ಅಥವಾ

ಒಟ್ಟು 49 ಕಡೆಗಳಲ್ಲಿ , 17 ವಚನಕಾರರು , 43 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಕ್ಷೆ ಭಕ್ತನ ಸೋಂಕು. ಮುಖಸಜ್ಜೆ ಮಾಹೇಶ್ವರನ ಸೋಂಕು. ಕರಸ್ಥಲ ಪ್ರಾಣಲಿಂಗಿಯ ಸೋಂಕು. ಉತ್ತಮಾಂಗ ಶರಣನ ಸೋಂಕು. ಅಮಳೋಕ್ಯ ಐಕ್ಯನ ಸೋಂಕು. ಭಕ್ತಂಗೆ ಆಚಾರಲಿಂಗ, ಮಾಹೇಶ್ವರಂಗೆ ಸದಾಚಾರಲಿಂಗ, ಪ್ರಸಾದಿಗೆ ವಿಚಾರಲಿಂಗ, ಪ್ರಾಣಲಿಂಗಿಗೆ ಸರ್ವವ್ಯವಧಾನ ಸನ್ನದ್ಧಲಿಂಗ, ಶರಣಂಗೆ ಅವಿರಳ ಸಂಪೂರ್ಣಲಿಂಗ, ಐಕ್ಯಂಗೆ ಪರಮ ಪರಿಪೂರ್ಣಲಿಂಗ ಇಂತೀ ಆರುಸ್ಥಲ ಷಟ್ಕರ್ಮ ಷಡ್ವಿಧಲಿಂಗ ಭೇದಂಗಳಲ್ಲಿ ಮುಂದಣ ವಸ್ತುವೊಂದುಂಟೆಂದು ಸಂಗವ ಮಾಡುವುದಕ್ಕೆ ಆರಂಗದ ಪಥಗೂಡಿ ಕಾಬಲ್ಲಿ ವಸ್ತುವನೊಡಗೂಡುವುದೊಂದೆ ಭೇದ. ಇಂತೀ ಸ್ಥಲವಿವರ ಕೂಟಸಂಬಂಧ. ಏಕಮೂರ್ತಿ ತ್ರಿವಿಧಸ್ಥಲವಾಗಿ, ತ್ರಿವಿಧಮೂರ್ತಿ ಷಡುಸ್ಥಲವಾಗಿ ಮಿಶ್ರಕ್ಕೆ ಮಿಶ್ರ ತತ್ವಕ್ಕೆ ತತ್ವ ಬೊಮ್ಮಕ್ಕೆ ಪರಬ್ರಹ್ಮವನರಿತಡೂ, ಹಲವು ಹೊಲಬಿನ ಪಥದಲ್ಲಿ ಬಂದಡೂ ಪಥ ಹಲವಲ್ಲದೆ ನಗರಕ್ಕೆ ಒಂದೆ ಒಲಬು. ಇಂತೀ ಸ್ಥಲವಸ್ತುನಿರ್ವಾಹ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಭಕ್ತನಲ್ಲಿಯ ಐಕ್ಯಂಗೆ ಪೃಥ್ವಿಯಲ್ಲಿಯ ಆತ್ಮನೆ ಅಂಗ, ಆ ಅಂಗಕ್ಕೆ ಸುಚಿತ್ತದಲ್ಲಿಯ ಭಾವವೇ ಹಸ್ತ. ಆ ಹಸ್ತಕ್ಕೆ ಆಚಾರಲಿಂಗದಲ್ಲಿಯ ಮಹಾಲಿಂಗವೇ ಲಿಂಗ. ಆ ಮಹಾಲಿಂಗಮುಖದಲ್ಲಿ ಎಲ್ಲಾ ಗಂಧದ್ರವ್ಯವನು ಸಮರ್ಪಣವಂ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಭಕ್ತಂಗೆ ಸ್ಪರ್ಶನ ವಿಷಯವಳಿದು ಮಾಹೇಶ್ವರಂಗೆ ಅಪ್ಪು ವಿಷಯವಳಿದು ಪ್ರಸಾದಿಗೆ ರುಚಿ ವಿಷಯವಳಿದು ಪ್ರಾಣಲಿಂಗಿಗೆ ಉಭಯದ ಭೇದ ವಿಷಯವಳಿದು ಶರಣಂಗೆ ಸುಖದುಃಖ ವಂದನೆ ನಿಂದೆ ಅಹಂಕಾರ ಭ್ರಮೆ ವಿಷಯವಳಿದು ಐಕ್ಯಂಗೆ ಇಂತೀ ಐದರ ಭೇದದಲ್ಲಿ ಹಿಂದಣ ಮುಟ್ಟು ಮುಂದಕ್ಕೆ ತಲೆದೋರದೆ ಮುಂದಣ ಹಿಂದಣ ಸಂದೇಹದ ವಿಷಯ ನಿಂದು ಕರ್ಪುರವುಳ್ಳನ್ನಕ್ಕ ಉರಿಯ ಭೇದ ಉರಿವುಳ್ಳನ್ನಕ್ಕ ಕರ್ಪುರದಂಗ. ಉಭಯ ನಿರಿಯಾಣವಾದಲ್ಲಿ ಐಕ್ಯಸ್ಥಲ ನಾಮನಿರ್ಲೇಪ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯರೆಂಬ ಷಡ್ವಿಧಮೂರ್ತಿಗಳಿಗೂ ಷಡ್ವಿಧಲಿಂಗವ ಕಂಡೆನಯ್ಯ ಅದು ಹೇಗೆಂದಡೆ: ಭಕ್ತಂಗೆ ಆಚಾರಲಿಂಗ, ಮಹೇಶ್ವರಂಗೆ ಗುರುಲಿಂಗ, ಪ್ರಸಾದಿಗೆ ಶಿವಲಿಂಗ, ಪ್ರಾಣಲಿಂಗಿಗೆ ಜಂಗಮಲಿಂಗ, ಶರಣಂಗೆ ಪ್ರಸಾದಲಿಂಗ, ಐಕ್ಯಂಗೆ ಮಹಾಲಿಂಗ. ಈ ಷಡ್ವಿಧಲಿಂಗಕೂ ಷಡ್ವಿಧಶಕ್ತಿಯ ಕಂಡೆನಯ್ಯ ಅದು ಹೇಗೆಂದಡೆ: ಆಚಾರಲಿಂಗಕ್ಕೆ ಕ್ರಿಯಾಶಕ್ತಿ, ಗುರುಲಿಂಗಕ್ಕೆ ಜ್ಞಾನಶಕ್ತಿ, ಶಿವಲಿಂಗಕ್ಕೆ ಇಚ್ಚಾಶಕ್ತಿ, ಜಂಗಮಲಿಂಗಕ್ಕೆ ಆದಿಶಕ್ತಿ, ಪ್ರಸಾದಲಿಂಗಕ್ಕೆ ಪರಾಶಕ್ತಿ, ಮಹಾಲಿಂಗಕ್ಕೆ ಚಿಚ್ಚಕ್ತಿ. ಈ ಷಡ್ವಿಧಶಕ್ತಿಯರಿಗೂ ಷಡ್ವಿಧಭಕ್ತಿಯ ಕಂಡೆನಯ್ಯ. ಅದು ಹೇಗೆಂದಡೆ: ಕ್ರಿಯಾಶಕ್ತಿಗೆ ಸದ್ಭಕ್ತಿ, ಜ್ಞಾನಶಕ್ತಿಗೆ ನೈಷ್ಠಿಕಭಕ್ತಿ, ಇಚ್ಚಾಶಕ್ತಿಗೆ ಸಾವಧಾನ ಭಕ್ತಿ, ಆದಿಶಕ್ತಿಗೆ ಅನುಭಾವಭಕ್ತಿ, ಪರಾಶಕ್ತಿಗೆ ಸಮರತಿಭಕ್ತಿ, ಚಿತ್‍ಶಕ್ತಿಗೆ ಸಮರಸಭಕ್ತಿ. ಈ ಷಡ್ವಿಧ ಭಕ್ತಿಗೆ ಷಡ್ವಿಧಹಸ್ತವ ಕಂಡೆನಯ್ಯ. ಅದು ಹೇಗೆಂದಡೆ: ಸದ್ಭಕ್ತಿಗೆ ಸುಚಿತ್ತಹಸ್ತ, ನೈಷ್ಠಿಕಭಕ್ತಿಗೆ ಸುಬುದ್ಧಿಹಸ್ತ, ಸಾವಧಾನಭಕ್ತಿಗೆ ನಿರಹಂಕಾರಹಸ್ತ, ಅನುಭಾವ ಭಕ್ತಿಗೆ ಸುಮನಹಸ್ತ, ಸಮರತಿಭಕ್ತಿಗೆ ಸುಜ್ಞಾನಹಸ್ತ, ಸಮರಸಭಕ್ತಿಗೆ ನಿರ್ಭಾವಹಸ್ತ. ಈ ಷಡ್ವಿಧ ಹಸ್ತಂಗಳಿಗೂ ಷಡ್ವಿಧಕಲೆಗಳ ಕಂಡೆನಯ್ಯ. ಅದು ಹೇಗೆಂದಡೆ: ಸುಚಿತ್ತಹಸ್ತಕ್ಕೆ ನಿವೃತ್ತಿಕಲೆ, ಸುಬುದ್ಧಿ ಹಸ್ತಕ್ಕೆ ಪ್ರತಿಷ್ಠಾಕಲೆ, ನಿರಹಂಕಾರಹಸ್ತಕ್ಕೆ ವಿದ್ಯಾಕಲೆ, ಸುಮನಹಸ್ತಕ್ಕೆ ಶಾಂತಿಕಲೆ, ಸುಜ್ಞಾನಹಸ್ತಕ್ಕೆ ಶಾಂತ್ಯತೀತಕಲೆ, ನಿರ್ಭಾವಹಸ್ತಕ್ಕೆ ಶಾಂತ್ಯತೀತೋತ್ತರಕಲೆ, ಈ ಷಡ್ವಿಧಕಲೆಗಳಿಗೂ ಷಡ್ವಿಧ[ಜ್ಞಾನ]ಸಂಬಂಧವ ಕಂಡೆನಯ್ಯ. ಅದು ಹೇಗೆಂದಡೆ: ನಿವೃತ್ತಿಕಲೆಗೆ ಶುದ್ಧಜ್ಞಾನವೇ ಸಂಬಂಧ, ಪ್ರತಿಷ್ಠಾಕಲೆಗೆ ಬದ್ಧಜ್ಞಾನವೇ ಸಂಬಂಧ, ವಿದ್ಯಾಕಲೆಗೆ ನಿರ್ಮಲಜ್ಞಾನವೇ ಸಂಬಂಧ, ಶಾಂತಿಕಲೆಗೆ ಮನಜ್ಞಾನವೇ ಸಂಬಂಧ, ಶಾಂತ್ಯತೀತಕಲೆಗೆ ಸುಜ್ಞಾನವೇ ಸಂಬಂಧ, ಶಾಂತ್ಯತೀತೋತ್ತರಕಲೆಗೆ ಪರಮಜ್ಞಾನವೇ ಸಂಬಂಧ. ಈ ಷಡ್ವಿಧಸಂಬಂಧಗಳಿಂದತ್ತ ಮಹಾಘನ ಅಗಮ್ಯ ಅಗೋಚರ ಅಪ್ರಮಾಣ ನಿರಾಕುಳ ನಿರಂಜನಲಿಂಗ ತಾನೇ ನೋಡಾ ಂ್ಞhiೀಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನಿರಾಮಯ ಐಕ್ಯಂಗೆ ನಿರಾಮಯವೆ ಅಂಗ, ನಿರಾಮಯವೆ ಹಸ್ತ, ನಿರಾಮಯವೆ ಮಹಾಲಿಂಗ, ನಿರಾಮಯವೆಂಬ ಮುಖದಲ್ಲಿ ನಿರಾಮಯಾನಂದವೆಂಬ ಸುಖವನು ಸಮರ್ಪಣವ ಮಾಡಿ, ತೃಪ್ತಿಯನೆ ಭೋಗಿಸುವನು ನೋಡಾ. ಭೋಗಿಸಿ ನಿರಾಮಯಾತೀತವೆಂಬ ನಿರ್ವಯಲನೈದಿದನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆತ್ಮವೆ ಅಂಗವಾದ ಐಕ್ಯಂಗೆ ಸದ್‍ಭಾವನೆ ಹಸ್ತ. ಆ ಹಸ್ತಕ್ಕೆ ಚಿಚ್ಛಕ್ತಿ , ಆ ಶಕ್ತಿಗೆ ಮಹಾಲಿಂಗ, ಆ ಲಿಂಗಕ್ಕೆ ಹೃದಯೇಂದ್ರಿಯವೆ ಮುಖ, ಆ ಮುಖಕ್ಕೆ ಸುತೃಪ್ತಿ ಪದಾರ್ಥ; ಆ ಪದಾರ್ಥವನು ಹೃದಯದಲ್ಲಿಹ ಮಹಾಲಿಂಗಕ್ಕೆ ಸಮರಸಭಕ್ತಿಯಿಂದರ್ಪಿಸಿ, ಆ ಪದಾರ್ಥವನು ಹೃದಯಲ್ಲಿಹ ಮಹಾಲಿಂಗಕ್ಕೆ ಸಮರಸ ಭಕ್ತಿಯಿಂದರ್ಪಿಸಿ ಆ ಸುತೃಪ್ತಿಪ್ರಸಾದವನು ಪಡೆದು ಸುಖಿಸುವಾತನೆ ಐಕ್ಯನು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಭಕ್ತಂಗೆ ಮೂರು ಗುಣ, ಮಾಹೇಶ್ವರಂಗೆ ಆರು ಗುಣ, ಪ್ರಸಾದಿಗೆ ಎಂಟು ಗುಣ, ಪ್ರಾಣಲಿಂಗಿಗೆ ಹತ್ತು ಗುಣ, ಶರಣಂಗೆ ಹದಿನಾರು ಗುಣ, ಐಕ್ಯಂಗೆ ಐವತ್ತೆರಡು (ಗುಣ). ಸರನಾದು ಭೇದ ನಿಂದಲ್ಲಿ ಒಂದೆ ಗುಣ ಸಂದಿತ್ತು. ಇದು ಕ್ರಿಯಾಸ್ಥಲ ನಿರ್ವಾಹ. ಸಂಗನ ಬಸವಣ್ಣನ ಆದಿ, ಚನ್ನಬಸವಣ್ಣನ ಅನಾದಿ ಶರಣ ಸಂತತಿಯ ಸಂಬಂಧ ಮಾರ್ಗ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 64 ||
--------------
ದಾಸೋಹದ ಸಂಗಣ್ಣ
ಭಕ್ತಿಸ್ಥಲ ಮೂರು, ಮಾಹೇಶ್ವರಸ್ಥಲ ನಾಲ್ಕು, ಪ್ರಸಾದಿಸ್ಥಲ ಐದು, ಪ್ರಾಣಲಿಂಗಿಸ್ಥಲ ಆರು, ಶರಣಸ್ಥಲವೆರಡು, ಐಕ್ಯಸ್ಥಲ ಒಂದು, ಭಕ್ತಂಗೆ ಮೂರು ಗೊತ್ತು, ಮಾಹೇಶ್ವರಂಗೆ ನಾಲ್ಕು ಗೊತ್ತು, ಪ್ರಸಾದಿಗೆ ಐದು ಗೊತ್ತು, ಪ್ರಾಣಲಿಂಗಿಗೆ ಆರು ಗೊತ್ತು, ಶರಣಂಗೆ ಎರಡು ಗೊತ್ತು, ಐಕ್ಯಂಗೆ ಒಂದು ಗೊತ್ತಾಗಿ ಸಂಬಂಧಿಸಿ ಷಡುಸ್ಥಲ ರೂಪಾದಲ್ಲಿ ಒಂದು ಸ್ಥಲಕ್ಕೆ ಆರು ಸ್ಥಲ ಹೊರೆ ಹೊರೆಯಾಗಿ ಮಿಶ್ರವಾಗಿ ಸ್ಥಲಂಗಳು ಚರಿಸುವಲ್ಲಿ ನೂರೊಂದು ಸ್ಥಲಂಗಳಲ್ಲಿ ಆರೋಪಿಸಿ ನಿಂದುದು ಮೂರೆ ಭಕ್ತಿಸ್ಥಲ, ಸಂದುದು ನಾಲ್ಕೆ ಮಾಹೇಶ್ವರಸ್ಥಲ, ಕೊಂಡುದು ಐದೆ ಪ್ರಸಾದಿಸ್ಥಲ, ಗಮನವಿಲ್ಲದೆ ನಿಜದಲ್ಲಿ ನಿಂದುದಾರೆ ಪ್ರಾಲಿಂಗಿಸ್ಥಲ, ಸ್ತುತಿ-ನಿಂದೆಗೆಡೆಯಿಲ್ಲದೆ ನಿಂದುದೆರಡೆ ಶರಣಸ್ಥಲ, ನಿರ್ನಾಮವಾಗಿ ಭಾವಕ್ಕೆ ಬ್ರಮೆಯಿಲ್ಲದುದೊಂದೆ ಐಕ್ಯಸ್ಥಲ. ಇಂತೀ ಭಿನ್ನ ವರ್ಣಂಗಳಲ್ಲಿ ವರ್ಣಸ್ವರೂಪನಾದೆಯಲ್ಲಾ, ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 67 ||
--------------
ದಾಸೋಹದ ಸಂಗಣ್ಣ
ಪೃಥ್ವಿಯ ಪೂರ್ವಾಶ್ರಯವಳಿದ ಭಕ್ತಂಗೆ ಆಚಾರಲಿಂಗಸಾಹಿತ್ಯ, ಅಪ್ಪುವಿನ ಪೂರ್ವಾಶ್ರಯವಳಿದ ಮಾಹೇಶ್ವರಂಗೆ ಗುರುಲಿಂಗಸಾಹಿತ್ಯ, ಅಗ್ನಿಯ ಪೂರ್ವಾಶ್ರಯವಳಿದ ಪ್ರಸಾದಿಗೆ ಶಿವಲಿಂಗಸಾಹಿತ್ಯ, ವಾಯುವಿನ ಪೂರ್ವಾಶ್ರಯವಳಿದ ಪ್ರಾಣಲಿಂಗಿಗೆ ಜಂಗಮಲಿಂಗಸಾಹಿತ್ಯ, ಆಕಾಶದ ಪೂರ್ವಾಶ್ರಯವಳಿದ ಶರಣಂಗೆ ಪ್ರಸಾದಲಿಂಗಸಾಹಿತ್ಯ, ಆತ್ಮನ ಪೂರ್ವಾಶ್ರಯವಳಿದ ಐಕ್ಯಂಗೆ ಮಹಾಲಿಂಗಸಾಹಿತ್ಯ, ಇಂತೀ ಷಡಂಗಗಳ ಪೂರ್ವಾಶ್ರಯವಳಿದ ನಿರಾಳಂಗೆ ಸೌರಾಷ್ಟ್ರ ಸೋಮೇಶ್ವರಲಿಂಗ ಒಮ್ಮುಖ.
--------------
ಆದಯ್ಯ
ಅವಲೋಹವ ಪರುಷ ಮುಟ್ಟಲು ಸುವರ್ಣವಾಗುತ್ತಿದೆ. ಕಬ್ಬಿಣಕ್ಕೆ ಇದ್ದಲಿಯ ಹಾಕಿ ಅಗ್ನಿಯನಿಕ್ಕಿ, ಕಾವುಗೊಳಲಾಗಿ, ಕರಗಿ ನೀರಾಗುತ್ತಿದೆ. ಹಾಲಿಗೆ ನೀರ ಹೊಯ್ದರೆ ಅದು ಏರುವ ಭೇದವನಾರೂ ಅರಿಯರು. ಶರಣರು ತನುವಿಡಿದಿದ್ದರೂ ಇದ್ದವರಲ್ಲ. ಅದು ಹೇಗೆಂದರೆ, ಹಿಂದಣ ದೃಷ್ಟದ ಪರಿಯಲ್ಲಿ ಲಿಂಗವ ಹಿಡಿದಂಗಕ್ಕೆ ಬೇರೊಂದು ಸಂಗಸುಖ ಉಂಟೆ ? ಅದು ಕಾರಣ, ಸರ್ವಾಂಗಲಿಂಗಿಯಾ ಶರಣನು ಮುಟ್ಟಿದ, ತಟ್ಟಿದ, ಕೇಳಿದ, ನೋಡಿದ, ನುಡಿದ, ಸೋಂಕಿದನೆನ್ನಬೇಡ. ಅದು ಕಾರಣ, ಕಬ್ಬಿಣ ನೀರುಂಡಂತೆ ಅರ್ಪಿತವ ಬಲ್ಲ ಐಕ್ಯಂಗೆ ಮೈಯೆಲ್ಲ ಬಾಯಿ. ಇದರ ಬೇದವ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನೆ ಬಲ್ಲ.
--------------
ಹಡಪದ ಅಪ್ಪಣ್ಣ
ಆ ಐಕ್ಯನಲ್ಲಿಯ ಐಕ್ಯಂಗೆ ಆತ್ಮನಲ್ಲಿಯ ಪರಮಾತ್ಮನೆ ಅಂಗ. ಆ ಅಂಗಕ್ಕೆ ಭಾವದಲ್ಲಿಯ ನಿರ್ಭಾವವೇ ಹಸ್ತ. ಆ ಹಸ್ತಕ್ಕೆ ಮಹಾಲಿಂಗದಲ್ಲಿಯ ಅತಿಮಹಾಲಿಂಗವೇ ಲಿಂಗ. ಆ ಅತಿಮಹಾಲಿಂಗಮುಖದಲ್ಲಿ ಪರಮಪರಿಣಾಮವನೇ ಸಮರ್ಪಿಸಿ ಆ ಪರಮಪ್ರಸಾದವನೇ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಭಕ್ತಂಗೆ ಹಸ್ತವಾವುದು, ಮಾಹೇಶ್ವರಂಗೆ ಹಸ್ತವಾವುದು, ಪ್ರಸಾದಿಗೆ ಹಸ್ತವಾವುದು, ಪ್ರಾಣಲಿಂಗಿಗೆ ಹಸ್ತವಾವುದು, ಶರಣಂಗೆ ಹಸ್ತವಾವುದು, ಐಕ್ಯಂಗೆ ಹಸ್ತವಾವುದು ಎಂದರೆ, ಈ ಹಸ್ತಂಗಳ ಭೇದವ ಹೇಳಿಹೆನಯ್ಯ: ಭಕ್ತಂಗೆ ಸುಚಿತ್ತವೇ ಹಸ್ತ. ಮಾಹೇಶ್ವರಂಗೆ ಸುಬುದ್ಧಿಯೇ ಹಸ್ತ. ಪ್ರಸಾದಿಗೆ ನಿರಹಂಕಾರವೇ ಹಸ್ತ. ಪ್ರಾಣಲಿಂಗಿಗೆ ಸುಮನವೇ ಹಸ್ತ. ಶರಣಂಗೆ ಸುಜ್ಞಾನವೇ ಹಸ್ತ ಐಕ್ಯಂಗೆ ಸದ್ಭಾವವೇ ಹಸ್ತ. ಇಂತಿ ಹಸ್ತಂಗಳ ಭೇದವ ತಿಳಿವುದಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮಾತು ಮಥನಂಗಳಿಲ್ಲದಂದು, ನೀತಿ ನಿರ್ಮಲವಿಲ್ಲದಂದು, ಜಾತಿಸೂತಕವಿಲ್ಲದಂದು, ನಾಮ-ರೂಪ-ಕ್ರಿಯೆಗಳಿಲ್ಲದಂದು, ಏನೇನೂ ಇಲ್ಲದಂದು, ತಾನೇ ನಿಷ್ಪತಿಯಾಗಿರ್ದನಯ್ಯ. ತನ್ನ ಚಿದ್ವಿಲಾಸದಿಂದ ಓಂಕಾರವೆಂಬ ಪ್ರಣವವಾಯಿತ್ತು ನೋಡಾ. ಆ ಓಂಕಾರವೆಂಬ ಪ್ರಣವದಲ್ಲಿ ಅಕಾರ ಉಕಾರ ಮಕಾರಂಗಳಾದವು. ಆ ಅಕಾರ ಉಕಾರ ಮಕಾರಂಗಳೊಡನೆ ನಾದ-ಬಿಂದು-ಕಲೆಗಳಾದವು. ಆ ನಾದ ಬಿಂದು ಕಲೆಗಳೊಡನೆ ಷಡಾಧಾರಚಕ್ರಂಗಳಾದವು. ಆ ಷಡಾಧಾರಚಕ್ರಂಗಳಲ್ಲಿ ಭಕ್ತ-ಮಹೇಶ-ಪ್ರಸಾದಿ-ಪ್ರಾಣಲಿಂಗಿ-ಶರಣ-ಐಕ್ಯರೆಂಬ ಷಡ್ವಿಧಮೂರ್ತಿಗಳಾದರು ನೋಡಾ. ಭಕ್ತಂಗೆ ಆಚಾರಲಿಂಗ, ಮಹೇಶ್ವರಂಗೆ ಗುರುಲಿಂಗ, ಪ್ರಸಾದಿಗೆ ಶಿವಲಿಂಗ, ಪ್ರಾಣಲಿಂಗಿಗೆ ಜಂಗಮಲಿಂಗ, ಶರಣಂಗೆ ಪ್ರಸಾದಲಿಂಗ, ಐಕ್ಯಂಗೆ ಮಹಾಲಿಂಗವಾಗಿ, ನಿಶ್ಚಿಂತ ನಿರಾಕುಳ ನಿರ್ಭರಿತ ಲಿಂಗವ ಅರಿಯಬಲ್ಲಡೆ ಆತನೆ ಪ್ರಾಣಲಿಂಗಸಂಬಂಧಿ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಭಕ್ತಂಗೆ ಭಕ್ತಸ್ಥಲವಲ್ಲದೆ ಮಾಹೇಶ್ವರಸ್ಥಲದಲ್ಲಿ ನಿಲ್ಲ ಮಾಹೇಶ್ವರಂಗೆ ಮಾಹೇಶ್ವರಸ್ಥಲವಲ್ಲದೆ ಪ್ರಸಾದಿಸ್ಥಲದಲ್ಲಿ ನಿಲ್ಲ ಪ್ರಸಾದಿಗೆ ಪ್ರಸಾದಿಸ್ಥಲವಲ್ಲದೆ ಪ್ರಾಣಲಿಂಗಿಸ್ಥಲದಲ್ಲಿ ನಿಲ್ಲ ಪ್ರಾಣಲಿಂಗಿಗೆ ಪ್ರಾಣಲಿಂಗಿಸ್ಥಲವಲ್ಲದೆ ಶರಣಸ್ಥಲದಲ್ಲಿ ನಿಲ್ಲ ಶರಣಂಗೆ ಶರಣಸ್ಥಲವಲ್ಲದೆ ಐಕ್ಯಸ್ಥಲದಲ್ಲಿ ನಿಲ್ಲ ಐಕ್ಯಂಗೆ ಐಕ್ಯಸ್ಥಲವಲ್ಲದೆ ಮಹಾಬೆಳಗಿನ ಕಳೆಗೆ ನಿಲುಕ. ಅದು ಪೂರ್ಣಭಾವ ಪರಿಪೂರ್ಣವಾಗಿಪ್ಪುದು. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಲಿಂಗವು ಭಕ್ತಿಕಾರಣವಾಗಿ ಸ್ಥಲಂಗಳಿಗೆ ಗೊತ್ತಾದ ಭೇದ.
--------------
ಮೋಳಿಗೆ ಮಹಾದೇವಿ
ಆ ಶರಣನಲ್ಲಿಯ ಐಕ್ಯಂಗೆ ಆಕಾಶದಲ್ಲಿಯ ಆತ್ಮನೇ ಅಂಗ. ಆ ಅಂಗಕ್ಕೆ ಸುಜ್ಞಾನದಲ್ಲಿಯ ಭಾವವೇ ಹಸ್ತ. ಆ ಹಸ್ತಕ್ಕೆ ಪ್ರಸಾದಲಿಂಗದಲ್ಲಿಯ ಮಹಾಲಿಂಗವೇ ಲಿಂಗ. ಆ ಮಹಾಲಿಂಗದಮುಖದಲ್ಲಿ ಇವೆಲ್ಲದರಲ್ಲಿ ಹುಟ್ಟಿದ ಶಬ್ದದ್ರವ್ಯವನು ಸಮರ್ಪಣವಂ ಮಾಡಿ, ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನಷ್ಟು ... -->