ಶ್ರೀಗುರು ಶಿಷ್ಯಂಗೆ ಮಂತ್ರಮೂರ್ತಿಯ ಕೊಡಬೇಕಾಗಿ,
ಸೃಷ್ಟಿಯ ಮೇಗಣ ಕಣಿಯ ತಂದು ಇಷ್ಟಲಿಂಗವ ಮಾಡಿ,
ಶಿಷ್ಯನ ತನುವಿನ ಮೇಲೆ ಅದ ಧರಿಸಿ,
ಲಿಂಗ ಅವತಳವಾಯಿತ್ತೆಂದು, ಭೂಮಿ ಸಿಂಹಾಸನಗೊಂಡಿತ್ತೆಂದು
ಸಮಾಧಿಯ ಹೊಗುವಿರಯ್ಯಾ.
ಆ ಲಿಂಗ ಅವತಳವಾದಡೆ ಭೂಮಿ ತಾಳಬಲ್ಲುದೆ ?
ಗರಡಿಯಲ್ಲಿ ಮುಟ್ಟಿ ಸಾಧನೆಯ ಮಾಡುವಲ್ಲಿ, ಆಳು ಬಿದ್ದಡೆ
ಭಂಗವಲ್ಲದೆ
ಅಲಗು ಬಿದ್ದಡೆ ಭಂಗವೆ ? _ಅಲಗ ತಕ್ಕೊಂಡು ಗರಡಿಯಲಿ
ಸಾಧನೆಯ ಮಾಡುವುದು ಕರ್ತವ್ಯ ನೋಡಾ.
ಆ ಲಿಂಗ ಹುಸಿಯಾದಡೇನು ? ಗುರುಲಿಂಗ ಹುಸಿಯಾದಡೇನು ?
ಜಂಗಮಲಿಂಗ ಹುಸಿಯಾದಡೇನು ? ಪಾದತೀರ್ಥ ಹುಸಿಯೆ ?
ಪಾದತೀರ್ಥ ಪ್ರಸಾದ ಹುಸಿಯಾದಡೇನು, ವಿಭೂತಿವೀಳ್ಯಕ್ಕೆ ಬಂದ
ಗಣಂಗಳು ಹುಸಿಯೆ ?_
ಇಂತೀ ಷಡುಸ್ಥಲವ ತುಚ್ಛಮಾಡಿ, ಗುರೂಪದೇಶವ ಹೀನಮಾಡಿ
ಸಮಾಧಿಯ ಹೊಕ್ಕೆನೆಂಬ ಪಾತಕರ ಮುಖವ ನೋಡಲಾಗದು ಕಾಣಾ
ಕೂಡಲಚೆನ್ನಸಂಗಮದೇವಾ.