ಅಥವಾ

ಒಟ್ಟು 20 ಕಡೆಗಳಲ್ಲಿ , 12 ವಚನಕಾರರು , 13 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭವಬಂಧನಂಗಳ ಹಿಂಗಿಸಬೇಕೆಂಬಣ್ಣಗಳು ನೀವು ಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರಿ. ಶ್ರೀಗುರುಪುತ್ರನಾಗಿ ಅವರು ತಮ್ಮ ಅಂತಃಕರಣ ಕೃಪೆಯಿಂದ ಪೇಳಿದ ಪ್ರಸಾದವಾಕ್ಯವನು ಅವರ ದಯದಿಂದ ಪೇಳುತಿರ್ದೆನು ಕೇಳಿರಯ್ಯ. ಅದೆಂತೆಂದಡೆ : ಆಶೆ ಆಮಿಷ ತಾಮಸದೊಡನೆ ಕೂಡಿ ಕ್ಲೇಶಪಡುತಿರ್ದಂತೆ ಗುರುಗಳಲ್ಲಿ ಅಥವಾ ಜಂಗಮಲಿಂಗಿಗಳಲ್ಲಿ ಇಂತೀ ಉಭಯ ಪಾಶಬದ್ಧರ ಕೈಯಿಂದ ಅಹಂಕಾರ ಮಮಕಾರದಲ್ಲಿ ಆಣವಮಲ, ಮಾಯಾಮಲ, ಕಾರ್ಮಿಕಮಲವೆಂಬ ಮಲತ್ರಯಂಗಳ ಕಚ್ಚಿ, ಸಂಸಾರವಿಷಯದಲ್ಲಿ ಲಂಪಟರಾದ ಭಕ್ತಜನಂಗಳು ಅಥವಾ ಶಿಷ್ಯೋತ್ತಮನಾದಂಥವರು ಇಂತಪ್ಪವರು ಲಿಂಗವ ಪಡೆದು, ಉಪದೇಶವ ಹಡದು, ಆಚರಿಸುವರ ಆಚರಣೆಯೆಂತಾಯಿತ್ತೆಂದಡೆ, ತಲೆಯಿಲ್ಲದ ಪುರುಷನ ಸಂಗ, ಕಣ್ಣಿಲ್ಲದ ಸ್ತ್ರೀ ಸಂಯೋಗವ ಮಾಡಿ, ಜೀವವಿಲ್ಲದೊಂದು ಮಗನ ಹಡದಂತಾಯಿತ್ತಯ್ಯ. ಅಂತಪ್ಪ ದೇವ ಭಕ್ತ ಗುರು ಶಿಷ್ಯರೆಂಬ ಈ ಚತುರ್ವಿಧ ಪುರುಷರಿಗೆ ಭವಹಿಂಗದು, ಮುಕ್ತಿ ಎಂದಿಗೂ ತೋರದು. ಅದೇನು ಕಾರಣವೆಂದಡೆ : ತಾವ್ಯಾರು, ತಮ್ಮ ಸ್ವರೂಪವಾವುದು ಎಂಬ ನಿಲುಕಡೆಯ ತಿಳಿಯದ ಕಾರಣ. ಮತ್ತಂ ಪೇಳ್ವೆ : ತಮ್ಮ ನಿಜವ ತಾವರಿದು, ಸರ್ವಾಚಾರಸಂಪತ್ತು ಅಳವಟ್ಟು, ಸರ್ವಾಂಗಲಿಂಗಮಯವಾಗಿರುವಂಥ ನಿಃಕಲ ಸದ್ರೂಪಸ್ವರೂಪರಾದ ಆಚಾರ್ಯಂಗಳಲ್ಲಾಗಲಿ, ಅಥವಾ ಸತ್ತುಚಿತ್ತಾನಂದ ನಿತ್ಯಪರಿಪೂರ್ಣಭರಿತನಾದ ನಿಃಕಲಪರಮಾನಂದಸ್ವರೂಪರಾದ ನಿರಂಜನಜಂಗಮದಲ್ಲಾಗಲಿ ಇಂತೀ ಉಭಯ ಪರಮೂರ್ತಿಗಳ ಕರುಣಕೃಪೆಯಿಂದ ಶಿವಜ್ಞಾನೋದಯವಾಗಿ ಸಕಲಪ್ರಪಂಚವನೆಲ್ಲವ ನಿವೃತ್ತಿಯ ಮಾಡಿ ಲಿಂಗಾಂಗಸಮರಸದನುಭವವಳವಟ್ಟು ತ್ರಿವಿಧ ವಂಚನೆಯಿಲ್ಲದೆ ಕ್ಷಮೆ, ದಮೆ, ಶಾಂತಿ, ಸೈರಣೆ ಗುಣವುಳ್ಳಂಥ ಸದ್ಭಕ್ತ ಶರಣಜನಂಗಳಲ್ಲಾಗಲಿ ಅಥವಾ ಶಿಷ್ಯೋತ್ತಮನಾದಂಥವರುಗಳಲ್ಲಾಗಲಿ ಇಂತೀ ಉಭಯ ಭಕ್ತಗಣಂಗಳು ಚಿದ್ಘನಮಹಾಲಿಂಗವೆಂಬ ಇಷ್ಟಲಿಂಗವ ಕರಸ್ಥಲಕ್ಕೆ ಪಡಕೊಂಡು, ತಾರಕಮಂತ್ರವೆಂಬ ಮಂತ್ರೋಪದೇಶವ ಹಡಕೊಂಡು, ಆಚರಿಸುವ ಸದ್ಭಕ್ತ ಶರಣಜನಂಗಳ ಆಚರಣೆಯೆಂತಾಯಿತ್ತಯ್ಯಯೆಂದಡೆ: ಸೂರ್ಯಪ್ರಕಾಶವನುಳ್ಳಂಥ ಕನ್ಯಕುಮಾರ ರಾಜನಸಂಗ ಚಂದ್ರಕಾಂತಿಪ್ರಕಾಶವನುಳ್ಳಂಥ ಕನ್ಯಸ್ತ್ರೀಯಳು ಸಂಯೋಗವ ಮಾಡಿ ಅಗ್ನಿಕಾಂತಿಪ್ರಕಾಶವನುಳ್ಳಂಥ ಪುತ್ರನ ಹಡೆದಂತಾಯಿತ್ತಯ್ಯ. ಇಂತಪ್ಪ ಆಚಾರವನುಳ್ಳ ಗುರು ಶಿಷ್ಯರು ದೇವ ಭಕ್ತರೆಂಬ ಈ ನಾಲ್ಕು ಪರಪುರುಷರಿಗೆ ಭವಹಿಂಗುವುದು. ಮುಕ್ತಿಯೆಂಬುದು ಕರತಳಾಮಳಕವಾಗಿ ತೋರುವುದು. ಮತ್ತಂ, ಲಿಂಗಾಂಗಸಂಬಂದ್ಥಿಯಾಗಿ ಸರ್ವಾಚಾರ ನೆಲೆಗೊಂಡು ಸರ್ವಾಗಲಿಂಗಿಯಾದಂಥ ವೀರಮಾಹೇಶ್ವರರಾಗಲಿ, ಅಥವಾ ಗುರುಗಳಾಗಲಿ, ಸದ್ಭಕ್ತ ಶರಣಜನಂಗಳಾಗಲಿ, ಇಂತಪ್ಪ ತ್ರಿವಿಧಶಿವಜ್ಞಾನಿಗಳ ಚರಣಕಮಲಕ್ಕೆ ದೀರ್ಘದಂಡನಮಸ್ಕಾರಮಂ ಮಾಡಿ ಸುಜ್ಞಾನೋದಯವಾಗಿ ಮೋಕ್ಷವ ಹಡೆಯಬೇಕೆಂಬ ಜ್ಞಾನಕಲಾತ್ಮರಾದಂಥವರು ಲಿಂಗಾಂಗಸಮರಸದನುಭಾವವ ವಿಚಾರಿಸಿಕೊಳ್ಳಬೇಕು. ಅಂತಪ್ಪ ಪರಶಿವಮೂರ್ತಿಗಳಾದ ಗುರುಗಳಲ್ಲಾಗಲಿ, ಅಥವಾ ಜಂಗಮಲಿಂಗಿಗಳಲ್ಲಾಗಲಿ, ಅಥವಾ ಇಂತಹ ಶಿವಜ್ಞಾನಿಗಳಾದ ಭಕ್ತರಲ್ಲಾಗಲಿ, ಶಿಷ್ಯೋತ್ತಮರಲ್ಲಾಗಲಿ, ಇಂತಪ್ಪವರಿಗೆ ಲಿಂಗಾಂಗಸಮರಸವ ತೋರಬೇಕು, ತೋರದಿದ್ದರೆ ಪ್ರಮಥರು ಮೆಚ್ಚರು. ಇಂತಪ್ಪ ತ್ರಿಮೂರ್ತಿಗಳು ಹೇಳಿದ ಹಾಂಗೆ ಕೇಳಿ ವಿಶ್ವಾಸದಿಂದ ಆಚರಿಸದಿದ್ದರೆ ಭವಹಿಂಗದು ಮುಕ್ತಿಯೆಂಬುದು ಎಂದೆಂದಿಗೂ ತೋರದು ಎಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಭಕ್ತನಾದಲ್ಲಿ ಭಕ್ತಿಸ್ಥಲ ಅಳವಟ್ಟು. ಮಾಹೇಶ್ವರನಾದಲ್ಲಿ ಆ ಸ್ಥಲ ಅಳವಟ್ಟು. ಪ್ರಸಾದಿಯಾದಲ್ಲಿ ಆ ಸ್ಥಲ ಅಳವಟ್ಟು. ಪ್ರಾಣಲಿಂಗಿಯಾದಲ್ಲಿ ಆ ಸ್ಥಲ ಅಳವಟ್ಟು. ಶರಣನಾದಲ್ಲಿ ಆ ಸ್ಥಲ ಅಳವಟ್ಟು. ಐಕ್ಯನಾದಲ್ಲಿ ಆ ಸ್ಥಲ ಅಳವಟ್ಟು. ಆರು ಲೇಪವಾಗಿ, ಮೂರು ಮುಗ್ಧವಾಗಿ, ಒಂದೆಂಬುದಕ್ಕೆ ಸಂದಿಲ್ಲದೆ, ಲಿಂಗವೆ ಅಂಗವಾಗಿಪ್ಪ ಶರಣನ ಇರವು, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ ತಾನು ತಾನಾದ ಶರಣ.
--------------
ಮನುಮುನಿ ಗುಮ್ಮಟದೇವ
ಪೂರ್ವವನಳಿದು ಪುನರ್ಜಾತನಾದ ಮತ್ತೆ ಜಾತತ್ವ ಅಳವಟ್ಟು ಆ ಗುರುಮೂರ್ತಿಯ ಇರವು ತಾನಾದ ಮತ್ತೆ ಹಿಂದ ಮೆಟ್ಟಲಿಲ್ಲ. ಬಂಧುಗಳೆಂದು, ಕೊಂಡ ಕೊಟ್ಟ ಬೆಂಬಳಿಯವರೆಂದು, ತಂದೆ ತಾಯಿ ಒಡಹುಟ್ಟಿದವರ. ಹಿಂದ ನೆನೆವನಿಗೇಕೆ ಗುರುಸ್ಥಲದ ಸಂಪತ್ತಿನಿರವು ಮಾತಾ ಉಮೆ ಪಿತಾ ಶಿವ ಶಿವಭಕ್ತ ಬಾಂಧವರಾದಲ್ಲಿ, ಅವರೊಳಗೆ ಒಬ್ಬರಿವರೆಂದು ವಿಶೇಷವ ಕಾಣದೆ ಕಾಬುದುಗುರುಸ್ಥಲ. ಹಾಗಲ್ಲದೆ ಹಿಂದಣ ತೂತಿನವರೆಂದು ಬದ್ದುದ ಮಾಡಿ, ಮುಂದಣ ತೂತಿಂಗೀಡುಮಾಡುವ ಭಂಡಂಗೇಕೆ ಗಾಂಬ್ಥೀರದ ಇರವು ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ತಾಳಮರದ ಮೇಲೊಂದು ಹೂಳಿದ್ದ ವಸ್ತುವ ಕಂಡೆ. ಏಳುನೂರೆಪ್ಪತ್ತು ಮನೆಯಲ್ಲಿ ತಾನಾಗಿಪ್ಪುದಯ್ಯ. ಸರ್ವ ಸಂದುಗಳೊಳಗೆ ಅಳವಟ್ಟು ಬೆಳಗುವುದು. ನಟ್ಟ ನಡು ಮಧ್ಯದಲ್ಲಿ ನಂದಾದೀವಿಗೆ ನಂದದ ಬೆಳಗು ಕುಂದದು ನೋಡಿರೇ. ಮೂರಾರು ನೆಲೆಗಳ ಮೀರಿ ಪರಿಪೂರ್ಣವಾಗಿಪ್ಪುದು. ದಶನಾಡಿಗಳೊಳಗೆ ಎಸೆದು ಪಸರಿಸಿಪ್ಪ ಸ್ಫಟಿಕಪ್ರದ್ಯುತ್ ಪ್ರಭಾಮಯವಾಯಿತ್ತಯ್ಯ. ಒಳಗಿಲ್ಲ, ಹೊರಗಿಲ್ಲ, ಎಡನಿಲ್ಲ, ಬಲನಿಲ್ಲ, ಹಿಂದಿಲ್ಲ, ಮುಂದಿಲ್ಲ, ಅಡಿಯಿಲ್ಲ, ಅಂತರವಿಲ್ಲ, ಆಕಾಶವೆಂಬುದು ಮುನ್ನಿಲ್ಲವಯ್ಯ. ಹಿಡಿದರೆ ಹಿಡಿಯಿಲ್ಲ, ಕರೆದರೆ ನುಡಿಯಿಲ್ಲ, ನೋಟಕ್ಕೆ ನಿಲುಕದು. ಇದರಾಟ ಅಗಮ್ಯವಾಗಿಪ್ಪುದು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅರಿವು ಮರವೆಯೆಂಬ ಉಭಯದ ಭೇದವ ತಿಳಿದಲ್ಲಿ, ಅಕ್ಷಿಯ ಮುಚ್ಚಿದಲ್ಲಿ ಬಯಲು, ಬಿಟ್ಟಲ್ಲಿ ಒಡಲುಗೊಂಡಿತ್ತು. ಉಭಯದೃಷ್ಟವೆಂಬುದು ಇಷ್ಟಲ್ಲದಿಲ್ಲ. ಇಷ್ಟವ ಹಿಡಿದಲ್ಲಿ ಕ್ರೀ, ಬಿಟ್ಟಲ್ಲಿ ಜ್ಞಾನವೆಂಬ ಕಟ್ಟಣೆವುಂಟೆ ? ಕಾಷ*ವ ಹಿಡಿದ ಅಗ್ನಿಗೆ, ಅಗ್ನಿಯಲ್ಲಿ ನಷ್ಟವಾದ ಕಾಷ*ಕ್ಕೆ, ಕೆಟ್ಟ ಮತ್ತೆ ಕೆಂಡವೆಂಬುದಿಲ್ಲ. ನಷ್ಟವಾದ ಮತ್ತೆ ಕಟ್ಟಿಗೆಯೆಂಬುದಿಲ್ಲ. ಕ್ರೀ ಭಾವ ಅಳವಟ್ಟು, ಭಾವ ಶೂನ್ಯವಾದಲ್ಲಿ ಕಾಮಧೂಮ ಧೂಳೇಶ್ವರ ತಾನೂ ತಾನೆ.
--------------
ಮಾದಾರ ಧೂಳಯ್ಯ
ಪ್ರಥಮ ಮೂರು, ಆಶ್ರಯ ನಾಲ್ಕು, ಸ್ಥಲವಾರು, ಯೋಗವೆಂಟು, ಸಂಯೋಗವೆರಡು, ವಿಯೋಗವೊಂದು, ವಿಭೇದವೆರಡು, ಭೇದವೊಂದು, ಅರಿಕೆಯೆರಡು ಅರಿದುದೊಂದು ಆಕಾಶ ಮೂರು ಅವಾಕಾಶವೆರಡು, ಮಹದಾಕಾಶ ನಾಲ್ಕು. ಇಂತಿವೆಲ್ಲವೂ ಮಹಾಪ್ರಕಾಶದ ಪ್ರಭೆ ಪ್ರಜ್ವಲವಾಗಿ ಉಭಯನಾಮರೂಪ ತಾಳ್ದು, ವಂಶ ಮೂರರಲ್ಲಿ ಅಳವಟ್ಟು ಸ್ಥಲವಾರರಲ್ಲಿ ಬೆಳೆದು, ಕುಳವೆಂಟರಲ್ಲಿ ಓಲೈಸಿ ಕುಳ ನಾಲ್ಕರಲ್ಲಿ ಒಕ್ಕಿ, ಫಲ ಮೂರರಲ್ಲಿ ಅಳೆದು ಹಗ ಒಂದರಲ್ಲಿ ತುಂಬಿತ್ತು. ಇಂತೀ ವಿವಿಧ ಸ್ಥಲಂಗಳ ಹೊಲಬನರಿತು ವರ್ತಕಕ್ಕೆ ಕ್ರೀ ಶುದ್ಧ, ಅರಿವಿಂಗೆ ಬಿಡುಗಡೆ ಶುದ್ಧ ಬಿಡುಗಡೆ ಎರಡು ಏಕವಾದಲ್ಲಿ ಸ್ಥಲ ನಿರ್ವಾಹ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ. ಮಾತುಳಂಗ ಮಧುಕೇಶ್ವರನು. || 59 ||
--------------
ದಾಸೋಹದ ಸಂಗಣ್ಣ
ಬಂದದ್ದು ಅತಿಗಳೆಯದೆ, ಬಾರದ್ದು ಬಯಸದೆ ಷಡ್ರಸವನೊಂದುಮಾಡಿಕೊಂಡು ಸವಿದುಂಡು ಚಿಂತೆಗೆಟ್ಟು ಸಂತೋಷವು ಅಳವಟ್ಟು ನಗಿಗೆ ಹಗೆಗೆ ಒಂದಾಗಿ, ಝಗಝಗನೆ ಹೊಳೆದು ವೈರಾಗ್ಯವೇ ಆರೋಗ್ಯವಾಗಿ ಭವರೋಗಬ್ಯಾನಿಗೆ ನೆಲಿಯಾಗಿ ಸತ್ತು ಸತ್ತು ಹೋಯಿತು ಅನಂತಕಾಲ ಅನಂತಜನ್ಮ. ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಹತ್ತು ಬಣ್ಣದ ಗಿಡುವಿಂಗೆ, ಹತ್ತೆಲೆ, ಹತ್ತು ಹೂ, ಹತ್ತು ಕಾಯಾಯಿತ್ತು. ಹತ್ತು ಹತ್ತು ಘನದಲ್ಲಿ ಅಳವಟ್ಟು, ಹತ್ತು ಹತ್ತು ಆಚಾರಕ್ರಮದಲ್ಲಿ ವಿಚಾರವ ಕಾಣಬಲ್ಲಡೆ ಆ ಕಾಯ ಲಿಂಗ ಉದಯ (ಲಿಂಗಮಯ?)ವಹುದು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಹರಿ ಬ್ರಹ್ಮ ಇಂದ್ರ ಚಂದ್ರ ರವಿ ಕಾಲ ಕಾಮ ದಕ್ಷ ಇವರೊಳಗಾದ ಸಮಸ್ತ ದೇವ ದಾನವ ಮಾನವರೆಲ್ಲರು ಶಿವಲಿಂಗದೇವರನಾರಾಧಿಸಿಹೆವೆಂದು, ಜಪ ಧ್ಯಾನ ಮೌನಾದಿ ತಪ ನಾನಾವ್ರತ ನೇಮಂಗಳಂ ಕೈಕೊಂಡು, ಅರ್ಚನೆ ಪೂಜನೆಯಂ ಮಾಡಿ, ಹಲವು ಪ್ರಕಾರದಿಂದೊಲಿಸಿ ಅನೇಕ ಫಲಪದಮುಕ್ತಿಯಂ ಪಡೆದು ಭೋಗಿಸಿ ಸುಖಿಯಾಗಿರುತಿಹುದಕ್ಕೆ ಸಂಶಯವೇಕೆ ? ಶ್ರುತ ದೃಷ್ಟ ಅನುಮಾನದಿಂ ತಿಳಿದುನೋಡಿ ಅದಕೇನೂ ಸಂದೇಹಂ ಬಡಲಿಲ್ಲಯ್ಯಾ. ಎರಡಿಲ್ಲದೆ ಏಕವಾದ, ಭಿನ್ನದೋರದೆ ಶಿವನಂಗವಾದ ಶಿವಭಕ್ತನು ಇದರಂತೆ ಅಲ್ಲ. ಜಪ ತಪ ಧ್ಯಾನ ಮೌನ ನಾನಾವ್ರತನಿಯಮಂಗಳಂ ಕೈಕೊಂಡು ಅರ್ಚನೆ ಪೂಜನೆಯಂ ಮಾಡಿ, ಹಲವು ಪ್ರಕಾರದಿಂದೊಲಿಸಿ ಅನೇಕ ಫಲಪದಮುಕ್ತಿಯ ಪಡೆದಹೆವೆಂದು ಅಲ್ಪಾಸೆವಿಡಿದು ಭ್ರಮೆಗೊಳಗಾದ ಮರ್ಕಟಮನದ ಪರಿಯ ನೋಡಾ ! ಶಿವಶಿವ ಮಹಾದೇವಾ ಮಹಾವಸ್ತುವಿನಲ್ಲಿ ಭೇದವಿಲ್ಲದಿಪ್ಪ ಅಭೇದ್ಯ ಶರಣಂಗೆ ಜಪದ ನೇಮವೆಲ್ಲಿಯದು ? ಜಪದ ಫಲ ಕೈಸಾರಿದಂಗೆ ಧ್ಯಾನಮೌನವೆಲ್ಲಿಯದು ? ಧ್ಯಾನದೇಹ ಅಳವಟ್ಟು ಅನಂದಿಪಂಗೆ ತಪದ ತಗಹೆಲ್ಲಿಯದು ? ಇಹ-ಪರವೆಂಬ ಇದ್ದೆಸೆಗೆಟ್ಟಂಗೆ ವ್ರತನೇಮದ ನೋಂಪಿಯ ಸೂತಕವೆಲ್ಲಿಯದು ? ಉದ್ಯಾಪನೆಯಂ ಮಾಡಿ ಮಹಾಪುರುಷನಂ ಪಡೆದು ತೆರಹಿಲ್ಲದೆ ಪತಿಭಕ್ತಿಯ ಮಾಡುವ ಸಜ್ಜನ ಸತಿಗೆ ಅರ್ಚನೆ ಪೂಜನೆಯಂ ಮಾಡುವ ದಂದುಗವೆಲ್ಲಿಯದೊ ? ತನು ಮನ ಧನ ಮುಂತಾದುವೆಲ್ಲವು ಶಿವನೊಡವೆಯೆಂದು ಮಾಡುವ ಸದ್ಭಕ್ತಂಗೆ ಆವಾಗಲೂ ಶಿವನ ಸೇವೆಯ ಮಾಡುವ ಕೈಗಳಿಗೆ ಮಣಿಯ ಹಿಡಿದು ತಿರುಹಬೇಕೆಂಬ ಕೋಟಲೆಯೇಕೆ ? ಅನುಶ್ರುತವು ನೆನೆವ ಮನದ ನೆನಹ ಬಿಡಿಸಿ ಎಣಿಕೆಗಿಕ್ಕಿ ಸಂದೇಹಿಸುವ ಸಂಚಲವೇಕೆ ? ಅನಿಮಿಷನಾಗಿ ನೋಡುವ ದೃಷ್ಟಿಗೆ, ಎವೆಯ ಮರೆ ಮಾಡಿಕೊಂಡು ಕಣ್ಣುಮುಚ್ಚಲೇತಕ್ಕೆ ? ಕಣ್ಣು ಮನ ಕೈ (ಈ) ತ್ರಿಸ್ಥಾನದಲ್ಲಿರಿಸಲರಿಯದೆ ಭೇದವ ಮಾಡಿ ಅಗಲಿಸುವ ಜಪ ತಾನೇಕೆ ? ಪರಿಪೂರ್ಣವಾಗಿಹ ಸರ್ವಪದವನೀವ ಸ್ವತಂತ್ರ ಪರಾತ್ಪರವಸ್ತುವನಗಲಿ ದೂರಕಿಕ್ಕಿ, ಎಡೆದೆರಹ ಮಾಡಿ ಖಂಡಿಸಿ (ಕಂಡಹೆ)ನೆಂಬ ಧ್ಯಾನಮನವೇಕೆ ? ಸಮರ್ಥತೆಯನುಳ್ಳ ಮಹಾಪದದೊಳಗಿದ್ದು, ಅಲ್ಪಪದವ ಸಾಧಿಸೇನೆಂದು ಕಾಯವ ದಂಡಿಸಿ ಆತ್ಮನಿಗ್ರಹವ ಮಾಡಿ, ಬಟ್ಟೆಗುತ್ತಗೆತನವ ಹಣ್ಣಿ, ತಗಹಿನಲ್ಲಿ ಕುಳ್ಳಿರ್ದು ಬೇಡಿಕೊಂಬ ತಪ ತಾನೇಕೆ ? ಮುಟ್ಟಿತ್ತೆಲ್ಲ ಪವಿತ್ರ, ನೋಡಿತ್ತೆಲ್ಲ ಪಾವನ, ನಿರ್ಮಾಯನೆಂಬ ನಿರ್ಮಳಾಂಗ ನಿತ್ಯಶುದ್ಧದಾಸೋಹದೊಳಿರುತ ಸೂತಕ ಬಿಡದೆಂದು, ಜಡಕ್ರೀಯಿಂದ ಭಾಷೆಗೊಡಲ ಗುರಿಮಾಡಿ ಮೀಸಲಾಗಿಹ ಪ್ರಾಣವನಿರಿದುಕೊಂಡು ಸಾವ ಸಂಕಲ್ಪ ವ್ರತನೇಮವೇಕೆ ? ಪೂಜೆಯು ಪೂಜ್ಯನು ಪೂಜಿಸುವವ_ ಈ ತ್ರಿವಿಧದೋಜೆಯ ಸೂತ್ರಾತ್ಮಕ ತಾನೆ ಎಂಬ ಹವಣನರಿದು, ಅರಿವಿಂಗಾಶ್ರಯವಾಗಿರಲರಿಯದೆ; ನಾನಾ ಪರಿಯಿಂದ ಒಲಿಸಿ ಮೆಚ್ಚಿಸಿ ಸ್ವರ್ಗಾದಿ ಭೋಗ ಧರ್ಮಕರ್ಮವನುಂಬ ಕೈಕೂಲಿಕಾರಕರ್ಮಿಗಳಂತೆ ಮಾಡುವ ಅರ್ಚನೆ ಪೂಜನೆಯ ಆಯಸವೇಕೆ ? ಜಪದ ಜಾಡ್ಯದ ಜಂಜಡದವನಲ್ಲ, ಧ್ಯಾನಮೌನದಿಂದ ಬಿಗಿದು ಬೆರೆತಿಹ ಬಂಧನದವನಲ್ಲ. ತಪದ ದಂಡನೆಯ ತಗಹಿನವನಲ್ಲ, ವ್ರತನೇಮದ ಸೂತಕಿಯಲ್ಲ, ಅರ್ಚನೆ ಪೂಜನೆಯ ಫಲ[ಗ್ರಾಹ]ಕನಲ್ಲ, ಹರಕೆಗೆ ಹವಣಿಸಿ ಬೆರೆತಹನಲ್ಲ, ನೆವದಿಂದ ತದ್ದಿನವ ಮಾಡಬೇಕೆಂಬ ಉದ್ದೇಶಿಯಲ್ಲ, ವರುಷಕ್ಕೊಂದು ತಿಥಿಯೆಂದು ಕೂಡಿ ಮಾಡುವ ಕೀರ್ತಿವಾರ್ತೆಗೆ ಮುಯ್ಯಾನುವನಲ್ಲ, ಮಿಕ್ಕಾದ ಕಿರುಕುಳ ಬಾಧೆ ಆಧಿವಿಡಿಯದ ಸಹಜಸಂತೋಷಿ, ಸರ್ವಾಂಗದೊಳ್ ತನ್ಮಯನಾಗಿರುತ್ತ, ಭಿನ್ನವೇಕೆ ? ಹಾಲ ಸಾಗರದೊಳಗೋಲಾಡುತಿರ್ದು ಓರೆಯಾವಿನ ಬೆನ್ನ ಹರಿವನಲ್ಲ, ಪರುಷದ ಗಿರಿ ಕೈಸಾರಿರಲು; ನಾಡ ಮಣ್ಣ ಕೂಡಲಿಕ್ಕಿ ತೊಳೆದು ಹಾಗವ ಸಾಧಿಸಬೇಕೆಂಬ ಧಾವತಿಯವನಲ್ಲ, ಅತ್ಯಂತ ಸ್ನೇಹದಿಂದ ನೆನಹಿನಲ್ಲಿ ಮನಕ್ಕೆ ಬಂದು ನೆಲೆಗೊಂಡಿರುತ್ತಿರಲು `ಆಹಾ ಪುಣ್ಯವೆ' ಎಂದು ಕ್ರೀಡಿಸುವ ರತಿಸುಖವಂ ಬಿಟ್ಟು ನೆನಹಿನ ಆಸೆಯಿಂದ ತೊಳಲಿ ಬಳಲುವ ಮರಹಿನವನಲ್ಲ. ಕೆಲವು ಮತದವರಂತೆ ಕಂಡಹೆನೆಂದರಿಸಿ ಆಡುವನಲ್ಲ ಕೆಲವು ಮತದವರಂತೆ ತೆರಪಿಟ್ಟು ಅರಸುವನಲ್ಲ ತಾನಲ್ಲದನ್ಯವಿಲ್ಲವೆಂದು ಅಹಂಕರಿಸಿ ಬೆರೆವವನಲ್ಲ. ಮತ್ತೆ ಉಳಿದಾದ ಕಾಕುಮತದ ಸೊಗಸಿಗೆಳಸನಾಗಿ, ಹೊಲಬುಗೆಡುವನಲ್ಲ. ಹೊತ್ತುದ ಹುಸಿ ಮಾಡಿ ಮತ್ತೆ ಉಂಟೆಂದು ಭೇದವ ಮಾಡುವ ದುಷ್ಟದುಷ್ಕರ್ಮಿಗಳ ಪರಿಯವನಲ್ಲ. ಮಾಡಿಹೆನೆಂಬ ಸಂಸಾರದ ಬಂಧನದವನಲ್ಲ. ಮಾಡಲೊಲ್ಲೆನೆಂಬ ವಿಕಳವಾವರಿಸಿಹ ವೈರಾಗ್ಯದ ಉದಾಸೀನದವನಲ್ಲ. ಋತುವುಳ್ಳ ಸತಿಯ ರತಿಕೂಟದಂತೆ ಮುಂದೆ ಅಗಲಿಸುವ ಕಷ್ಟದ ಸುಖವನೊಲುವನಲ್ಲ. ಋತುವರತ ಸತಿಯ ರತಿಕೂಟದಂತೆ ಅಗಲಿಕೆಯಿಲ್ಲದ ಸುಖದ ಸಂಯೋಗದ ನೆಲೆಯನರಿದಾತಂಗೆ; ಮಾಡುವಾತ ತಾನು ಮಾಡಿಸಿಕೊಂಬಾತ ತಾನು ಸೋಹ ದಾಸೋಹ ತಾನೆಂದು ಬೇರೆನ್ನದೆ ದಾತೃ ಭೋಕ್ತೃ ಶಿವನೊಬ್ಬನಲ್ಲದೆ, ಬೇರೆ ಬೇರೆ ತಮತಮಗೆ ಒಡೆಯರುಂಟೆ ? ಇಲ್ಲ. ಆದಿ ಪರಶಿವ ತಾನೆ ಎಂದು ಮಾಡುವ ಮಾಟ, ಸಟೆಯಿಲ್ಲದೆ ದಿಟ ಘಟಿಸಿ ಸಯವಾಗಿ ನಿಂದು ನಿರಾಶೆಯ ಕುಳ(ನಿರಾಕುಳರಿ)ದ ಅನುವನರಿತು ನಿಜವೆಡೆಗೊಂಡ ನಿಲವ ಪ್ರಮಾಣಿಸಿ ಕಾಬಂತೆ, ಮಾಡಬೇಕೆಂದು ದ್ರವ್ಯವ ಸಂಕಲ್ಪಿಸಿ ಕೊಟ್ಟವರಾರು ? ಮಾಡಬೇಕೆಂಬ ಅರಿವಿನ ಕಣ್ದೆರೆಸಿದವರಾರು ? ಮಾಡುವೆನೆಂದು ನೆನೆವ ಚೇತನದ ಪ್ರಾಣವ ತಂದಿರಿಸಿದವರಾರು ? ಮಾಡಿಹೆನೆಂಬ, ಮಾಡಬೇಕೆಂಬ, ಮಾಡುವ_ ಇವನೆಲ್ಲವ ಅರಿವಡಿಸಿಕೊಂಡಿಹ ಕಾಯವ ರೂಪಿಸಿದರಾರು ? ಆದಿಯಿಂದವೆ ನುಡಿದು ನಡೆದು ರೂಪಾಗಿ ಪ್ರಭಾವಿಸಿ ವ್ಯಾಪಾರಕ್ಕೆ ಸಂದೆವೆಂಬ ಹವಣಗಾರರು ಬರಿಯ ವಳಾವಳಿಯಿಂದ, ನಾ ಮಾಡಿದಹೆನೆಂದು ಪ್ರತಿಜ್ಞೆಯಂ ಕೈಕೊಂಡು, ಇಲ್ಲದುದನುಂಟುಮಾಡಿ, ಪಡೆದು ಸಾಧಿಸೆಹೆನೆಂಬ ಬಯಕೆಯ ಸಂಭ್ರಮದಾಯಸ ತಲೆಗೇರಿ, ಉಬ್ಬಿ ಹರಿದಾಡುವ, ಅವಿಚಾರದ ಮನದ, ಮರವೆ ಬಲಿದ ಇರವಿನ ಪರಿಯ ನೋಡಾ ! ಶಿವ ಮಹಾದೇವಾ. ಶಿವ ತನ್ನ ಲೀಲಾ ವಿನೋದಕ್ಕೆ ಸಕಲವನು ರೂಪಿಸಿ ಆಗುಮಾಡಿಕೊಂಡಿರುತ್ತಿರಲು, ಹುಚ್ಚುಗೊಂಡಂತೆ ಎಲ್ಲವೂ ನನ್ನಿಂದಾಯಿತು, ನಾ ಮಾಡಿದೆನೆಂದು ಉಲಿವ ದೇಹಿಯ ಇನ್ನೇನೆನಬಹುದಯ್ಯ ? ಅವರಿಂದಾದ ಒಡವೆಯ ಅವರಿಗೆ ಈವುದು, ಉಪಚರಿಯವೆ ? ನದಿಯುದಕವ ನದಿಗರ್ಪಿಸುವಂತೆ ಒಡೆಯಂಗೊಡವೆಯನರ್ಪಿಸಿ ತಾ ಶುದ್ಧನಾಗಿ ನಡೆನುಡಿಯಲ್ಲಿ ಕವಲುದೋರದೆ ತನ್ನಲ್ಲಿ ತಾನೆ ತಿಳಿದು, ಘನವೆಡೆಗೊಂಡ ಮಹಾನುಭಾವಿಗಳು; ಎಲ್ಲವನಳವಡಿಸಿಕೊಂಡಿಹ ಕಾಯವ ಗುರುವೆಂದೆ ಸಾಧಿಸಿದ ನೆನೆವ ಚೇತನದ ಪ್ರಾಣವ ಲಿಂಗವೆಂದೆ ಭಾವಿಸಿದ ಅರಿವಿನ ಜ್ಞಾನವ ಜಂಗಮವೆಂದೆ ಅರಿದ ನಮ್ಮ ಕೂಡಲಚೆನ್ನಸಂಗಮದೇವರು.
--------------
ಚನ್ನಬಸವಣ್ಣ
ಅನಾಚಾರ ಅಳವಟ್ಟು ಗುರುವನರಿಯಬೇಕು. ಅನಾಮಿಕನಾಗಿ ಲಿಂಗವ ಗ್ರಹಿಸಬೇಕು. ಸರ್ವಪಾತಕ ಪ್ರಸನ್ನನಾಗಿ ಜಂಗಮವ ಭಾವಿಸಬೇಕು. ಇಂತೀ ತ್ರಿವಿಧ ಪಾತಕಂಗಳಲ್ಲಿ ಪವಿತ್ರಂಗಳನರಿದು ಇರವಿನಲ್ಲಿ ಇರವನಿಂಬಿಟ್ಟು ಉರಿ ಎಣ್ಣೆಯ ವೇಧಿಸಿ ಉರಿದು ಯೋಗ ನಿಂದಲ್ಲಿ, ಮಾಡುವ ಕ್ರೀ ಮಾಡಿಸಿಕೊಂಬ ವಸ್ತು ಉಭಯ ನಷ್ಟವಹನ್ನಕ್ಕ ನೀ ಎನ್ನಲ್ಲಿ ನಾ ನಿಮ್ಮಲ್ಲಿ ಎಂಬನ್ನಕ್ಕ ಅದು ಭಿನ್ನಭಾವ. ಈ ಉಭಯದ ಗನ್ನ ಬೇಡ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ, ಎನ್ನಲ್ಲಿ ತಲ್ಲೀಯವಾಗಿರು.
--------------
ಮೋಳಿಗೆ ಮಹಾದೇವಿ
ಆ ಗುರುಶಿಷ್ಯರೆರಡು ಒಂದಾಗಿ ತಾನೇ ತಾನಾದ ವಿನೋದವೇನೆಂಬೆ ? ಮಹಾಂತ ಮಹಾಂತ ನೀನೆಂದರೆ ನೀನು ಇಂದಿನ ಮಹಾಂತನೇ ಅಲ್ಲಾ, ಅಂದಿನ ಮಹಂತ ನೀನು. ನೀನು ನಿರುಪಮ, ನಿರಾಳ, ನಿಷ್ಕಳ, ನಿರ್ಬೈಲು, ಮಹಾಬಯಲಾದ ಅಂದಿನ ಮಹಾಂತ ನೀನಲ್ಲವೆ ? ಅದು ನೀ ಹ್ಯಾಂಗ ಬಲ್ಲೆಯೆಂದರೆ : ನೀನು ನನಗೆ ತತ್ವೋಪದೇಶ ಹೇಳಿದಾತನೇ ? ಅಲ್ಲ. ಅಷ್ಟಾಂಗಯೋಗಂಗಳ ಹೇಳಿದಾತನೇ ? ಅಲ್ಲ. ಮುದ್ರೆಸಾಧನವ ಹೇಳಿದಾತನೇ ? ಅಲ್ಲ. ಹಠಯೋಗ ಲಯಯೋಗ ಲಂಬಿಕಾಯೋಗ ತಪಜಪ ಅದ್ವೈತಾದಿ ನಿತ್ಯನೇಮ ಪುಣ್ಯ ಸತ್ಕರ್ಮ ಮೊದಲಾದ ಇವು ಏನಾದರೂ ಎನಗೆ ಹೇಳಿದಾತನೇ ? ಅಲ್ಲ. ಇವು ಏನು ಹೇಳಲೊಲ್ಲದೆ ನನಗೊಂದು ಹೇಳಿದಿರಿ. ಅದ ಏನು ಹೇಳಿದಿರಿ ಅಂದರೆ, ನಿನ್ನ ನೀ ತಿಳಿದು ಹಾಡೆಂದು ಹೇಳಿದಿರಿ. ನೀನು ಹೇಳಿದುದಕ್ಕೆ ನಾನು ನನ್ನ ಒಬ್ಬುಳಿಯ ಮಾಡಿ ಏಕಚಿತ್ತಾಗಿ ಹೊರ ಆಸೆ ಬಿಟ್ಟು ಒಳನೋಟವಿಟ್ಟು ಹಸಿವೆ ತೃಷೆಗಳಂ ಸುಟ್ಟು ನನ್ನನ್ನೇ ನಾ ಕೆಟ್ಟು ರತಿ ನಿನ್ನೊಳಗಿಟ್ಟು ಆತ್ಮಜ್ಞಾನ ಅಳವಟ್ಟು, ಅಹಂಬ್ರಹ್ಮವಂ ಬಿಟ್ಟು, ನೀ ಒಂದು ಮಾಡೆಂದರೆ ನಾ ಒಂಬತ್ತು ಮಾಡಿ ಹುಡುಕಲು, ಅಲ್ಲಿ ನಿನ್ನ ಬಲ್ಲಾದೆ, ನಿನ್ನ ಬಲ್ಲಲ್ಲಿ ಸರ್ವವೂ ಬಲ್ಲಾದೆ. ನನ್ನ ನಿನ್ನ ಬಲ್ಲಲ್ಲಿ ಸರ್ವವೂ ಬಲ್ಲಾದೆ. ಅದು ಹ್ಯಾಂಗ ಬಲ್ಲಿ ಅಂದರೆ, ಮಾತಿಲೆ ಬಲ್ಲಲ್ಲಿ ನಿನ್ನ ವಾರ್ತಿ ಕೇಳಿ ಬಲ್ಲೆ, ನಿನ್ನ ಸನ್ನಿಧಿಗೆ ಹೋಗಿ ಬಲ್ಲೆ, ನಿನ್ನ ಕಂಡು ಬಲ್ಲೆ, ನಿನ್ನ ಕೂಡಿ ಬಲ್ಲೆ, ನಿನ್ನ ಸದ್ವಾಸನೆಗೊಂಡು ಬಲ್ಲೆ, ನಿನ್ನ ಸ್ನೇಹವ ಮಾಡಿ ಬಲ್ಲೆ, ನಿನ್ನ ಕೂಡುಂಡು ಬಲ್ಲೆ, ನಿನ್ನ ಸಮರಸಗೂಡಿ ಬಲ್ಲೆ, ನಿನ್ನ ಕೂಡಿದ ಪರಮಸುಖ ಪರಮ ಉಪಕಾರಕ್ಕೆ ಹೇಳಬಲ್ಲೆ, ವಿಸ್ತಾರವಾಗಿ ನಿನ್ನ ಹಾಡಿ ಬಲ್ಲೆ, ಒಂದೆ ಮಾಡಬಲ್ಲಲ್ಲಿ ಒಂಬತ್ತ ಮಾಡಬಲ್ಲೆ, ಈ ಒಂಬತ್ತುಮಾಡಿ ಬಲ್ಲಲ್ಲಿ ನಾ ಮೊದಲಾದ ಸರ್ವವು ನೀನೆಂಬುದು ಬಲ್ಲೆ. ಇನ್ನು ಎನ್ನ ಪ್ರಾಣ, ಮನ, ದೇಹ, ಭಾವ, ಅರವು, ಮನವು ನನ್ನ ಸರ್ವವು ನೀನಾದ ಮ್ಯಾಲೆ ನನಗೇನುಂಟು ? ಮತ್ರ್ಯಲೋಕದ ಮಹಾಗಣಂಗಳು, ಮಹಾನುಭಾವಿಗಳು, ನಿಜಜ್ಞಾನಿಗಳು, ಮಹಾ ಅರವಿಗಳು, ಎನಗೊಂದು ಹೆಸರಿಟ್ಟಿದ್ದರು. ಅದು ಹೆಸರು ನಿನಗೆ ಆಯಿತು. ಅದೇನು ಹೆಸರೆಂದರೆ ? ಸರ್ವವು ನೀನಾದಮ್ಯಾಲೆ, ಸತ್ಕರ್ಮ ದುಷ್ಕರ್ಮ ಎರಡು ನೀನೇ ಆದಿ. ನಾನು ಇನ್ನೇನು ಮಾಡಲಿ ಎಂದು ಆವ ಕರ್ಮವಿಲ್ಲದೆ ಸುಮ್ಮನೆ ಇರುತಿರಲು, ಅದ ಕಂಡು ಹೆಸರಿಟ್ಟಿದ್ದರು. ಈತ ಸತ್ಕರ್ಮಿಯೆಂಬುವೆ ಸತ್ಕರ್ಮಿ ಅಲ್ಲಾ, ಈತಗೆ ನಾವು ದುಷ್ಕರ್ಮಿಯೆಂಬುವೆ ದುಷ್ಕರ್ಮಿ ಅಲ್ಲಾ, ಪಾಪಿಯೆಂಬುವೆ ಪಾಪಿ ಅಲ್ಲಾ, ಪುಣ್ಯನೆಂಬುವೆ ಪುಣ್ಯನಲ್ಲಾ, ಆಸೆ ಅಲ್ಲಾ ನಿರಾಸೆ ಅಲ್ಲಾ, ಅಜ್ಞಾನಿ ಅಲ್ಲಾ ಸುಜ್ಞಾನಿ ಅಲ್ಲಾ, ಕಾಮಿ ಅಲ್ಲಾ ನಿಷ್ಕಾಮಿ ಅಲ್ಲಾ, ಕ್ರೋಧಿ ಅಲ್ಲಾ ನಿಷ್ಕ್ರೋಧಿ ಅಲ್ಲಾ, ಲೋಭಿ ಅಲ್ಲಾ ನಿರ್ಲೋಭಿ ಅಲ್ಲಾ, ಮೋಹಿ ಅಲ್ಲಾ ನಿರ್ಮೋಹಿ ಅಲ್ಲಾ, ಅಹಂಕಾರಿ ಅಲ್ಲಾ ನಿರಹಂಕಾರಿ ಅಲ್ಲಾ, ಮತ್ಸರಿ ಅಲ್ಲಾ ಮತ್ಸರರಹಿತನೇ ಅಲ್ಲಾ. ಯೋಗಿಯೇ ಅಲ್ಲಾ ಭೋಗಿಯೆ ಅಲ್ಲಾ. ತ್ಯಾಗಿಯೇ ಅಲ್ಲಾ ರಾಗಿಯೇ ಅಲ್ಲಾ, ಸುಖಿಯೇ ಅಲ್ಲಾ ದುಃಖಿಯೆ ಅಲ್ಲಾ, ಕ್ರಿಯಯುಕ್ತನೇ ಅಲ್ಲಾ ಕ್ರಿಯಾಬಾಹ್ಯನೇ ಅಲ್ಲಾ, ಭವಿಯೇ ಅಲ್ಲಾ ಭಕ್ತನೇ ಅಲ್ಲಾ, ಶಿವನೇ ಅಲ್ಲಾ ಜೀವನೇ ಅಲ್ಲಾ. ಅರುವೇ ಅಲ್ಲಾ ಮರವೆಯೇ ಅಲ್ಲಾ, ಸತ್ತವನೇ ಅಲ್ಲಾ ಬದುಕಿದವನೇ ಅಲ್ಲಾ, ಊರವನೇ ಅಲ್ಲಾ ಅಡವಿಯವನೇ ಅಲ್ಲಾ, ಗುರುವೇ ಅಲ್ಲಾ ಶಿಷ್ಯನೇ ಅಲ್ಲಾ, ಶಂಕರನೆ ಅಲ್ಲಾ ಕಿಂಕರನೇ ಅಲ್ಲಾ, ಹೇಳುವವನೇ ಅಲ್ಲಾ ಕೇಳುವವನೇ ಅಲ್ಲಾ, ಮೂಕನೇ ಅಲ್ಲಾ ಮಾತಾಡುವವನೇ ಅಲ್ಲಾ, ಹೆಣ್ಣೆ ಅಲ್ಲಾ ಗಂಡೇ ಅಲ್ಲಾ, ನಪುಂಸಕನೇ ಅಲ್ಲಾ ಅಂತರಪಿಶಾಚಿಯೇ ಅಲ್ಲಾ, ವಿಷಯಾತುರಿಯೇ ಅಲ್ಲಾ ವಿರಕ್ತನೇ ಅಲ್ಲ, ಇಹಲೋಕ ಇಚ್ಛಿಯೇ ಅಲ್ಲಾ ಪರಲೋಕ ಬಯಕಿಯೇ ಅಲ್ಲಾ. ಅದು ಎಂಬುವೆ ಅದು ಅಲ್ಲ, ಇದು ಎಂಬುವೆ ಇದು ಅಲ್ಲ. ಹಾಂಗೂ ಅಲ್ಲ ಹೀಂಗೂ ಅಲ್ಲ, ಅಂತೂ ಅಲ್ಲಾ ಇಂತೂ ಅಲ್ಲಾ, ಏನೂ ಅಲ್ಲಾ ಅಲ್ಲಾ ಅಲ್ಲಾ ಎಂದು ಹೆಸರಿಟ್ಟಿದ್ದರು ಎನಗೆ. ಇದು ಹೆಸರು ನಿನಗೆ ಆಯಿತು. ಅದೆಂತೆಂದೊಡೆ : ಅಲ್ಲಮಪ್ರಭು ಎಂಬುವ ನಾಮವು ನಿನಗೆ ಆಯಿತಲ್ಲದೆ ನನಗೆಲ್ಲಿಹದು ? ಅದು ಕಾರಣ ನನಗೆ ನಾಮವಿಲ್ಲಾ ರೂಪವಿಲ್ಲಾ ಕ್ರೀಯವಿಲ್ಲಾ ಬಯಕೆಯಿಲ್ಲಾ ಭವವಿಲ್ಲಾ ಆವುದೂ ಇಲ್ಲಾ. ಅದೇಕೆ ನೀ ಅಲ್ಲಾ ನಾ ಇಲ್ಲಾ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಭಾಜನದಲ್ಲಿ ಅಳವಟ್ಟು, ಗಡನಿಸಿದ, ಪದಾರ್ಥಂಗಳ ರೂಪ ತನ್ನ ಕರಣಂಗಳಲ್ಲಿ ಅವಧಾನ ನಿರೀಕ್ಷಣೆಯಿಂದ ನಿರೀಕ್ಷಿಸಿ, ಲಿಂಗಾವಧಾನ ನಿರೀಕ್ಷಣೆಯಿಂದ ನಿರೀಕ್ಷಿಸಿ, ಆ ಪದಾರ್ಥವನು ಲಿಂಗತನುವಿನ ಕರದಿಂದ ಮುಟ್ಟಿ, ಪದಾರ್ಥದ ಮೃದು ಕಠಿಣ ಶೀತ ಉಷ್ಣಂಗಳ ಸೋಂಕನು ಇಷ್ಟಲಿಂಗ ಮುಖದಲ್ಲಿ ಅರ್ಪಿಸಿ, ರೂಪವರ್ಪಿಸುವಡೆ ಇಷ್ಟಲಿಂಗಾರ್ಪಿತ. ಆ ಇಷ್ಟಲಿಂಗಮುಖದಿಂದರ್ಪಿತವಾದ ರೂಪಪ್ರಸಾದವನು ರುಚಿಕರದಿಂದ ಪದಾರ್ಥಮಂ ಮಾಡಿ, ಜಿಹ್ವೆಯೆಂಬ ಭಾಜನದಲ್ಲಿ ಮಧುರ ಆಮ್ಲ ಲವಣ ಕಟು ಕಷಾಯ ತಿಕ್ತವೆಂಬ ಷಡ್ವಿಧ ರುಚಿಯನು ಲಿಂಗಾವಧಾನ ಮನದಿಂದ ಜಿಹ್ವೆಯ ಚೈತನ್ಯವನ್ನರಿದು, ಹೃದಯಕಮಲಪೀಠಿಕೆಯಲ್ಲಿಹ ಪ್ರಾಣೇಶ್ವರನಾದ ಪ್ರಾಣಲಿಂಗಕ್ಕೆ ಕರಣಂಗಳು ಒಮ್ಮುಖವಾಗಿ ಅರ್ಪಿಸುವೊಡೆ ರುಚ್ಯರ್ಪಿತ ಆ ರುಚಿಪ್ರಸಾದವನು ಪರಿಣಾಮ ಭಾಜನದಲ್ಲಿ ಸಾವಧಾನ ಸಮರಸದಿಂದರ್ಪಿಸುವಲ್ಲಿ ತೃಪ್ತಿ ಲಿಂಗಮುಖದಿಂದ ತೃಪ್ತಿಪ್ರಸಾದಿ. ರೂಪಂ ಸಮರ್ಪಯೇ ಲಿಂಗೇ ರುಚಿಮಪ್ಯರ್ಪಯೇತ್ತಥಾ | ಉಭಯಾರ್ಪಣ ಹೀನಶ್ಯ ಪ್ರಸಾದೋ ನಿಷ್ಫಲೋ ಭವೇತ್ || ಇಂತೆಂದುದಾಗಿ, ಇದು ಕಾರಣ, ಪ್ರಸಾದದಾದಿ ಕುಳವ ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಶರಣರೆ ಬಲ್ಲರು.
--------------
ಹಾವಿನಹಾಳ ಕಲ್ಲಯ್ಯ
ನಾನಾ ಜನ್ಮಂಗಳ ತಿರುಗಿ, ಮನುಷ್ಯಜನ್ಮಕ್ಕೆ ಬಂದು, ಪಂಚೇಂದ್ರಿಯವುಳ್ಳ ಅರಿವಿನ ಪುರುಷನಾದ ಮೇಲೆ, ತಮ್ಮ ಆತ್ಮದೊಳಗಿಪ್ಪ ಜ್ಯೋತಿರ್ಲಿಂಗವನು ಕಂಡು, ಆರು ಲಿಂಗವನು ಕಂಡು, ಆರು ಲಿಂಗವನು ಅನುಭವಿಸಿ ನೋಡಿ, ಮೂವತ್ತಾರು ಲಿಂಗದ ಮುದ್ರೆಯನು ಮುಟ್ಟಿ, ಆಧ್ಯಾತ್ಮದ ನೀತಿಯನು ತಿಳಿದು, ಶುದ್ಧಾತ್ಮದೇಹಿಗಳಾದ ಮೇಲೆ ತಮ್ಮ ಜಾತಿಧರ್ಮದ ನೀತಿಶಾಸ್ತ್ರದ ನಿರ್ಣಯವನೆ ಕೇಳಿ, ತಮ್ಮ ಜಾತಿಧರ್ಮದ ವರ್ಣನೆ ಗುರುಹಿರಿಯರನು ಪೂಜೆಯ ಮಾಡಿ, ಹಸಿದು ಬಳಲಿಬಂದವರಿಗೆ ಅನ್ನವನು ನೀಡಿ, ಭಕ್ತಿಯನು ಮಾಡಿ, ಮುಕ್ತಿಯನ್ನು ಪಡೆದರೆ, ತನ್ನಷ್ಟಕ್ಕೇ ಆಯಿತು. ಆ ವಾರ್ತೆ ಕೀರ್ತಿಗಳು ಜಗಜಗಕ್ಕೆ ಕೀರ್ತಿ ಮೆರೆಯಿಪ್ಪುದು ಕಾಣಿರೊ. ಅದು ಎಂತೆಂದರೆ : ತಾನು ಹತ್ತು ಎಂಟು ಸಾವಿರ ಹಣ ಕಾಸುಗಳನು ಗಳಿಸಿ, ಹತ್ತಿರವಿಟ್ಟುಕೊಂಡು ಸತ್ತುಹೋದರೆ, ಆ ಬದುಕು ತನ್ನ ಹೆಂಡಿರು ಮಕ್ಕಳಿಗೆ ಬಾಂಧವರಿಗೆ ಆಯಿತಲ್ಲದೆ, ನೆರೆಮನೆಯವರಿಗೆ ಬಂದೀತೆ ? ಬರಲರಿಯದು. ಅದು ಎಂತೆಂದರೆ : ಇಂತೀ ತಮ್ಮ ಮನೆಯ ಹಿರಿಯರ ಸುದ್ದಿಯನು ಹಿಂದಿಟ್ಟುಕೊಂಡ ನೆರೆಮನೆಯ ಹಿರಿಯರ ಗರ್ವ, ಬಸವಣ್ಣ ದೊಡ್ಡಾತ, ಚೆನ್ನಬಸವಣ್ಣ ದೊಡ್ಡಾತ, ದೇವರ ದಾಸಿಮಯ್ಯ ದೊಡ್ಡಾತ. ಗಣಂಗಳು ದೊಡ್ಡವರೆಂದು ಬರಿಯ ಮಾತಿನ ಮಾಲೆಯ ಕೊಂಡು ಶಾಸ್ತ್ರವನು ಹಿಡಕೊಂಡು ಓದಿ ಹೇಳುವ ಮನುಜರಿಗೆಲ್ಲ ಭಕ್ತಿ ಅಳವಟ್ಟು, ಮುಕ್ತಿ ಸಾಧನವಾಯಿತೇ ? ಆಗಲರಿಯದು. ಅದು ಎಂತೆಂದರೆ : ಬಸವಣ್ಣ ಭಕ್ತಿಯನು ಮಾಡಿ, ಮುಕ್ತಿಯನು ಪಡೆದರೆ, ಬಸವಣ್ಣನ ಅಷ್ಟಕ್ಕೇ ಆಯಿತು. ಚೆನ್ನಬಸವಣ್ಣ ಭಕ್ಕಿಯನು ಮಾಡಿ, ಮುಕ್ತಿಯನು ಪಡೆದರೆ, ಚೆನ್ನಬಸವಣ್ಣನ ಅಷ್ಟಕ್ಕೇ ಆಯಿತು. ದೇವರದಾಸಿಮಯ್ಯ ಭಕ್ತಿಯನು ಮಾಡಿ, ಮುಕ್ತಿಯನು ಪಡೆದರೆ, ದೇವರದಾಸಿಮಯ್ಯನ ಅಷ್ಟಕ್ಕೆ ಆಯಿತು. ಗಣಂಗಳು ಭಕ್ತಿಯನು ಮಾಡಿ, ಮುಕ್ತಿಯನು ಪಡೆದರೆ, ಗಣಂಗಳ ಅಷ್ಟಕ್ಕೇ ಆಯಿತು. ನಾವು ಭಕ್ತಿಯನು ಮಾಡಿ, ಮುಕ್ತಿಯನು ಪಡೆದರೆ, ನಮ್ಮಷ್ಟಕ್ಕೇ ಆಯಿತು. ಅದು ಎಂತೆಂದರೆ : ಬಸವಣ್ಣ ಚೆನ್ನಬಸವಣ್ಣ ದೇವರದಾಸಿಮಯ್ಯ ಗಣಂಗಳೆಲ್ಲರು ದೊಡ್ಡವರೆಂದು ಅವರನ್ನು ಹಾಡಿ ಹರಸಿದರೆ, ಅವರು ನಮಗೆ ಕೊಟ್ಟು ಕೊಂಡು ನಡಸ್ಯಾರೆ ? ನಡೆಸಲರಿಯರು. ಅವರು ದೊಡ್ಡವರೆಂದರೆ, ಅವರು ತಮ್ಮಷ್ಟಕ್ಕೇ. ಅವರು ಚಿಕ್ಕವರಾದರೂ, ಅವರು ತಮ್ಮಷ್ಟಕ್ಕೇ. ನಾವು ದೊಡ್ಡವರಾದರೆ ಅವರಿಗೆ ನಾವು ಕೊಟ್ಟು ಕೊಂಡು ನಡೆಸೇವೆ ? ನಡೆಸಲರಿಯೆವು. ನಾವು ದೊಡ್ಡವರಾದರೆ ನಮ್ಮಷ್ಟಕ್ಕೇ. ವಾನು ಚಿಕ್ಕವರಾದರೆ ನಮ್ಮಷ್ಟಕ್ಕೇ. ಎದು ಎಂತೆಂದರೆ : ಹಿಂದೆ ಹುಟ್ಟಿದ ಹಿರಿಯ ಅಣ್ಣಗಳಾದರೇನು, ಮುಂದೆ ಹುಟ್ಟಿದ ಕಿರಿಯ ತಮ್ಮನಾದರೇನು, ತನ್ನ ಸುದ್ದಿಯನು ತಾನು ಅರಿತು, ಅನ್ಯರ ಹಂಗು ಹರಿದು, ಒಂಕಾರ ಪರಬ್ರಹ್ಮದ ಧ್ಯಾನವನು ಮಾಡಿಕೊಂಡು ಇರಬಲ್ಲರೆ, ಆತನೀಗ ತನ್ನಷ್ಟಕ್ಕೇ. ಹಿರಿಯಾತಂಗೆ ಭಕ್ತಿ ಅಳವಟ್ಟು, ಮುಕ್ತಿ ಸಾಧನವಾಯಿತು ಕಾಣಿರೊ. ಇಂತೀ ತನ್ನ ಸುದ್ದಿಯ ತಾನು ಅರಿಯದೆ, ನೆರೆಮನೆಯ ಹಿರಿಯರು ಘನವೆಂದು ಕೊಡಾಡುವ ಮರಿ ನಾಯಿಕುನ್ನಿಗಳಿಗೆಲ್ಲ ಭಕ್ತಿ ಅಳವಟ್ಟು, ಮುಕ್ತಿ ಸಾಧನವಾಗಲರಿಯದೆಂದು ಇಕ್ಕಿದೆನು ಮುಂಡಿಗೆಯ. ಇದನೆತ್ತುವರುಂಟೇನೊ, ದೇವಧ್ವಜ ಮೃತ್ಯುಂಜಯನ ಭಾವದೊಲ್ಲಭ ಮುದ್ದನೂರೇಶಾ ?
--------------
ಸರ್ವೇಶ್ವರಲಿಂಗ
-->