊರಲೇತಕ್ಕೆ ? ಈ ದಂದುಗಕ್ಕೆ ಮೊದಲೆ ಅಂಜಿ, ಅರಿದು ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಕುಸುಮಗಂಧ ಹಿಸುಕಿದಲ್ಲಿ ದುರ್ಗಂಧ. ಉದಕದಲ್ಲಿ ನಿರ್ಮಲ, ಕೆದಕಿದಲ್ಲಿ ಮಲ. ವಿನಯದಿಂದ ಸುಗುಣ, ದುರ್ವಾಸದಿಂದ ಕರ್ಕಶ. ಇಂತೀ ಉಭಯಂಗಳೆಲ್ಲ ಕೂಡಿ, ಜೀವ ಪರಮನೆಂಬ ಅರಿವು ಮರವೆ ಎರಡಳಿದು, ಪಂಕವನೀಂಟಿದ ಸುಜಲ ನಿಂದಂತೆ, ಏಕಚಿತ್ತಮೂರ್ತಿಯಾದಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಕೂರ್ಮನ ಮೋಹ, ಉರಗನ ಧ್ಯಾನ, ವಿಹಂಗನ ಚಿತ್ತ, ಪಿಪೀಲಿಕನ ಜ್ಞಾನ, ಮಯೂರನ ಎಚ್ಚರಿಕೆ, ದಯಾಪರನ ಸರ್ವಗುಣ, ಉಭಯವಳಿದವನ ನಿರ್ಮೋಹ, ಅಪ್ರಮಾಣನ ವಿಶ್ವಾಸ, ಕುರುಹುದೋರುವುದಕ್ಕೆ ಮುನ್ನವೆ ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಕಾಯದಲ್ಲಿ ಬತ್ತಲೆಯಿಪ್ಪವರೆಲ್ಲರು ಜೀವರುಗಳ ಬಾಗಿಲಲ್ಲಿ ಬಾಯ ಬಿಡುತ್ತ, ಉಂಟು ಇಲ್ಲಾ ಎಂಬುದಕ್ಕೆ ಬೇವುತ್ತ, ಇಂತಪ್ಪವರ ಜ್ಞಾನಿಗಳೆಂಬುದಕ್ಕೆ ಮುನ್ನವೆ ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಕಾಯಸೂತಕಿಗಳು ಕರ್ಮಕ್ಕೊಳಗು. ಜೀವಸೂತಕಿಗಳು ಭವಕ್ಕೆ ಬೀಜ. ಮತ್ತಾವ ಸೂತಕಿಗಳೆಲ್ಲರು ಎಂಬತ್ತನಾಲ್ಕುಲಕ್ಷ ಜೀವರಾಶಿಗಳ ಠಾವಿಗೆ ಒಳಗು. ಪ್ರಸೂತವಾಗಿ ಹೊರಗಾದಲ್ಲಿ ಏನೂ ಎಂದೆನಲಿಲ್ಲ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಕಾಯಕಲ್ಪಿತಕ್ಕೊಳಗಲ್ಲದೆ ಇರಬೇಕು. ಜೀವ ನಾನಾ ಭವಂಗಳಲ್ಲಿ ಬಾರದೆ ಇರಬೇಕು. ಅರ್ತಿಗಾರಿಕೆಯಲ್ಲಿ ಎಲ್ಲ ಹೊತ್ತುಹೋಕಂಗೆ. ನಿಶ್ಚಯದ ಮಾತೇಕೆ ? ಆ ಕುಚಿತ್ತರಿಗೆ ಮುನ್ನವೆ ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಕಾಯ ದಿಟವೆಂದು ಪ್ರಮಾಣಿಸುವಲ್ಲಿ ಅಳಿವುದಕ್ಕೆ ಮುಖ್ಯ. ಜೀವ ದಿಟವೆಂದು ಪ್ರಮಾಣಿಸುವಲ್ಲಿ ಪ್ರಕೃತಿರೂಪು. ಅರಿವು ದಿಟವೆಂದು ಪ್ರಮಾಣಿಸುವಲ್ಲಿ ಮರವೆಗೆ ಬೀಜ. ಸ್ಥೂಲದ ಅಳಿವನರಿತು, ಸೂಕ್ಷ್ಮದ ಪ್ರಕೃತಿಯನರಿತು, ಕಾರಣದ ಅರಿವು ಮರವೆಯನರಿತು, ತ್ರಿಗುಣ ಭೇದಂಗಳ, ತ್ರಿಶಕ್ತಿ ಭಾವಂಗಳ, ತ್ರಿಗುಣಮಲಕ್ಕೆ ಒಳಗಾಗದ ಮುನ್ನವೆ ಮನಸಂದಿತ್ತು ಮಾರಿತಂದೆ.
--------------
ಮನಸಂದ ಮಾರಿತಂದೆ

ಇನ್ನಷ್ಟು ...