ಅಥವಾ

ಒಟ್ಟು 23 ಕಡೆಗಳಲ್ಲಿ , 12 ವಚನಕಾರರು , 23 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯೋಗಿ ಜೋಗಿ ಶ್ರಾವಕ ಸನ್ಯಾಸಿ ಪಾಶುಪತಿ ಕಾಳಾಮುಖಿ ಆರು ಭೇದ ಮೂರರಲ್ಲಿ ಅಡಗಿ ಎರಡು ಅಳಿವಿಂಗೆ ಒಳಗಾಯಿತ್ತು. ಒಂದು ನಿಂದು ಸಮಯ ರೂಪಾಯಿತ್ತು. ಸಮಯಕ್ಕೆ ಹೊರಗಾದುದು, ಸದಾಶಿವಮೂರ್ತಿಲಿಂಗಕ್ಕೆ ಶಕ್ತಿನಾಮವಿಲ್ಲ.
--------------
ಅರಿವಿನ ಮಾರಿತಂದೆ
ಸಯದಾನವರತ ಬಸವಾ. ಸಂಭ್ರಮಮೂರ್ತಿ ಬಸವಾ. ಸಂಗ ನಿಸ್ಸಂಗ ಬಸವಾ, ಎಲೆ ಅಯ್ಯನ ಅಯ್ಯ ಬಸವಾ, ಏಕರೂಪ ನಿರೂಪಾದೆಯಾ ಬಸವಾ ? ನಿಸ್ಸಂಗ ಎನ್ನಲ್ಲಿ ರೂಪಾಯಿತ್ತು ಬಸವಾ. ಬಸವ ಬಯಲನೆಯ್ದಿ ಆನು ಬಯಲನೆ ಕೂಡಿದೆನಯ್ಯಾ ಸಂಗಯ್ಯಾ
--------------
ನೀಲಮ್ಮ
ಇಷ್ಟಪ್ರಾಣಸಂಬಂಧಯೋಗ ಭೇದದ ಪರಿ ಯಾವುದೆಂದಡೆ : ಅಕ್ಷಿಯ ಮುಚ್ಚಿದಲ್ಲಿ ನಿರೂಪಾಯಿತ್ತು, ತೆರೆದಲ್ಲಿ ರೂಪಾಯಿತ್ತು. ತನ್ನಯ ಅರಿವು ಮರವೆಯಿಂದ ಕ್ರೀ, ನಿಃಕ್ರೀಯೆಂಬ ಸಂದೇಹವಾಯಿತ್ತು. ನಿಂದ ನೀರ ನೆಳಲು, ಚರಿಸಿದಲ್ಲಿ ಅಡಗಿತ್ತು. ಆ ತೆರದ ದೃಷ್ಟವನರಿ, ಐಘಟದೂರ ರಾಮೇಶ್ವರಲಿಂಗ ಏಕಸ್ವರೂಪು.
--------------
ಮೆರೆಮಿಂಡಯ್ಯ
ಬೆಕ್ಕಿನ ತಲೆಯ ಗಿಳಿ ತಿಂದಿತ್ತು. ಕತ್ತೆ ಕುದುರೆಯ ರೂಪಾಯಿತ್ತು. ಮತ್ಸ್ಯ ಸಮುದ್ರವ ಕುಡಿದು, ಕೆರೆಯ ತಪ್ಪಲ ನೀರಿಗಾರದೆ ಸತ್ತಿತ್ತು ನೀರಕ್ಕದೆ. ಈ ಬಚ್ಚಬಯಲ ಇನ್ನಾರಿಗೆ ಹೇಳುವೆ, ಗೂಡಿನ ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಉದಯಬಿಂದು ರೂಪಾಯಿತ್ತು. ಅಂತರಬಿಂದು ನಿರೂಪಾಯಿತ್ತು. ಊಧ್ರ್ವಬಿಂದು ನಿಶ್ಶೂನ್ಯವಾಯಿತ್ತು. ತ್ರಿವಿಧಲಿಂಗವ ಕೂಡಿ ಬಯಲಾಯಿತ್ತು. ಗುಹೇಶ್ವರಲಿಂಗದಲ್ಲಿ.
--------------
ಅಲ್ಲಮಪ್ರಭುದೇವರು
ಕಾಯವೆಂಬ ಕದಳಿಯ ಹೊಕ್ಕು; ಪ್ರಾಣವೆಂಬ ಗಂಹರದಲ್ಲಿ; ಸಕಲೇಂದ್ರಿಯವೆಂಬ ಕೋಣೆ ಕೋಣೆಗಳಲ್ಲಿ ತಿರುಗಾಡುತ್ತ ಬರಲಾಗಿ ಮೇರು ಮಂದಿರದ ತ್ರಿಕೋಣೆಯಲ್ಲಿ ಬೆಳಗಾಯಿತ್ತು ! ಗುಹೇಶ್ವರಲಿಂಗವೆಂಬುದು ರೂಪಾಯಿತ್ತು ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಕರ್ಮದ ಧರ್ಮಂಗಳೊಳಗಾಗಿ ಮಾಡುವ ಮಾಟಂಗಳೆಲ್ಲವೂ ಕರ್ಮಶಕ್ತಿಗೆ ಬೀಜ. ಆ ಉಭಯವ ನೇತಿಗಳೆದು ಮಾಡುವುದೆಲ್ಲವೂ ಜ್ಞಾನಶಕ್ತಿಗೆ ಬೀಜ. ಸಕಲವ ವಿಚಾರಿಸಿ, ಅಹುದಲ್ಲಾ ಎಂದು ಹರಿದು ಮಾಡುವುದೆಲ್ಲವೂ ಮುಂದೊಂದ ಕುರಿತು ವಸ್ತುವೆಂಬ ಒಡಲಿಗೆ ರೂಪಾಯಿತ್ತು. ಸ್ವಯವೆಂಬ ಭಾವ ನಿಜದಲ್ಲಿ ನಿಂದಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಹೃದಯಮಧ್ಯದಲೊಂದು ಜ್ಯೋತಿಯಮನೆ ಹುಟ್ಟಿತ್ತು. ಆ ಜ್ಯೋತಿಯ ಮಧ್ಯದಲ್ಲಿ ಸ್ಫಟಿಕದ ತನು ಬೆಳಗಿತ್ತು. ಆ ಬೆಳಗಿನ ತನುಮಧ್ಯದಲ್ಲಿ ಮರುಜವಣಿಯ ಕುಡಿ. ಹೆಸರಿಲ್ಲದ ರೂಪಾಯಿತ್ತು ಬಸವಂಗೆ, ಸಂಗಯ್ಯಾ ನಿಮ್ಮಲ್ಲಿ.
--------------
ನೀಲಮ್ಮ
ಚಂದ್ರಕಾಂತಶಿಲೆಯನೊಂದು ಹಿಳಿದಲ್ಲಿ, ಬಿಂದು ಬಂದುದುಂಟೆ ? ಸುಗಂಧದ ನನೆಯ ತಂದು ಬಂಧಿಸಿದಲ್ಲಿ, ಆ ಸುವಾಸನೆ ಬಂದುದುಂಟೆ ? ಆ ಕಿರಣ ಪರುಷಶಿಲೆ ಸತಿಯಾಗಿ ಬೆರಸಿದಲ್ಲಿ, ಬಿಂದು ರೂಪಾಯಿತ್ತು. ರಿತುಕಾಲಕ್ಕೆ ಕುಸುಮ ಬಲಿಯಲಾಗಿ, ಸುವಾಸನೆಯೆಸಗಿತ್ತು. ಇಂತೀ ಉಭಯದಿಂದ ಅರಿವಲ್ಲಿ, ಸ್ಥಲಸ್ಥಲವ ನೆಮ್ಮಿ ನಿಃಸ್ಥಲವನರಿತಲ್ಲಿ, ದೃಷ್ಟದ ಇಷ್ಟ ಅಲ್ಲಿಯೇ ಲೇಪ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹುಲ್ಲ ಮನುಷ್ಯನ ಕಂಡು ಹುಲ್ಲೆ ತಾ ಬೆದರುವಂತೆ ಇಲ್ಲದ ಶಂಕೆಯನುಂಟೆಂಬನ್ನಕ್ಕ ಅದಲ್ಲಿಯೇ ರೂಪಾಯಿತ್ತು. ಹೇಡಿಗಳನೇಡಿಸ ಕಾಡಿತ್ತು ಸಿಮ್ಮಲಿಗೆಯ ಚೆನ್ನರಾಮನೆಂಬ ಭಾವದ ಗಸಣಿ.
--------------
ಚಂದಿಮರಸ
ಅಂಗಕ್ಕೆ ಕುರುಹೆಂಬುದೊಂದು ಲಿಂಗ. ಆತ್ಮಂಗೆ ಅರಿವೆಂಬುದೊಂದು ಲಿಂಗ. ಪರುಷ ಲೋಹದಂತೆ ಕೂಡುವನ್ನಬರ ಉಭಯನಾಮ ರೂಪಾಯಿತ್ತು. ಕೂಡಿದ ಮತ್ತೆ ಪರುಷವೆಂಬ ನಾಮವಿಲ್ಲ, ಲೋಹವೆಂಬ ಕುರುಹಿಲ್ಲ. ಹೇಮವೆಂಬ ನಾಮವಾಯಿತ್ತು. ಇಷ್ಟ ಪ್ರಾಣ ಹಾಗಾದಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಆರುಸ್ಥಲ ವರ್ಣಿಸುವಲ್ಲಿ ಭಕ್ತಂಗೆ ಮಾಹೇಶ್ವರಂಗೆ ಪ್ರಸಾದಿಗೆ ಪ್ರಾಣಲಿಂಗಿಗೆ ಶರಣಐಕ್ಯಂಗೆ. ಸ್ಥಲವಾರು ಲಿಂಗವೊಂದೆ; ವರ್ಣವಾರು ಪಟವೊಂದೆ; ಅಕ್ಷರವಾರು ಬೀಜವೊಂದೆ; ದಳವಾರು ಆತ್ಮವೊಂದೆ. ಇಂತೀ ಭೇದಂಗಳು ಭಿನ್ನವಾಗಿ; ನಿಚ್ಚಣಿಗೆಯ ಮೆಟ್ಟಿನಂತೆ, ಮೊದಲು ತುದಿಯಾದಿಯಾಗಿ ತುದಿಕಡೆಯಾದಿಯಾಗಿ ಎಡೆತಾಕುವ ತೆರದಂತೆ, ಸ್ಥಲವೆರಡು ಆಚರಣೆ ನಾಲ್ಕು. ಇಂತೀ ಭೇದವಾರರಲ್ಲಿ ಷಡುಸ್ಥಲ ಸಂದು, ಸಂಗನ ಬಸವಣ್ಣ ಚನ್ನಬಸವಣ್ಣನಿಂದ ಪ್ರವಾಹವಾಗಿ ಭಕ್ತಿ ರೂಪಾಯಿತ್ತು. ಶಂಭುವಿನಿಂದಿತ್ತ ಸ್ವಯಂಭವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಬಯಲೆ ರೂಪಾಯಿತ್ತು, ನಿರ್ವಯಲೆ ನಿರೂಪಾಯಿತ್ತು. ಸರ್ವಾಂಗದೊಳು ಉರಿ ವೇಧಿಸಿತ್ತು. ಅಲ್ಲೊಂದು ಸದಮದಗಜ ಹಯನಾಯಿತ್ತು. ಅಮೃತವನೆ ಉಂಡಿತ್ತು, ಮಧುರಸವನೇ ಉಂಡಿತ್ತು. ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನ ಕೂಡಿತ್ತು.
--------------
ಹಡಪದ ಅಪ್ಪಣ್ಣ
ಪೃಥ್ವಿಯ ಮೇಲಣ ಕಣಿಯ ತಂದು, ಪೂಜಾವಿಧಾನಕ್ಕೊಳಗಾದ ಅಷ್ಟತನುವಿನ ಕೈಯಲ್ಲಿ ಕೊಟ್ಟು ಮುಟ್ಟಿ ಪೂಜಿಸಬೇಕೆಂಬರು. ಮೂವರಿಗೆ ಹುಟ್ಟಿದಾತನೆಂದು ಪೂಜಿಸುವಿರೊ ? ಭೂಮಿಗೆ ಹುಟ್ಟಿ ಶಿಲೆಯಾಯಿತ್ತು ಕಲ್ಲುಕುಟ್ಟಿಗ ಮುಟ್ಟಿ ರೂಪಾಯಿತ್ತು. ಗುರುಮುಟ್ಟಿ ಲಿಂಗವಾಯಿತ್ತು. ಇದು ಬಿದ್ದಿತ್ತೆಂದು ಸಮಾಧಿಯ ಹೊಕ್ಕೆವೆಂಬರು ಎತ್ತಿಕೊಂಡು ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡುವುದೆ ವ್ರತವು. ಕಟ್ಟುವ ಠಾವನು ಮುಟ್ಟುವ ಭೇದವನು ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣನೆ ಬಲ್ಲ.
--------------
ಚನ್ನಬಸವಣ್ಣ
ಭಕ್ತಂಗೆ ಪೃಥ್ವಿಯಂಗವಾಗಿ, ಮಾಹೇಶ್ವರಂಗೆ ಅಪ್ಪುವಂಗವಾಗಿ, ಪ್ರಸಾದಿಗೆ ಅಗ್ನಿಯಂಗವಾಗಿ, ಪ್ರಾಣಲಿಂಗಿಗೆ ಪವನನಂಗವಾಗಿ, ಶರಣಂಗೆ ಆಕಾಶವಂಗವಾಗಿ, ಐಕ್ಯಂಗೆ ಮಹಾಬೆಳಗೆ ಅಂಗವಾದಲ್ಲಿ, ಪಂಚತತ್ವ ಕೂಡಿ ಒಂದರಲ್ಲಿ ಎಯ್ದುವಲ್ಲಿ, ಷಡುಸ್ಥಲ ರೂಪಾಯಿತ್ತು. ಆರುವರ್ಣಕ್ಕೆ ಅಪ್ಪು ಅರಸಾದಂತೆ, ಏಕಛತ್ರ ಮಹಾರಾಜ ನೀನೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->