ಹಿಂದೆ ಬಂದವರೆಲ್ಲರೂ ಯೋನಿಯ ಹಂಗು. ಸಕಲ ಶಾಸ್ತ್ರಜ್ಞರೆಲ್ಲಾ, ವೇದ ವೇದಾಂತರೆಲ್ಲಾ, ಹಿಂದೆ ಬಂದ ಯೋನಿಯ ಮರೆದು, ಮುಂದಕ್ಕೆ ಯೋನಿಗಾಗಿ ಲಂದಳಗಿತ್ತಿಯಂತೆ ಬಂದ ನಿಂದ ಭಕ್ತರಲ್ಲಿ ಹೊಸತನದಂದವ ಹೇಳಿ, ಎಡಗಾಲಸಂದಿಯ ಮಚ್ಚಿ, ಅನಂಗನ ಬಲೆಯೊಳಗಾದವರಿಗೆ ಘನಲಿಂಗನ ಸುದ್ಧಿಯೇಕೆ, ಆತುರವೈರಿ ಮಾರೇಶ್ವರಾ.
ಹೆಣ್ಣಿನ ಮೇಲಿನ ಮೋಹ ಯೋನಿ ಕಂಡಾಗ ದಣಿಯಿತ್ತು. ಹೊನ್ನಿನ ಮೇಲಿನ ಮೋಹ ಕೂಡಿ ಭಿನ್ನವಾಗಲಾಗಿಯೆ ದಣಿಯಿತ್ತು. ಮಣ್ಣಿನ ಮೇಲಿನ ಮೋಹ ಅರಿಗಳ ಮುರಿದು ಹರಿವರಿಯಾದಾಗಲೇ ದಣಿಯಿತ್ತು. ಇವನೊಂದುವ ಕಾಣದ ಮೋಹ ಎಂದಿಗೂ ಬಿಡದು. ಇದರ ಸಂದನಳಿದು ಹೇಳಾ, ಆತುರವೈರಿ ಮಾರೇಶ್ವರಾ.
ಹಿಂದೆ ನಾ ಬಂದ ಭವಕ್ಕೆ ಅಟ್ಟಣೆಯಿಲ್ಲ. ಉದಯದಲ್ಲಿ ಕಮ್ಮಾರನ ಮನೆಗೆ ಬಂದು ಬೇಸತ್ತೆ. ಮಧ್ಯಾಹ್ನದಲ್ಲಿ ಅಗಸನ ಮನೆಗೆ ಎಡತಾಕಿ ಬೇಸತ್ತೆ. ಅಸ್ತಮಯದಲ್ಲಿ ನಾವಿದನ ಮನೆಗೆ ಹೋಗಿ ನಿಂದಿರ್ದು ಬೇಸತ್ತೆ. ಕಮ್ಮಾರನ ಕೈಯ ಮುರಿದವರಿಲ್ಲ, ಅಗಸನ ಕಾಲ ಕಡಿದವರಿಲ್ಲ. ನಾವಿದನ ತಲೆಯ ಕೊಯ್ದವರಿಲ್ಲ. ಇಷ್ಟನಾರೈದುಕೊ, ಆತುರವೈರಿ ಮಾರೇಶ್ವರಾ.