ರ ಪದದಿಂದ ಪ್ರಾರಂಭವಾಗುವ ವಚನಗಳು:
ರೂಪೆಂಬುದನರಿದು ಸಂಕಲ್ಪಕ್ಕೊಳಗಾಗದೆ,ಶೂನ್ಯವೆಂಬುದನರಿದು ಸಂಚಾರಕ್ಕೀಡಾಗದೆ,ಉಭಯಮಾರ್ಗವ ತಿಳಿದುಸಂದೇಹವೆಂಬ ಸಂಕಲ್ಪದಲ್ಲಿ ನಿಲ್ಲದೆ,ನಿಜ ಒಂದೆಂದಲ್ಲಿ, ಮನಸಂದಿತ್ತು ಮಾರೇಶ್ವರಾ.
ರಾಜನ ಭಕ್ತಿ ತಾಮಸದಿಂದ ಕೆಟ್ಟಿತ್ತು.ಪಂಡಿತನ ಯುಕ್ತಿ ಖಂಡನವಿಲ್ಲದೆ ನಿಂದಿತ್ತು.ಸುಸಂಗಿಯ ನಿರಂಗ ದುಸ್ಸಂಗದಿಂದ ಕೆಟ್ಟಿತ್ತು.ಪತಂಗನಂತಾಗದೆ ಮುನ್ನವೆ ನಿನ್ನ ನೀನರಿ.ಅರಿದಡೆ ನಿನಗಿದಿರಿಲ್ಲ, ಮನಸಂದಿತ್ತು ಮಾರೇಶ್ವರಾ.
ರಜ್ಜು ಸ್ಥಾಣು ಶಂಕೆ ಹರಿದಲ್ಲದೆ ಸಂದೇಹ ಬಿಡದು.ಅರಿವು ಮರವೆ ಹೆರೆಹಿಂಗಿಯಲ್ಲದೆ ಬೇರೊಂದರಿಯಲಿಲ್ಲ.ಭೇದಕ್ಕೆ ಮುನ್ನವೆ ಮನಸಂದಿತ್ತು ಮಾರೇಶ್ವರಾ.