ಅಥವಾ

ಒಟ್ಟು 62 ಕಡೆಗಳಲ್ಲಿ , 27 ವಚನಕಾರರು , 55 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಷ್ಠೆ ಘಟಿಸಿ ಕ್ರಿಯವಗ್ರಹಿಸಿ ಭಾವಭರಿತವಾಗಿ ಜ್ಞಾನವೆ ಅಂಗವಾಗಿ ಕ್ರಿಯೆ ಪ್ರಾಣವಾಗಿ, ಮತ್ತೆ ಜ್ಞಾನವೆ ಪ್ರಾಣವಾಗಿ ಕ್ರಿಯೆ ಅಂಗವಾಗಿ ಅಂಗಮನಕ್ರಿಭಾವ ಈ ಚತುರ್ವಿಧವೊಂದಾಗಿ, ಮತ್ತೆ ನಿಷ್ಠೆಘಟಿಸಿ ಕ್ರಿಜ್ಞಾನ ಎರಡ ವಿೂರಿನಿಂದ ಭಕ್ತವಿರಕ್ತನ ತೂರ್ಯದ ಕ್ರಿಯೆ ವೇಧಿಸಿ ನಿಂದವನ ನಿಲವು ಎಂತುಟೆಂದರೆ: ಕ್ರಿಯೆಂದರೆ ಇಷ್ಟಲಿಂಗ, ಅಂಗವೆಂದರೆ ಪ್ರಾಣಲಿಂಗ. ಆ ಪ್ರಾಣಲಿಂಗವ ಇಷ್ಟಲಿಂಗದಲ್ಲಡಗಿಸಿಕೊಂಡು ನಿಂದುದು ಎರಡಾಗಿ ಭಕ್ತನೆಂದು ಮಾಹೇಶ್ವರನೆಂದು ನಿಷ್ಠೆಯಲ್ಲಿ ನೆರೆನಿಂದಿರಲು ಮತ್ತಾ ನಿಷ್ಠೆಪಸರಿಸಿ ಆ ಭಕ್ತಮಾಹೇಶ್ವರರು ತಮ್ಮ ಮುನ್ನಿನ ನಿಷ್ಠೆಯ ಬಳಿಗೆ ಬಂದು ಎನ್ನಕ್ರಿ ನಿಮ್ಮಲ್ಲಿಯೇ ಅಡಗಿತ್ತು ಆ ಮುಕ್ತತ್ವದ ಕ್ರಿಯೊಳಗೊಂಡು ದೃಷ್ಟವ ಕಂಡು ಬರ....ಕೇಳಲಾಗಿ, ಎನ್ನ ಇಷ್ಟವಾಸರಿಸಿತ್ತೆಂದು ಹೇಳಲು ಸುಮ್ಮನೆ ಅವನ ಕೂಡೆ ಪ್ರಸಂಗಿಸಲಾಗದು. ಅದೇನು ಕಾರಣವೆಂದರೆ: ಮೊಟ್ಟ ಮೊದಲಲ್ಲಿ ಮೂರು ಭಿನ್ನವ ಕೇಳುವದು ಆ ಮೂರು ಭಿನ್ನಯೆಂತಾದವಯ್ಯಯೆಂದರೆ, ಅದರೊಳಗೈದು ಭಿನ್ನ ಉಂಟು. ಇಂತೀ ಎಂಟರೊಳಗೆ ನಾಲ್ಕು ಲಿಂಗದ ನೆಲೆ ಸಿಕ್ಕಿದರೆ ಅವೆಲ್ಲರಲ್ಲಿ ಬಂಧಿಸೂದು. ಅದಲ್ಲದೆ ನಿಂದರೆ ಮುಂದಣ ನಾಲ್ಕು ಅವನ ಭಾವವ ತೊರೆದು ನೋಡೂದು. ನೋಡಿ ನಿಶ್ಚಯವಾದ ಮತ್ತೆ ಕೂಡೆಯಿಟ್ಟುಕೊಂಡಿರ್ಪ ಸಮಯದಲ್ಲಿ, ಮೂಲಾಗ್ನಿಯ ಜ್ವಾಲೆಯಿಂದ ಮೇಲುವಾಯ್ದು ಒತ್ತಿಲಿರ್ದ ತನ್ನ ತೆತ್ತಿಗರ ನಿಲ್ಲದಂತೆ ನೀಕರಿಸುತ್ತಿರಲು, ಸಲಹಲಾರದ ತಾಯಿ ಶಿಶುವ ಬೈದು ಕೊಲುವಂತೆ ತಮ್ಮ ತ್ಯಾಗದ ಮೈಮರೆದಿರ್ದಾತನ ಎಚ್ಚರ ಮಾಡಿ, ನೀ ಮುನ್ನಲಿಂತಹವನೆಂದೆ ನುಡಿದು ಹೋಗುವ ನಿಷ್ಠೆ ಭಂಡರ ಗುಹೇಶ್ವರ ಸಾಕ್ಷಿಯಾಗಿ ಅಲ್ಲಯ್ಯನೊಲ್ಲ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಪಿಂಡದ ಸರ್ವಾಂಗದಲ್ಲಿ ಆತ್ಮನು ವೇಧಿಸಿ ಇದ್ದಿಹಿತ್ತೆಂಬರು. ಕರ ಚರಣ ಕರ್ಣ ನಾಸಿಕ ನಯನ ಇವನರಿದು ಕಳೆದಲ್ಲಿ ಆತ್ಮ ಘಟದಲ್ಲಿದ್ದಿತ್ತು. ಶಿರಚ್ಛೇದನವಾದಲ್ಲಿ ಆತ್ಮ ಎಲ್ಲಿ ಅಡಗಿತ್ತು ? ಇದನರಿತು ಆತ್ಮ ಪೂರ್ಣನೊ, ಪರಿಪೂರ್ಣನೊ ಎಂಬುದ ತಿಳಿದು ನಿಶ್ಚಯದಲ್ಲಿ ನಿಂದುದು ಪಿಂಡಜ್ಞಾನಸಂಬಂಧ. ಇದು ಸದ್ಯೋಜಾತಲಿಂಗವ ಕೂಡುವ ಕೂಟ.
--------------
ಅವಸರದ ರೇಕಣ್ಣ
ಆದಿ ಅನಾದಿ ನಿತ್ಯಾನಿತ್ಯವ ತಿಳಿಯಲರಿಯದೆ ವಾಯಕ್ಕೆ ಪರಬ್ರಹ್ಮವ ನುಡಿವ ವಾಯುಪ್ರಾಣಿಗಳವರೆತ್ತ ಬಲ್ಲರೋ, ಆ ಪರಬ್ರಹ್ಮದ ನಿಜದ ನಿಲವ ? ಅದೆಂತೆಂದಡೆ ; ಆದಿಯೆ ದೇಹ, ಅನಾದಿಯೆ ನಿರ್ದೇಹ, ಆದಿಯೆ ಸಕಲ, ಅನಾದಿಯೆ ನಿಷ್ಕಲ, ಆದಿಯೆ ಜಡ, ಅನಾದಿಯೆ ಅಜಡ. ಆದಿಯೆ ಕಾಯ, ಅನಾದಿಯೆ ಪ್ರಾಣ. ಈ ಎರಡರ ಯೋಗವ ಭೇದಿಸಿ ತನ್ನಿಂದ ತಾನೆ ತಿಳಿದು ನೋಡಲು, ಆದಿ ಸಂಬಂಧವಪ್ಪ ಭೂತಂಗಳು ನಾನಲ್ಲ. ದಶವಿಧೇಂದ್ರಿಯಂಗಳು ನಾನಲ್ಲ, ದಶವಾಯುಗಳು ನಾನಲ್ಲ. ಅಷ್ಟಮದಂಗಳು, ಸಪ್ತವ್ಯಸನಂಗಳು, ಅರಿಷಡ್ವರ್ಗಂಗಳು, ಷಡೂರ್ಮಿಗಳು, ಷಡ್ಬ್ರಮೆಗಳು, ಷಡ್ಭಾವವಿಕಾರಂಗಳು, ಷಟ್ಕರ್ಮಂಗಳು, ಷಡ್ಧಾತುಗಳು, ತನುತ್ರಯಂಗಳು, ಜೀವತ್ರಯಂಗಳು, ಮಲತ್ರಯಂಗಳು, ಮನತ್ರಯಂಗಳು, ಗುಣತ್ರಯಂಗಳು, ಭಾವತ್ರಯಂಗಳು, ತಾಪತ್ರಯಂಗಳು, ಅಂತಃಕರಣಂಗಳು ಇಂತಿವಾದಿಯಾಗಿ ತೋರುವ ತೋರಿಕೆಯೇನೂ ನಾನಲ್ಲ, ನನ್ನವಲ್ಲ. ಇಂತಿವೆಲ್ಲವೂ ನನ್ನಾಧೀನವಾಗಿಪ್ಪವು ನಾನಿವರಾಧೀನದವನಲ್ಲ. ನಾನು ತೂರ್ಯ ತೂರ್ಯಾತೀತವಪ್ಪ ಸತ್ತು ಚಿತ್ತಾನಂದ ನಿತ್ಯಪರಿಪೂರ್ಣವಸ್ತುವೆ ತನ್ನಿರವೆಂದು ತಿಳಿಯೆ, ಆ ತಿಳಿದ ಮಾತ್ರದಲ್ಲಿಯೇ ಅನಿತ್ಯದ ಬೆಸುಗೆ ಬಿಟ್ಟು ನಿರಾಳದಲ್ಲಿ ನಿಜವನೈದಲರಿಯದೆ ಮತ್ತೆಯುಂ ಭೌತಿಕ ತತ್ವಸಂಬಂಧಿಯಾಗಿ ಇರುತ್ತಿರಲು, ಇಂತೀ ತತ್ವದಾದಿ ತಾನೆಂತೆನಲು ಆ ಪರಬ್ರಹ್ಮವಪ್ಪ ನಿತ್ಯನಿರಾಳ ನಿಃಶೂನ್ಯಲಿಂಗವೆ ತನ್ನ ಲೀಲಾವಿಲಾಸದಿಂದ ತಾನೆ ಸುನಾದ ಬಿಂದು ಪ್ರಕಾಶ ತೇಜೋಮೂರ್ತಿಯಾಗಿ ನಿಂದು ಮಹಾಲಿಂಗವೆಂದೆನಿಸಿತ್ತು. ಆ ಮಹಾಲಿಂಗವೆ ಪಂಚಸಾದಾಖ್ಯವೆಂದೆನಿಸಿತ್ತು. ಆ ಪಂಚಸಾದಾಖ್ಯವೆ ಪಂಚಲಿಂಗ ಪ್ರಕಾಶವೆಂದೆನಿಸಿತ್ತು. ಆ ಪಂಚಲಿಂಗ ಪ್ರಕಾಶವೆ ಪಂಚಮುಖವೆಂದೆನಿಸಿತ್ತು. ಆ ಪಂಚಮುಖದಿಂದವೆ ಪಂಚಾಕ್ಷರಿಯುತ್ಪತ್ತಿ. ಆ ಪಂಚಾಕ್ಷರಿಯಿಂದವೆ ಪಂಚಕಲೆಗಳುತ್ಪತ್ತಿ. ಆ ಪಂಚಕಲೆಗಳಿಂದವೆ ಜ್ಞಾನ ಮನ ಬುದ್ಧಿ ಚಿತ್ತ ಅಹಂಕಾರಗಳುತ್ಪತ್ತಿ. ಆ ಜ್ಞಾನ ಮನ ಬುದ್ಧಿ ಚಿತ್ತ ಅಹಂಕಾರಗಳಿಂದವೆ ಪಂಚತನ್ಮಾತ್ರಂಗಳುತ್ಪತ್ತಿ. ಆ ಪಂಚತನ್ಮಾತ್ರಂಗಳಿಂದವೆ ಪಂಚಭೂತಂಗಳುತ್ಪತ್ತಿ. ಆ ಪಂಚಭೂತಂಗಳೇ ಪಂಚೀಕರಣವನೆಯ್ದಿ ಆತ್ಮಂಗೆ ಅಂಗವಾಯಿತ್ತು. ಆ ಅಂಗಕ್ಕೆ ಜ್ಞಾನೇಂದ್ರಿಯಂಗಳು ಕರ್ಮೇಂದ್ರಿಯಂಗಳು ಪ್ರತ್ಯಂಗವೆಂದೆನಿಸಿತ್ತು. ಇಂತು ದೇಹ ಸಂಬಂಧಮಂ ಶಿವ ತನ್ನ ಚಿದಂಶಿಕನಪ್ಪ ಆತ್ಮಂಗೆ ಸಂಬಂಧಿಸಿದನಾಗಿ, ಆ ಸಂಬಂಧಿಸಿದ ಕಾಯದ ಪೂರ್ವಾಶ್ರಯವು ಎಲ್ಲಿಯಾಯಿತ್ತು ಅಲ್ಲಿಯೇ ಅಡಗಿಸಿ ಆ ಕಾಯದ ಪೂರ್ವಾಶ್ರಯವನಳಿದು ಮಹಾ ಘನಲಿಂಗವ ವೇಧಿಸಿ ಕೊಟ್ಟು, ಶಿವ ತಾನೆ ಗುರುವಾಗಿ ಬಂದು ಮಹಾಘನಲಿಂಗವ ವೇಧಿಸಿ ಕೊಟ್ಟ ಪರಿ ಎಂತೆಂದಡೆ ಆತ್ಮಗೂಡಿ ಪಂಚಭೂತಂಗಳನೆ ಷಡ್ವಿಧ ಅಂಗವೆಂದೆನಿಸಿ, ಆ ಅಂಗಕ್ಕೆ ಆ ಕಲೆಗಳನೆ ಷಡ್ವಿಧ ಶಕ್ತಿಗಳೆಂದೆನಿಸಿ, ಆ ಶಕ್ತಿಗಳಿಗೆ ಷಡ್ವಿಧ ಭಕ್ತಿಯನಳವಡಿಸಿ, ಆ ಭಕ್ತಿಗಳಿಗೆ ಭಾವ ಜ್ಞಾನ ಮನ ಬುದ್ಧಿ ಚಿತ್ತ ಅಹಂಕಾರಂಗಳನೆ ಷಡ್ವಿಧ ಹಸ್ತಂಗಳೆಂದೆನಿಸಿ, ಆ ಹಸ್ತಂಗಳಿಗೆ ಮಹಾಲಿಂಗವಾದಿಯಾದ ಪಂಚಲಿಂಗಗಳನೆ ಷಡ್ವಿಧ ಲಿಂಗಂಗಳೆಂದೆನಿಸಿ, ಆ ಮುಖಂಗಳಿಗೆ ತನ್ಮಾತ್ರಂಗಳನೆ ದ್ರವ್ಯಪದಾರ್ಥಂಗಳೆಂದೆನಿಸಿ, ಆ ದ್ರವ್ಯಪದಾರ್ಥಂಗಳು ಆಯಾಯ ಮುಖದ ಲಿಂಗಂಗಳಲ್ಲಿ ನಿರಂತರ ಸಾವಧಾನದಿಂದ ಅರ್ಪಿತವಾಗಿ ಬೀಗಲೊಡನೆ. ಅಂಗಸ್ಥಲಂಗಳಡಗಿ ತ್ರಿವಿಧ ಲಿಂಗಾಂಗಸ್ಥಲಂಗಳುಳಿದು ಕಾಯ ಗುರು, ಪ್ರಾಣ ಲಿಂಗ, ಜ್ಞಾನ ಜಂಗಮ ಗುರುವಿನಲ್ಲಿ ಶುದ್ಧಪ್ರಸಾದ, ಲಿಂಗದಲ್ಲಿ ಸಿದ್ಧಪ್ರಸಾದ, ಜಂಗಮದಲ್ಲಿ ಪ್ರಸಿದ್ಧಪ್ರಸಾದ. ಇಂತೀ ತ್ರಿವಿಧ ಪ್ರಸಾದವು ಏಕಾರ್ಥವಾಗಿ, ಮಹಾಘನ ಪರಿಪೂರ್ಣಪ್ರಸಾದವಳವಟ್ಟ ಶರಣ ಜ್ಞಾನಿಯಲ್ಲ, ಅಜ್ಞಾನಿ ಮುನ್ನವೇ ಅಲ್ಲ. ಶೂನ್ಯನಲ್ಲ, ನಿಃಶೂನ್ಯ ಮುನ್ನವೇ ಅಲ್ಲ. ದ್ವೈತಿಯಲ್ಲ, ಅದ್ವೈತಿ ಮುನ್ನವೇ ಅಲ್ಲ. ಇಂತೀ ಉಭಯಾತ್ಮಕ ತಾನೆಯಾಗಿ ? ಇದು ಕಾರಣ, ಇದರ ಆಗುಹೋಗು ಸಕೀಲಸಂಬಂಧವ ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣರೇ ಬಲ್ಲರು.
--------------
ಅಕ್ಕಮಹಾದೇವಿ
ಕಾಯಜೀವದ ಕೀಲವನರಿದು ಜನನ ಮರಣಂಗಳಾಯಾಸವಳಿದು ಅಂಗಲಿಂಗದೊಳಗೇಕಾರ್ಥವ ಮಾಡುವ ಭೇದವೆಂತೆಂದಡೆ : ಪಂಚಭೂತಂಗಳ ಪೂರ್ವಾಶ್ರಯವನಳಿದು ಪಂಚಕರಣಂಗಳ ಹಂಚುಹರಿಮಾಡಿ, ಕರ್ಮಬುದ್ಧೀಂದ್ರಿಯಂಗಳ ಮರ್ದಿಸಿ, ದಶವಾಯುಗಳ ಹಸಗೆಡಿಸಿ ಕರಣಚತುಷ್ಟಯಂಗಳ ಕಾಲಮುರಿದು ಪಂಚವಿಂಶತಿ ತತ್ತ್ವಂಗಳ ವಂಚನೆಯನಳಿದು ಹತ್ತುನಾಡಿಗಳ ವ್ಯಕ್ತೀಕರಿಸಿ ಅಷ್ಟತನು ಅಷ್ಟಾತ್ಮಂಗಳ ನಷ್ಟಮಾಡಿ ಅಂತರಂಗದ ಅಷ್ಟಮದಂಗಳ ಸಂತರಿಸಿ, ಬಹಿರಂಗದ ಅಷ್ಟಮಂದಗಳ ಬಾಯಟೊಣೆದು, ಅಷ್ಟಮೂರ್ತಿಮದಂಗಳ ಹಿಟ್ಟುಗುಟ್ಟಿ ಸಪ್ತಧಾತು ಸಪ್ತವ್ಯಸನಂಗಳ ಸಣ್ಣಿಸಿ ಷಡೂರ್ಮೆ ಷಡ್‍ವರ್ಗಂಗಳ ಕೆಡೆಮೆಟ್ಟಿ ಷಡ್‍ಭ್ರಮೆ ಷಡ್‍ಭಾವವಿಕಾರಂಗಳ ಗಂಟಸಡಲಿಸಿ, ಪಂಚಕೋಶ ಪಂಚಕ್ಲೇಶಂಗಳ ಪರಿಹರಿಸಿ ಅಂಗಚತುಷ್ಟಯಂಗಳ ಶೃಂಗಾರವಳಿದು ಗುಣತ್ರಯಂಗಳ ಗೂಡಮುಚ್ಚಿ ಅಹಂಕಾರತ್ರಯಂಗಳ ಶಂಕೆಗೊಳಗುಮಾಡಿ ತಾಪತ್ರಯಂಗಳ ತಲ್ಣಣಗೊಳಿಸಿ ತನುತ್ರಯಂಗಳ ತರಹರಮಾಡಿ ಜೀವತ್ರಯಂಗಳ ಜೀರ್ಣೀಕರಿಸಿ, ಆತ್ಮತ್ರಯಂಗಳ ಧಾತುಗೆಡಿಸಿ, ಅವಸ್ಥಾತ್ರಯಂಗಳ ಅವಗುಣವಳಿದು, ತ್ರಿದೋಷಂಗಳ ಪಲ್ಲಟಗೊಳಿಸಿ, ಭಾವತ್ರಯಂಗಳ ಬಣ್ಣಗೆಡಿಸಿ , ದುರ್ಭಾವತ್ರಯಂಗಳ ದೂರಮಾಡಿ, ಮನತ್ರಯಂಗಳ ಮರ್ದನಮಾಡಿ, ತ್ರಿಕರಣಂಗಳ ಛಿದ್ರಗೊಳಿಸಿ, ಪಂಚಾಗ್ನಿಗಳ ಸಂಚಲವನತಿಗಳೆದು, ಇಂತೀ ಅಂಗ ಪ್ರಕೃತಿಗುಣಂಗಳೆಲ್ಲ ನಷ್ಟವಾಗಿ ಸರ್ವಾಂಗದಲ್ಲಿ ಸರ್ವಾಚಾರ ನೆಲೆಗೊಂಡು ಬಹಿರಂಗದ ಮೇಲಿದ್ದ ಇಷ್ಟಲಿಂಗದಲ್ಲಿ ನೈಷಿ*ಕಭಾವಂಬುಗೊಂಡು, ಅನಿಮಿಷದೃಷ್ಟಿ ಅಚಲಿತವಾಗಿ ಭಾವಬಲಿದಿರಲು, ಆ ಲಿಂಗವು ಅಂತರಂಗಕ್ಕೆ ವೇಧಿಸಿ ಪ್ರಾಣಲಿಂಗವೆನಿಸಿಕೊಂಡು ಷಡಾಧಾರಚಕ್ರಂಗಳಲ್ಲಿ ಷಡ್‍ವಿಧ ಲಿಂಗವಾಗಿ ನೆಲೆಗೊಂಬುದು. ಆ ಷಡ್‍ವಿಧ ಲಿಂಗಕ್ಕೆ ಷಡಿಂದ್ರಿಯಗಳನೆ ಷಡ್‍ವಿಧಮುಖಂಗಳೆನಿಸಿ, ಆ ಷಡ್‍ವಿಧ ಮುಖಂಗಳಿಗೆ ಷಡ್‍ವಿಧವಿಷಯಂಗಳನೆ ಷಡ್‍ವಿಧ ದ್ರವ್ಯಪದಾರ್ಥವೆನಿಸಿ, ಆ ಪದಾರ್ಥಂಗಳು ಷಡ್‍ವಿಧಲಿಂಗಕ್ಕೆ ಷಡ್‍ವಿಧ ಭಕ್ತಿಯಿಂದೆ ಸಮರ್ಪಿತವಾಗಲು, ಅಂಗವೆಂಬ ಕುರುಹು ಅಡಗಿ ಒಳಹೊರಗೆಲ್ಲ ಮಹಾಘನಲಿಂಗದ ದಿವ್ಯಪ್ರಕಾಶವೆ ತುಂಬಿ ತೊಳಗಿ ಬೆಳಗುತ್ತಿರ್ಪುದು. ಇಂತಪ್ಪ ಘನಲಿಂಗದ ಬೆಳಗನೊಳಗೊಂಡಿರ್ಪ ಚಿದಂಗವೆ ಚಿತ್‍ಪಿಂಡವೆನಿಸಿತ್ತು. ಇಂತಪ್ಪ ಅತಿಸೂಕ್ಷ್ಮವಾದ ಚಿತ್‍ಪಿಂಡದ ವಿಸ್ತಾರವನು ಚಿದ್‍ಬ್ರಹ್ಮಾಂಡದಲ್ಲಿ ವೇಧಿಸಿ ಕಂಡು, ಆ ಚಿದ್‍ಬ್ರಹ್ಮಾಂಡದ ಅತಿಬಾಹುಲ್ಯವನು ಆ ಚಿತ್‍ಪಿಂಡದಲ್ಲಿ ವೇಧಿಸಿ ಕಂಡು, `ಪಿಂಡಬ್ರಹ್ಮಾಂಡಯೋರೈಕ್ಯಂ' ಎಂಬ ಶ್ರುತಿ ಪ್ರಮಾಣದಿಂದ ಆ ಪಿಂಡಬ್ರಹ್ಮಾಂಡಗಳು ಒಂದೇ ಎಂದು ಕಂಡು, ಆ ಪಿಂಡಬ್ರಹ್ಮಾಂಡಂಗಳಿಗೆ ತಾನೇ ಆಧಾರವೆಂದು ತಿಳಿದು ಆ ಪಿಂಡಬ್ರಹ್ಮಾಂಡಗಳ ತನ್ನ ಮನದ ಕೊನೆಯಲ್ಲಿ ಅಡಗಿಸಿ, ಆ ಮನವ ಭಾವದ ಕೊನೆಯಲ್ಲಿ ಅಡಗಿಸಿ, ಆ ಭಾವವ ಜ್ಞಾನದ ಕೊನೆಯಲ್ಲಿ ಅಡಗಿಸಿ, ಆ ಜ್ಞಾನವ ಮಹಾಜ್ಞಾನದಲ್ಲಿ ಅಡಗಿಸಿ, ಆ ಮಹಾಜ್ಞಾನವನು ಪರಾತ್ಪರವಾದ ಪರಿಪೂರ್ಣ ಬ್ರಹ್ಮದಲ್ಲಿ ಅಡಗಿಸಿ, ಆ ಪರಬ್ರಹ್ಮವೆ ತಾನಾದ ಶರಣಂಗೆ ದೇಹಭಾವವಿಲ್ಲ. ಆ ದೇಹಭಾವವಿಲ್ಲವಾಗಿ ಜೀವಭಾವವಿಲ್ಲ. ಆ ಜೀವಭಾವವಿಲ್ಲವಾಗಿ ಫಲಪದಂಗಳ ಹಂಗಿಲ್ಲ. ಫಲಪದದ ಹಂಗಿಲ್ಲವಾಗಿ ಭವಬಂಧನಂಗಳು ಮುನ್ನವೆ ಇಲ್ಲ. ಭವಬಂಧನಂಗಳು ಇಲ್ಲವಾಗಿ, ಆ ಶರಣನು ತಾನು ಎಂತಿರ್ದಂತೆ ಪರಬ್ರಹ್ಮವೆ ಆಗಿ ಆತನ ಹೃದಯಾಕಾಶವು ಬಚ್ಚಬರಿಯ ಬಯಲನೈದಿಪ್ಪುದು. ಇದು ಕಾರಣ, ಆ ಶರಣನು ದೇಹವಿದ್ದು ಸುಟ್ಟಸರವಿಯಂತೆ ನಿರ್ದೇಹಿಯಾದ ಕಾರಣ ಉಪಮಾತೀತ ವಾಙ್ಮನಕ್ಕಗೋಚರನಾಗಿರ್ಪನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಮೂಲದ ಜ್ವಾಲೆಯೆತ್ತಿ, ಕಮಲವ ತಾಳಿ, ಮೇಲೊಂದು ಕೊಡನಿಪ್ಪುದು. ಆ ಕೊಡನುಕ್ಕಿ ಅಮೃತವನುಣ್ಣಬೇಕೆಂಬ ಯೋಗಿಗಳು ಕೇಳಿರೋ, ಅದು ಶರೀರದ ಮಾತಲ್ಲ. ಮೂಲದ ದ್ವಾರವೆಂಬುದು ಬಂದ ಬಟ್ಟೆ, ಕೊಡನೆಂಬುದು ಶರೀರ, ಆ ಶರೀರವನುಂಟು ಮಾಡದೆ ಮೇಲಿಪ್ಪ ರಂಧ್ರಪದವನೊದೆದು ಭಾವಕ್ಕೆ ಬಾರದ ಪರಿಯಲ್ಲಿ ನಿಂದುದು ಅಮೃತಸೇವನೆ. ಆ ಭಾವದಲ್ಲಿ ಅರಿದು ನಿಂದು ತನ್ನಯ ಕುರುಹಿನ ಸುಖವ ವೇಧಿಸಿ ಪರಿಭ್ರಮಣಕ್ಕೆ ಸಿಕ್ಕದೆ ನಿಂದ ನಿಜವು ಸದಾಶಿವಮೂರ್ತಿಲಿಂಗವು ತಾನೆ.
--------------
ಅರಿವಿನ ಮಾರಿತಂದೆ
ಮುಂದುಗಾಣದ ಮಾನವರು ಮತ್ತೊಂದನರಿಯದೆ ಕೆಟ್ಟರು. ಲಿಂಗವ ಪೂಜಿಸಿ, ಪ್ರಸಾದವ ವೇಧಿಸಿ, ಪ್ರಾಣಲಿಂಗ ಜಂಗಮವೆಂದರಿಯದೆ ಕೆಟ್ಟು ಹೋದರಯ್ಯಾ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ವೇದೋತ್ತರ ಸಂಧಿ ಉಪಸನ್ನೆ ಸಂಜ್ಞೆ ಉತ್ತರ ಚಿಂತನೆ ಖಂಡನೆಗಳಲ್ಲಿ ಭೃಗು, ದಧೀಚಿ, ಕಾಶ್ಯಪ, ಸಾಂಖ್ಯ, ಅಗಸ್ತ್ಯ ಮೊದಲಾದ ಋಷಿವರ್ಗಂಗಳೆಲ್ಲರು ವೇದದ ಕಡೆ ಮೊದಲೆಂದು ಪಠಿಸಿ ವೇಧಿಸಿ ಆ ವೇದ ಚಿಂತನೆಗೆ ಸಂದುದಿಲ್ಲ. ಇಂತೀ ವೇದ ಮೊದಲು ಶಾಸ್ತ್ರ ಆಗಮ ಪುರಾಣಂಗಳಲ್ಲಿ ಸನ್ನಿಧಿ ಸಮನ ಗಮನ ಪರಿಪೂರ್ಣವಾದುದಿಲ್ಲ. ಒಂದು ವೇದ ನಾಮದ ಶಾಖೆವೊಂದಕ್ಕೆ ಉಪನಯನ ಭೇದ ಸಂಖ್ಯೆ ಶತಸಹಸ್ರ ಪುನರಪಿಯಾಗಿ ಬಪ್ಪಲ್ಲಿ ಒಂದು ಅಧ್ಯಾಯ ಸಂಬಂಧದಿಂದ. ಆ ಸಂಬಂಧ ಶಾಖೆ ಉಚಿತವಹಾಗ ವಿಷ್ಣುವಿಂಗೆ ಪರಮಾಯು, ಬ್ರಹ್ಮಂಗೆ ಉಪನಯನವಿಲ್ಲ ಋಷಿವರ್ಗಕ್ಕೆ ವೇದೋಪದೇಶವಿಲ್ಲ. ಇಂತೀ ಶಂಕೆಯ ಸಂಕಲ್ಪದಲ್ಲಿ ನೋಡಿ ಕಂಡೆಹೆನೆಂದಡೆ ಚಕ್ರದ ಅಂಗುಲದ ಬಳಸಿನ ಲೆಕ್ಕದಂತೆ ಇಂತೀ ವೇದದ ಹಾದಿಯಲ್ಲ, ಶಾಸ್ತ್ರದ ಸಂದೇಹವಲ್ಲ. ಆಗಮಂಗಳಲ್ಲಿ ಭೇದ ವಿಭೇದವ ಕಂಡು ತರ್ಕಂಗಳಲ್ಲಿ ಹೋರುವ ಕುತರ್ಕಿಯಲ್ಲ. ಇಂತಿವ ನೇತಿಗಳೆದ ಸರ್ವಾಂಗಲಿಂಗಸಂಬಂಧವಾದ ಶರಣನು ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವೇ ಅಂಗವಾದ ನಿರಂಗನು.
--------------
ಪ್ರಸಾದಿ ಭೋಗಣ್ಣ
ಹೊರಗೆ ಅಗ್ನಿ ಉರಿವುತಿಪ್ಪುದಯ್ಯ. ಕುಂಭದೊಳಗೆ ಉದಕವಿಪ್ಪುದಯ್ಯ. ಅಗ್ನಿಯ ಸಂಪರ್ಕದ ದೆಸೆಯಿಂದ ಕುಂಭದೊಳಗಿರ್ದ ಉದಕವು ಹೇಂಗೆ ಉಷ್ಣವಹುದು ಹಾಂಗೆ ಸರ್ವೇಂದ್ರಿಯವನುಳ್ಳಪ್ರಾಣನು ತನ್ನ ಪೂರ್ವಗುಣವನು ಬಿಟ್ಟು ಲಿಂಗಕಳೆಯನೆ ವೇಧಿಸಿ ಪ್ರಾಣವೆ ಲಿಂಗವೆನಿಸಿಕೊಂಡಿತ್ತಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಲಿಂಗದಲ್ಲಿ ಪ್ರಾಣವನಿರಿಸಿ, ಪ್ರಾಣದಲ್ಲಿ ಲಿಂಗವನಿರಿಸಿ ನೆನೆವುತ್ತಿದ್ದ ಕಾರಣ, ಪ್ರಾಣ ಲಿಂಗವಾಯಿತ್ತು. ಆ ಲಿಂಗ ಸರ್ವಕರಣಂಗಳ ವೇಧಿಸಿ, ಕರಣಂಗಳು ಲಿಂಗ ಕಿರಣಂಗಳಾದ ಕಾರಣ ಒಳಗೆ ಕರತಳಾಮಳಕದಂತೆ ಲಿಂಗ ನೆಲೆಗೊಂಡಿತ್ತಾಗಿ ಹೊರಗೇನೆಂದೂ ಅರಿಯನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನೀವು ಪ್ರಾಣಲಿಂಗವಾಗಿ.
--------------
ಸ್ವತಂತ್ರ ಸಿದ್ಧಲಿಂಗ
ಭಕ್ತನ ಅಂಗಸ್ಥಲ, ಮಹೇಶ್ವರನ ಭಾವಸ್ಥಲ, ಪ್ರಸಾದಿಯ ಜ್ಞಾನಸ್ಥಲ, ಪ್ರಾಣಲಿಂಗಿಯ ಉಭಯಸ್ಥಲ, ಶರಣನ ಏಕಸ್ಥಲ, ಐಕ್ಯನ ಕೂಟಸ್ಥಲ. ಇಂತೀ ಆರುಸ್ಥಲವ ವೇಧಿಸಿ ನಿಂದಲ್ಲಿ, ಮಹದೈಕ್ಯ ಏಕಮೂರ್ತಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕಾಯದ ಕಳವಳದಲ್ಲಿ ಹುಟ್ಟಿ, ಸಂಸಾರವನೆ ವೇಧಿಸಿ, ವಿಷಯಂಗಳ ಕೊಂಡಾಡುವರಂತಿರಲಿ. ಬ್ರಹ್ಮಜ್ಞಾನವನೆ ಪೂರಯಿಸಿ ಭಾವವಂತರೆನಿಸಿ, ಲಿಂಗ ಮುಖವರಿಯದವರಂತಿರಲಿ. ತನುವ ತೊರೆದು [ಮನೋಮಧ್ಯದೊಳಗೆ] ಕಾಲವಂಚಕರಾದವರಂತಿರಲಿ, ಕೂಡಲಚೆನ್ನಸಂಗಯ್ಯನ ನಿಲವನರಿಯದ ಅಂಗರುಚಿಗಳವರಂತಿರಲಿ.
--------------
ಚನ್ನಬಸವಣ್ಣ
ಏರುವ ಇಳಿಯುವ ಆದಿಯ ಅನಾದಿಯನರಿದು, ಭೇದವ ತಿಳಿದು ಸಾಧಿಸಿ ನೋಡಿ, ಅಂತರಂಗದಲ್ಲಿ ವೇಧಿಸಿ ನೋಡುತಿರಲು, ಭೋಗ್ಯವಲ್ಲದ ಮಣಿ ಪ್ರಜ್ವಲವಾಯಿತ್ತು. ಆ ಬೆಳಗಿನೊಳಗೆ ಪಶ್ಚಿಮದ ಕದವ ತೆಗೆದು ಪರಮನೊಡಗೂಡಿ, ಬಚ್ಚಬರಿಯ ಬಯಲಬೆಳಗಿನೊಳಗಾಡುವ ಶರಣ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಉಪ್ಪಿನ ನೀರು ಹೆಪ್ಪ ಬಲಿದು ಘಟ್ಟಿಯಾದಂತೆ ಮತ್ತೆ ಅಪ್ಪುವ ಬೆರಸಿ ತನ್ನಂಗ ತಪ್ಪದಂತೆ, ಸಕಲ ಶಾಕಂಗಳಲ್ಲಿ ತನ್ನಯ ಇರವ ತೋರಿ ಕುರುಹಿಂಗೆ ಬಾರದಂತೆ ವಸ್ತು ಅಂಗದಲ್ಲಿ ತನ್ಮಯವಾಗಿ ವೇಧಿಸಿ ಉಭಯ ನಾಮವಳಿದು, ಸದಾಶಿವಮೂರ್ತಿಲಿಂಗದಲ್ಲಿ ಕೂಟಸ್ಥವಾಗಿರಬೇಕು.
--------------
ಅರಿವಿನ ಮಾರಿತಂದೆ
ಪರುಷರಸ ನಿರ್ಧರವಾದಲ್ಲಿ ಹೇಮವ ವೇಧಿಸಿ, ಹೇಮವಳಿದು ಪರುಷ ತಾನಾಗಬಲ್ಲಡೆ ಅದು ಪರುಷರಸಿದ್ಧಿ. ಗುರು ಮುಟ್ಟಿದ ಶಿಷ್ಯ ಗುರುವಾಗಬಲ್ಲಡೆ, ಲಿಂಗ ಮುಟ್ಟಿದ ಆತ್ಮ ಲಿಂಗವಾಗಬಲ್ಲಡೆ, ಆ ಅರಿವು ಅರಿವ ಭೇದಿಸಿದಂತೆ, ದೃಗ್ದೈಶ್ಯಕ್ಕೆ ಒಡಲು ಏಕವಾಗಿ ಕಾಬಂತೆ. ಆ ಗುಣ ಸದ್ಯೋಜಾತಲಿಂಗವ ಕೂಡಿದ ಭೇದ.
--------------
ಅವಸರದ ರೇಕಣ್ಣ
ವೈದ್ಯವೆಂದು ಮಾಡುವಲ್ಲಿ ನಾನಾಮೂಲಿಕೆ, ವನದ್ರವ್ಯ ಸಹ ಮುಂತಾಗಿ, ಲವಣ, ಪಾಷಾಣ, ಲೋಹ, ಪಂಚಸಿಂಧೂರಂಗಳಿಂದ ರಸ ದ್ರವ್ಯ ಮುಂತಾದ ಸಾರಂಗಳ ಕ್ರಮಂಗಳಲ್ಲಿ ಸರ ಸಂದಾನ ವಿಹಂಗ ಮೃಗ ನರ ಮತ್ತಿವರೊಳಗಾದ ನಾನಾ ಜೀವಂಗಳ ನಿಮಿತ್ಯವ ಪ್ರಮಾಣಿಸಿ, ತನ್ನಾತ್ಮಸಿದ್ಧಿಯಾಗಿ, ತಾ ಮಾಡಿದ ಔಷಧ ಪ್ರಸಿದ್ಧವಾಗಿ, ಇಂತಿವ ಪ್ರಮಾಣಿಸಿಕೊಂಡು, ಇದರ ರುಜೆಯ ಪರಿಹರಿಸಿದೆನೆಂಬಲ್ಲಿ, ಅವನ ದೃಷ್ಟಿ ಮುಟ್ಟಿ, ಸತ್ವ ಸಮಾಧಾನ ಅವಗಡಿಸಿದ ವ್ಯಾಧಿಯ ಚಿತ್ತವನರಿದು, ವೈದ್ಯವ ಲಕ್ಷಿಸಬೇಕು. ಅವನ ಶರೀರದ ಕಟ್ಟಳೆಯನರಿದು, ತನ್ನ ಔಷಧಿಯ ದೃಷ್ಟವ ಪ್ರಮಾಣಿಸಿ, ಅವನಂಗದ ಪೃಥ್ವಿಗುಣ, ಅಗ್ನಿಗುಣ, ವಾಯುಗುಣ, ಆಕಾಶಗುಣ, ಇಂತೀ ಪಂಚಗುಣ ಕರತಳನಾಡಿಯಲ್ಲಿದು ಆಡುವ ಐದು ಜೀವದ ಗುಣಮಂ ತಿಳಿದು, ಷಡಾಧಾರಂಗಳ ಸ್ವಸ್ಥಾನಮಂ ಮುಟ್ಟಿ ನೋಡಿ, ಆ ಮನ ವಿರೋಚನಕ್ಕೆ ಪ್ರಮಾಣದಲ್ಲಿ ಪ್ರಮಾಣಿಸಿ, ಸುಮನ ಸುಗತಿಯಲ್ಲಿ ಪಿಂಡ ಪ್ರಾಣಾರೋಗ್ಯದಿಂದ ರುಜೆಯ ಸಂಬಂಧವ ಮುರಿದವ ಪಂಡಿತನಪ್ಪ. ಅದರಂದವ ತಿಳಿದು ಬಂದೆ, ಸರ್ವಾಂಗಲಿಂಗಿಗಳಿಗೆ ಪಂಡಿತನಾಗಿ, ಮೂರ ಮುರಿದು, ಆರನರದು, ಏಳ ಕಿತ್ತು, ಎಂಟು ಗಂಟನಿಕ್ಕಿ, ಈರಾರ ಮಾರಿ, ಹದಿನಾರ ವೇಧಿಸಿ, ಇಪ್ಪತ್ತೈದು ನಷ್ಟವಮಾಡಿ, ಮುೂವತ್ತಾರ ತೂರಿ, ಗಾರುಮಾಡಿ, ಐವತ್ತೆರಡರ ಉಲುಹಿನ ಬಲೆಯ ಹರಿದು, ಸಿಂಧೂರ ಬಂದಿದೆ ಕೊಳಬಲ್ಲಡೆ ಕೊಳಬಾರದೆ ? ಕೊಂಡಡೆ ತ್ರಿವಿಧದ ತೊಟ್ಟು ಬಿಟ್ಟು, ಭವಮಾಲೆಯ ಕಟ್ಟಿದ ಕ್ರಮ ಒಡೆದು, ವಸ್ತುವಿನ ನಿಜನಿಳಯದ ಬಟ್ಟೆಯ ಹೋಹೆ. ಇದು ದೃಷ್ಟ, ಪ್ರಮಥರ ಪ್ರಸನ್ನ ಸಾಕ್ಷಿ. ಎನ್ನ ವೈದ್ಯದ ಕ್ರಮ ಸರ್ವವಿಕಾರದ ಭವಹರಿವ ತೆರ, ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗ ವೈದ್ಯ ವೈದ್ಯನಾದ.
--------------
ವೈದ್ಯ ಸಂಗಣ್ಣ
ಇನ್ನಷ್ಟು ... -->