ಅಥವಾ

ಒಟ್ಟು 98 ಕಡೆಗಳಲ್ಲಿ , 38 ವಚನಕಾರರು , 87 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀರಿಲ್ಲದ ಒರಳಿಂಗೆ ನೆಳಲಿಲ್ಲದ ಒನಕೆ ! ರೂಹಿಲ್ಲದ ನಾರಿಯರು ಬೀಜವಿಲ್ಲದಕ್ಕಿಯ ತಳಿಸುತ್ತಲಿ ಬಂಜೆಯ ಮಗನ ಜೋಗುಳವಾಡುತ್ತೈದಾರೆ, ಉರಿಯ ಚಪ್ಪರವನಿಕ್ಕಿ_ ಗುಹೇಶ್ವರನ ಕಂದನು ಲೀಲೆಯಾಡಿದನು !
--------------
ಅಲ್ಲಮಪ್ರಭುದೇವರು
ಆಳುದ್ದಿಯದೊಂದು ಬಾವಿ ಆಕಾಶದ ಮೇಲೆ ಹುಟ್ಟಿತ್ತು ನೋಡಾ ! ಆ ಬಾವಿಯ ನೀರನೊಂದು ಮೃಗ ಬಂದು ಕುಡಿಯಿತ್ತು. ಕುಡಿಯ ಬಂದ ಮೃಗವು ಆ ನೀರೊಳಗೆ ಮುಳಿಗಿದಡೆ ಉರಿಯ ಬಾಣದಲೆಚ್ಚು ತೆಗೆದೆ ನೋಡಾ ! ಒಂದೆ ಬಾಣದಲ್ಲಿ ಸತ್ತ ಮೃಗವು, ಮುಂದಣ ಹೆಜ್ಜೆಯನಿಕ್ಕಿತ್ತ ಕಂಡೆ ! ಅಂಗೈಯೊಳಗೊಂದು ಕಂಗಳು ಮೂಡಿ, ಸಂಗದ ಸುಖವು ದಿಟವಾಯಿತ್ತು ! ಲಿಂಗಪ್ರಾಣವೆಂಬುದರ ನಿರ್ಣಯವನು ಇಂದು ಕಂಡೆನು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ವೇಷವ ಹೊತ್ತು , ಆಶೆ ರೋಷವ ಬಿಡದೆ, ದೇಶವ ತಿರುಗಿ, ಹೊರವೇಷದ ವಿಭೂತಿ ರುದ್ರಾಕ್ಷಿ ಕಾವಿ ಕಾಷಾಯಾಂಬರವ ಧರಿಸಿ ಫಲವೇನು? ಕಾಮ ಕೆಡದು, ಕ್ರೋಧ ಬಿಡದು, ಲೋಭ ಹಿಂಗದು, ಮೋಹ ನಿಲ್ಲದು, ಮದ ಹೆರೆಸಾರದು, ಮತ್ಸರ ಬೆಂದುಹೋಗದು. ಇವೆಲ್ಲ ಸಹಿತ ಜಂಗಮಭಕ್ತರೆಂದು ಸುಳಿವವರ ಕಂಡು ನಾಚಿತ್ತು ಎನ್ನ ಮನ. ಭಕ್ತಜಂಗಮ ಘನವನೇನೆಂದು ಉಪಮಿಸುವೆ ? ರೂಪಿನ ಹಾಗೆ, ನೆಳಲಿನ ಹಾಗೆ, ದೇಹದ ಹಾಗೆ, ಪ್ರಾಣದ ಹಾಗೆ, ಭಾವದ ಹಾಗೆ, ನಿರ್ಭಾವದ ಹಾಗೆ, ಉರಿಯ ಹಾಗೆ, ಕರ್ಪುರದ ಹಾಗೆ, ಆವಿಯ ಹಾಗೆ, ನೀರ ಹಾಗೆ, ಎರಡೊಂದಾದರೆ ತೆರಹಿಲ್ಲ. ಆ ನಿಲುವಿಂಗೆ ನಮೋ ನಮೋ ಎನುತಿರ್ದೆ ಕಾಣಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಆಯತವಾದ ಆರು ಗ್ರಾಮಕ್ಕೆ ಅರುವರು ತಳವಾರನಿಕ್ಕಿದ ನಮ್ಮರಸು. ಆ ಅರಸಿಂಗೆ ಕಟ್ಟಿತ್ತು ತೊಟ್ಟಿಯ ಮುಖಸಾಲೆಯ ಮಂಟಪ. ಆ ತಳವಾರರಿಗೆ ಕಟ್ಟಿತ್ತು ಕೈಸಾಲೆಯ ಮಂಟಪ. ಆ ಒಬ್ಬೊಬ್ಬ ತಳವಾರಂಗೆ ಆರಾರು ಗೆಣೆಯರ ಕೂಡಿಸಿ ಕೊಡಲು, ಆ ಗೆಣೆಯರು ತಮಗೊಬ್ಬೊಬ್ಬರಿಗೆ ಆರಾರು ಸಖರ ಕೂಡಿಕೊಂಡ ಪರಿಯ ನೋಡಾ. ಆ ಸಖರು ಆ ಗೆಣೆಯರೊಳಡಗಿ, ಆ ಗೆಣೆಯರು ಆ ತಳವಾರರೊಳಡಗಿ, ಆ ತಳವಾರರ ಕಂಡು ಅರಸು ತನ್ನ ಹೆಂಡತಿಯ ತಬ್ಬಿಕೊಂಡು ಉರಿಯ ಪೊಗಲಾಗಿ, ಎನ್ನ ಗಂಡ ಕಪಿಲಸಿದ್ಧಮಲ್ಲಿಕಾರ್ಜುನನ ನಾ ಕೇಳಲು ಬಯಲ ಬಿತ್ತಿ ಎಂದನು
--------------
ಸಿದ್ಧರಾಮೇಶ್ವರ
ಭಕ್ತಂಗೆ ಸ್ಪರ್ಶನ ವಿಷಯವಳಿದು ಮಾಹೇಶ್ವರಂಗೆ ಅಪ್ಪು ವಿಷಯವಳಿದು ಪ್ರಸಾದಿಗೆ ರುಚಿ ವಿಷಯವಳಿದು ಪ್ರಾಣಲಿಂಗಿಗೆ ಉಭಯದ ಭೇದ ವಿಷಯವಳಿದು ಶರಣಂಗೆ ಸುಖದುಃಖ ವಂದನೆ ನಿಂದೆ ಅಹಂಕಾರ ಭ್ರಮೆ ವಿಷಯವಳಿದು ಐಕ್ಯಂಗೆ ಇಂತೀ ಐದರ ಭೇದದಲ್ಲಿ ಹಿಂದಣ ಮುಟ್ಟು ಮುಂದಕ್ಕೆ ತಲೆದೋರದೆ ಮುಂದಣ ಹಿಂದಣ ಸಂದೇಹದ ವಿಷಯ ನಿಂದು ಕರ್ಪುರವುಳ್ಳನ್ನಕ್ಕ ಉರಿಯ ಭೇದ ಉರಿವುಳ್ಳನ್ನಕ್ಕ ಕರ್ಪುರದಂಗ. ಉಭಯ ನಿರಿಯಾಣವಾದಲ್ಲಿ ಐಕ್ಯಸ್ಥಲ ನಾಮನಿರ್ಲೇಪ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಗಾಜಿನ ಗೋಡೆಯ ಸುಣ್ಣ ವೇದ್ಥಿಸಬಲ್ಲುದೆ ? ನಾಗರಹೆಡೆಯ ಚಿಕ್ಕೆರ ಬಲ್ಲುದೆ ? ಉರಿಯ ಪುತ್ಥಳಿಯ ಅರಗು ಮುಟ್ಟಿ ಅಪ್ಪಬಲ್ಲುದೆ ? ಲಿಂಗಮಯ ಸಿರಿವಂತರ ಅಂಗವ ಸಂಗಿಸಬಲ್ಲವೆ ಇಂದ್ರಿಯಂಗಳು, ಇಂತೀ ಗುಣವ ಹಿಂಗಿ, ಲಿಂಗವೆ ತಾನಾಗಿಪ್ಪ ನಿಃಕಳಂಕ ಮಲ್ಲಿಕಾರ್ಜುನನ ?
--------------
ಮೋಳಿಗೆ ಮಾರಯ್ಯ
ಉದಕದ ಕೊಡನ ಹೊತ್ತಾಡುವ ಗೊರವಿತಿಯ ಕೈಯಲ್ಲಿ ಕಂಕಣ, ಉಲಿವ ಗೆಜ್ಜೆ ಚರಣದಲ್ಲಿ. ಉರಿಯ ಗೊರವನ ನೆರೆವ ಭರವಸದಿಂದ ಬಂದಿರಲು ಬಹಳ ಮುಳ್ಳಡ್ಡಲಾದವಲ್ಲಾ ! ಕಂಕಣದುಲುಹು ನಂದಿ, ಕಣ್ಣುದೆರೆದಾ ಮುಳ್ಳಳಿಯಲು ಕಾಡುಗಿಚ್ಚೆದ್ದು ಕರಡವ ಸುಟ್ಟಂತೆ ಪ್ರಾಣಗುಣ ಪ್ರಧ್ವಂಸಕಂಗೆ ಅನ್ಯೋನ್ಯ ಭಾವತ್ರಯವುಂಟೆ ? ಶರಣಲಿಂಗಕ್ಕೆ ಸಂದಿಲ್ಲ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಮಾಯದ ಕೈಯಲಿ ಓಲೆ ಕÀಂಠವ ಕೊಟ್ಟಡೆ, ಲಗುನ ವಿಗುನವ ಬರೆಯಿತ್ತು ನೋಡಾ ಅರಗಿನ ಪುತ್ಥಳಿಗೆ ಉರಿಯ ಸೀರೆಯನುಡಿಸಿದಡೆ, ಅದು ಸಿರಿಯ ಸಿಂಗಾರವಾಯಿತ್ತು ನೋಡಾ. ಅಂಬರದೊಳಗಾಡುವ ಗಿಳಿ ಪಂಜರದೊಳಗಣ ಬೆಕ್ಕ ನುಂಗಿ ರಂಭೆಯ ತೋಳಿಂದ ಅಗಲಿತ್ತು ನೋಡಾ_ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅರಗಿನ ದೇಗುಲದಲ್ಲಿ ಒಂದು ಉರಿಯ ಲಿಂಗವ ಕಂಡೆ. ಮತ್ತೆ ದೇವರ ಪೂಜಿಸುವರಾರೂ ಇಲ್ಲ. ಉತ್ತರಾಪಥದ ದಶನಾಡಿಗಳಿಗೆ, ಸುತ್ತಿಮುತ್ತಿದ ಮಾಯೆ ಎತ್ತಲಿಕೆ ಹೋಯಿತ್ತು ? ಮರನೊಳಗಣ ಕಿಚ್ಚು ಮರನ ಸುಟ್ಟುದ ಕಂಡೆ ! ಗುಹೇಶ್ವರನೆಂಬ ಲಿಂಗ ಅಲ್ಲಿಯೆ ನಿಂದಿತ್ತು
--------------
ಅಲ್ಲಮಪ್ರಭುದೇವರು
ನಿರ್ವಿಕಾರಿಯ ಭಾವದಲ್ಲಿ ತೋರಿದ ಗರ್ವ ಬಿಳಿಯ ಮದಗಜವ ಕಳೆವರೆ ಅರಳವಲ್ಲ ನೋಡಾ. ಬಿಳಿಯ ಮದಗಜದ ಶಿರವ ಉರಿಯ ಚರಣದಲ್ಲಿ ಮೆಟ್ಟಿ, ನಿರವನಯನನೆರೆದು ನಿಜಲಿಂಗೈಕ್ಯನಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಪರುಷಮೃಗ ಬಂದು ನಿಂದಲ್ಲಿ, ಜನ್ನ ಜಯವಾಗದೆ ಧರ್ಮಂಗೆ ? ಲಿಂಗಜಂಗಮಭಕ್ತಿ ಪ್ರಜ್ವಲಿಸದೆ ಸಿರಿಯಾಳಂಗೆ ? ಪ್ರಸಾದವ ಬಿಬ್ಬಿಬಾಚಯ್ಯ ಮೆರವುತ ಬಪ್ಪಲ್ಲಿ, ಅರಿಯದೆ ನಿಂದಿಸಿದಡೆ, ಹರಿದು ಹತ್ತದೆ ಉರಿಯ ನಾಲಗೆ ಗ್ರಾಮವ? ಹರಸಿತ್ತ ನಿರೂಪವಿಡಿ ಮಾರ್ಗದಲ್ಲಿ ಮಾರಾರಿಯ ಶರಣರು ಬಂದು ನಿಂದಲ್ಲಿ ಅರ್ಧಗೃಹಂಗಳುಳಿಯವೆ ? ಸದ್ಯೋಜಾತನ ಶರಣರ ಧರೆಯನುರಿಯ ನಾಲಗೆಯ ನೀಡಿ, ಕಲ್ಯಾಣವನಾಳುವ ಬಿಜ್ಜಳನ ಮುಟ್ಟಿನಿಂದಡೆ, ಹೋ ಹೋ! ಇದ್ದಂತೆ ಬರಬೇಕೆಂದಡೆ, ಕೋಪಾಟೋಪವಂ ಬಿಟ್ಟು ಕಳದು, ಸಾಮಾನ್ಯವಾಗದೆ ? ಶಿವನೊಲಿದ ಸಿದ್ಧರಿಗೆ ಅಂಗದ ಮೇಲೆ ಲಿಂಗವವಿಲ್ಲದವನು ಅಂಗಳವನು ಮೆಟ್ಟಲಾಗದೆಂದಡೆ, ಉರಿಯ ಜ್ವಾಲೆಯ ಬಿಟ್ಟಡೆ, ಪರಿಹರಿಸದೆ ಕುಂಚಿಗೆಯ ತುದಿಯಲ್ಲಿ? ಪರಮನೊಲಿದ ಶರಣರು ಸ್ವತಂತ್ರಮಹಿಮರು. ಅದಂತೆಂದಡೆ: ಅವರೆಂದಂತೆ ಅಹುದೆಂದಡೆ, ಅಂಗದ ಮೇಲೆ ಲಿಂಗಪ್ರತಿಷ್ಠೆಯಾಗದೆ, ಶಿವಯೋಗಿ ಸಿದ್ಧರಾಮಯ್ಯಂಗೆ ಸಕಲಧೂರ್ತದುರಿತಂಗಳು ಬಿಟ್ಟೋಡುತ್ತಿದ್ದವು, ಸಕಳೇಶ್ವರದೇವಾ, ನಿಮ್ಮ ಶರಣನ ದೇವತ್ವಕ್ಕಂಜಿ.
--------------
ಸಕಳೇಶ ಮಾದರಸ
ಕಣ್ಣಿಲ್ಲದ ಕುರುಡ ಕನ್ನಡಿಯ ನೋಡಿ ಮೂರು ಕಣ್ಣ ಕಂಡ. ಒಂದು ಧರೆಯ ಕಣ್ಣು, ಒಂದು ಸಿರಿಯ ಕಣ್ಣು, ಒಂದು ಉರಿಯ ಕಣ್ಣು. ಉರಿ ಸಿರಿಯ ನುಂಗಿ, ಸಿರಿ ಧರೆಯ ನುಂಗಿ, ಧರೆ ಅರುಹಿರಿಯರ ನುಂಗಿತ್ತು. ಆ ಗುಣವನರಿಯಬೇಕು, ಸದಾಶಿವಮೂರ್ತಿಲಿಂಗವ ಭೇದಿಸಬೇಕು
--------------
ಅರಿವಿನ ಮಾರಿತಂದೆ
ಉರಿಯ ಸೀರೆಯನುಟ್ಟು, ಕಡೆಸೆರಗ ಬಿಡುಬೀಸಿ, ಮಡದಿ ತನ್ನ ಕೆಳದಿಯರನೊಡಗೊಂಡು ಆಡುತ್ತಿರೆ, ಪತಿ ಬಂದು ಮುಡಿಯ ಹಿಡಿದು ಸೀರೆಯನುಗಿಯೆ, ಮಡದಿಯೊಡಗೂಡುತ್ತಿರೆ; ಸಮರಸದಲ್ಲಿ ಸತಿಯಳಿದು ಪತಿಯಾಗಿ, ಪತಿಯಳಿದು ನಿಃಪತಿಯಾಗಿ, ಸತಿ ಪತಿ ನಿಃಪತಿ- ಎಂಬ ತ್ರಿವಿಧವು ಏಕಾರ್ಥವಾದ ಕೂಡಲಚೆನ್ನಸಂಗಯ್ಯನಲ್ಲಿ, ಬಸವಣ್ಣನ ಪಾದಕ್ಕೆ ನಮೋ ನಮೋ ಎನುತಿರ್ದೆನು
--------------
ಚನ್ನಬಸವಣ್ಣ
ಮನೆಯೊಳಗಣ ಜ್ಯೋತಿ ಮನೆಯ ಸುಟ್ಟು, ಮನೆ ಉಳಿದಿತ್ತು, ಅರಣ್ಯಸುಟ್ಟು ಅರಣ್ಯದ ಪಕ್ಷಿಯ ಕಾಲು ಸುಟ್ಟು ನಡೆಯಿತ್ತು, ತಲೆ ಸುಟ್ಟು ಕಣ್ಣು ಉಳಿದಿತ್ತು. ಮೈಸುಟ್ಟು ಪ್ರಾಣ ಉಳಿದಿತ್ತು, ಉಭಯ ರೆಕ್ಕೆ ಸುಟ್ಟು ಉರಿಯ ನುಂಗಿ ಗಗನಕ್ಕೆ ಹಾರಿ, ಮೇಲುಗಿರಿಯಲ್ಲಿ ಅಡಗಿತ್ತು. ಅದು ಅಡಗಿದ ಠಾವಿನಲ್ಲಿ ಅಡಗಬಲ್ಲರೆ ಭಕ್ತನೆಂಬೆ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇವಳ (ಅವಳ?) ನೋಟವೆನ್ನ ಮತ್ರ್ಯಕ್ಕೆ ತಂದಿತ್ತಯ್ಯಾ. ಇವಳ ಕೂಟ ಸವಿಯನವಗಡಿಸಿ ಕಾಡಿತ್ತಯ್ಯಾ. ಇವಳ ಬೇಟದ ಬೇರ ಹರಿದಲ್ಲಿ ತ್ರಿಪುರ ಹಾಳಾದುದ ಕಂಡೆನು. ಉರಿಯ ಮೇಲೆ ಉರಿ ಎರಗಿದಡೆ ತಂಪು ಮೂಡಿತ್ತ ಕಂಡೆನು. ಕರಿಯ ಬೇಡನ ಕಸ್ತುರಿಯ ಮೃಗ ನುಂಗಿದಡೆ ಹಿರಿಯ ಹೆಂಡತಿ ಓಲೆಗಳೆದುದ ಕಂಡೆನು. ಕಾರಿರುಳ ಕೋಟೆಯಲಿ ಕಲಿಯ ಕಾಳೆಗವ ಗೆಲಿದು ಹೂಳಿರ್ದ ನಿಧಾನವ ಕಂಡೆನು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->