ಕಳ್ಳನ ಕೈಯಲ್ಲಿ ಒಂದು ಒಳ್ಳಿಹ ರತ್ನವ ಕಂಡಡೆ ಎಲ್ಲರೂ ಬಂದು ತಲೆವಿಡಿವರಯ್ಯಾ. ಆ ರತ್ನವ ರತ್ನವ್ಯವಹಾರಿ ಕೊಟ್ಟು ಕೊಂಡಡೆ ಆರೂ ಬಾಯಲೆತ್ತಲಮ್ಮರು. ಶೈವ ಗುರುವಿನ ಕೈಯಲ್ಲಿ ಸಾಹಿತ್ಯವಾದ ಲಿಂಗವನು ವೀರಶೈವ ಗುರುವಿನ ಕೈಯಲ್ಲಿ ಕೊಟ್ಟು ಮರಳಿ ಕೊಂಡಡೆ ಆತ ಇಹಲೋಕ ಪೂಜ್ಯನು, ಪರಲೋಕ ಪೂಜ್ಯನು. ನಿಮ್ಮಾಣೆ, ನಿಮ್ಮ ಪ್ರಮಥರಾಣೆ ತಪ್ಪದು ರೇಕಣ್ಣಪ್ರಿಯ ನಾಗಿನಾಥಾ.
ಕೈಯ ಮರದು ಕಾದುವ ಅಂಕವದೇನೊ ? ಭಾವ ಮರದು ನೋಡುವ ನೋಟವದೇನೊ ? ಭಯವ ಮರದು ಮಾಡುವ ಭಕ್ತಿಯದೇನೊ ? ರೇಕಣ್ಣಪ್ರಿಯ ನಾಗಿನಾಥನಲ್ಲಿ ಗುರುವ ಮರದು ಲಿಂಗವನೊಲಿಸಿದೆನೆಂದಡೆ ಆ ಉಭಯ ಗುರುಲಿಂಗವೆರಡೂ ಇಲ್ಲ.