ಅಥವಾ

ಒಟ್ಟು 77 ಕಡೆಗಳಲ್ಲಿ , 32 ವಚನಕಾರರು , 72 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕ್ರೀವಿಡಿದು ಗುರುಸಂಬಂದ್ಥಿಯಾಗಿ, ಜಾÕನವಿಡಿದು ಲಿಂಗಸಂಬಂದ್ಥಿಯಾಗಿ. ಘನವಿಡಿದು ಮಹಾಜಾÕನಿಯಾಗಿ, ಅರಿವು ಆಚರಣೆಯ ಕಂಡು, ಜಾÕನ ಮುಕುರವೆಂಬ ಮುಂದಣ ಶ್ರೀಸಂಬಂದ್ಥಿಯಾಗಿ, ಆಚಾರದಲ್ಲಿ ಸಂಪನ್ನನಾಗಿ, ಮಹೇಶ್ವರಸ್ಥಲವನರಿದು, ಅದೇ ಜಂಗಮವಾದ ಬಳಿಕ ನಿರಾಕುಳನಾಗಿ ಆಚರಿಸಿದರೆ ಅನಾದಿ ಜಂಗಮವೆಂಬೆ. ಸಾಮವೇದೇ- ವಿವಚಾಸೋವಿಚಾ ಲಿಂಗಾಲಿಂಗಿ ಚ ಫಲಾದಿ ಬ್ರಹ್ಮರಾಕ್ಷಸ ಸೋವಿಸಂಗಶ್ಚ | ಸೂಕರ ಶತಕೋಟಿ ಜನ್ಮ ಚ ಸೋಪಿ ಕ್ರೀಡಾಲಿಂಗ ಮಲಮೂತ್ರ ಮಾಂಸ ಭುಂಜಿತಃ | ಬ್ರಹ್ಮೇನ ಕೋಟಿ ರಾಕ್ಷಸಃ ಸೋಸಂಗೇನ ಶತಕೋಟಿಗಾರ್ದಭ ಜನ್ಮ ಚ | ಅದೇ ದಾಸಿ ದಾಸೇ ಸೂಕರ ಸಂಗಶಃ ಚ ನಾಃ | ಸೋವ ಮಾತ್ರವೆಂದು ತಂದ ಸ್ತ್ರೀಗಳನು ಶಿಷ್ಯಾದಿ ಪುತ್ರರ ಕೈಯ ಗುರು ತಾಯಿ ಎಂಬ ನಾಮಕರಣಂಗಳನುಂಟುಮಾಡಿ, ತನ್ನ ಅಂಗವಿಕಾರಕ್ಕೆ ತಂದ ಸಂತೆಯ ಡೊಂಬಿತಿಯ ತಂದು, ಹಿರಿಯರಲ್ಲಿ ಸರಿಮಾಡುವ ಜಂಗಮವೆ ಗುರುವೆ? ಅಜಾÕನ ಪುರುಷನಲ್ಲ, ಅವ ಹಿರಿಯತನಕ್ಕೆ ಸಲ್ಲ, ಅವಂಗೆ ಗುರುವಿಲ್ಲ ಲಿಂಗವಿಲ್ಲ, ಜಂಗಮ ಮುನ್ನವೆಯಿಲ್ಲ. ಅವ ಘಟಾತ್ಮನು ಸೋವಿಯ ಸಂಗ ಬೇಡ ಬಿಡಿರಣ್ಣಾ, ಸೋವಿಯ ಸಂಗವ ಮಾಡಿದರೆ ಶತಕೋಟಿ ದಾಸಿಯ ಬಸುರಲ್ಲಿ ಬಂದು, ಹೇಸಿಕೆಯಿಲ್ಲದೆ ಮಲಮೂತ್ರವನು ಹೇಗೆ ಸೂಕರ ಭುಂಜಿಸುವುದೊ ಹಾಂಗೆ ಭುಂಜಿಪನು. ನಾನಾ ಯೋನಿಯ ನರಕುವದು. ಸೋವಿ ಮಾತ್ರೇಣ ಆ ಲಿಂಗನಂ ಗುರು ತಾಯ ಅಪಮಾನ ಸಾಮಾನ್ಯವೆಂದು ಸೋವಿಯ ಸಂಗವ ಮಾಡಿದಡೆ ಎಪ್ಪತ್ತೇಳುಕೋಟಿ ಶ್ವಪಚಯೋನಿ ತಪ್ಪದಯ್ಯ. ಹನ್ನೆರಡು ಕಂಬ ಸಾಕ್ಷಿಯಾಗಿ, ಕಳಕನ್ನಡಿ ಸಾಕ್ಷಿಯಾಗಿ, ತೆಳೆಮಲು ಕಟ್ಟಿ ಸಾಕ್ಷಿಯಾಗಿ, ಆಯಿರಣೆಕೋಲು ಸಾಕ್ಷಿಯಾಗಿ, ಮುತ್ತೈದೆತನದಲ್ಲಿ ಶ್ರೇಷ್ಠಯಾಗಿ, ಜಾÕನ ದೃಕ್ಕಿನಿಂ ತಿಳಿದು, ಅನುಭಾವದ ಮುಖವನರಿದಂತೆ, ಆ ಜಾÕನನೇತ್ರವ ಅರಿದು ಧಾರೆಯನೆರೆಸಿಕೊಂಡು, ಅರಿವಿನಲ್ಲಿ ಇರದೆ ಕುರಿಯ ಹೇಲ ತಿಂಬಂತೆ, ಬಾಯಿಗೆ ಬಂದಂತೆ ಸೋವಿಯ ಸಂಗವ ಮಾಡುವವರ ಸರ್ವಾಂಗವೆಲ್ಲ ಗಣಿಕೆಯ ಯೋನಿಯ ಬಸುರ ನೋಡಾ. ಧಾರೆಯನೆರೆಸಿಕೊಂಡು ಕ್ರೀವಿಡಿದು ನಡೆಯದೆ, ತೊತ್ತಿನ ಮಗನಿಗೆ ಪಟ್ಟ ಕಟ್ಟಿದರೆ ಹಾದಿಯ ಎಲುವ ಕಂಡು ಓಡಿಹೋಗಿ ಗಡಗಡನೆ ಕಡಿವಂತೆ, ಸೋವಿಯ ಎಂಜಲ ತಿಂದವಂಗೆ ಗುರುವಿಲ್ಲ. ಅವ ದೇವಲೋಕ ಮತ್ರ್ಯಲೋಕ ಎರಡಕ್ಕೆ ಸಲ್ಲ. ಆವಾಗಮದಲ್ಲಿ ಉಂಟು, ಗಳಹಿ ಹೇಳಿರೊ, ಮಕ್ಕಳಿರಾ. ನೀವು ಬಲ್ಲರೆ ಕಾಳನಾಯ ಹೇಲ ತಿಂಬಂಗೆ ಹಿರಿಯನೆಂದು, ಹೋತನಂತೆ ಗಡ್ಡವ ಬೆಳಸಿಕೊಂಡು ಗುಡರಗುಮ್ಮನಂತೆ ಸುಮ್ಮನಿರುವಿರಿ. ಗರ್ವತನಕ್ಕೆ ಬಂದು ಹಿರಿಯರೆಂದು ಆಚರಣೆ ನ್ಯಾಯವ ಬಗಳುವಿರಿ. ಸೋವಿಸಂಗದಿಂದ ಕನಿಷ್ಠ ನರಕ ಕಾಣಿರಣ್ಣಾ. ಸೋವಿಯ ಸಂಗವ ಬಿಟ್ಟು ಧಾರೆಯ ಸ್ತ್ರೀಯಳ ನೆರದರೆ, ಆಚಾರವಿಡಿದು ನಡೆದು ಆಚರಣೆಯ ನುಡಿದರೆ ಶುದ್ಧವಾಗುವದಲ್ಲದೆ ತೊತ್ತಿನ ಮಗನಾಗಿ ಎಡೆಯ ಸಮಗಡಣವ ಬೇಡುವ ಪಾತಕರ, ಅವರ ಜಂಗಮವೆಂಬೆನೆ? ಸೋವಿಯ ಸಂಗದಿಂದ ಬಂದುದು ಬ್ರಹ್ಮೇತಿ. ಅಥರ್ವಣ ಸಾಮವೇದ ಯಜುರ್ವೇದ ಋಗ್ವೇದ ಇಂತಪ್ಪ ನಾಲ್ಕು ವೇದದಲ್ಲಿ ಶ್ರುತಿ ಸ್ಮøತಿಗಳಲ್ಲಿ ಆಗಮ ಪುರಾಣಂಗಳಲ್ಲಿ ಸೋವಿಯ ವಾಚ್ಯವೆಂಬುದುಂಟೆ ಪರಮಪಾತಕರಿರಾ? ನೂತನವ ಗಂಟಿಕ್ಕಿ ಜಗಲಿಯೆನ್ನದೆ ಪಟ್ಟಶಾಲೆಯೆಂಬಿಂ ತೊಂಡರಿರಾ. ತೊತ್ತನೊಯ್ದು ತೊತ್ತೆದಾಸಿ ಬಾಯೆನ್ನದೆ ಹೋವಿಯೆಂದು ಬಗಳುವಿರಿ. ಕಲಿಯುಗದಲ್ಲಿ ನೂತನದ ಸೂಳೆಯ ಮಕ್ಕಳು ನೀವು. ಸೋವಿಯ ಸಂಗವ ಮಾಡಿದವನು ಅರಿವುಳ್ಳ ಪುರುಷನಾದರೂ ಆಗಲಿ, ಅರಿದು ಮತ್ತೆ ಅರೆಮರುಳಾದ ಹಿರಿಯರನೇನೆಂಬೆನಯ್ಯಾ. ಅವನು ಪಾತಕನಘೋರಿಗಳು. ಅವರು ಇವರುವನರಿಯದ ಅಘೋರಿಗಳೆಂಬ ಇಂತಪ್ಪ ಸೋವಿಯ ಸಂಗವ ಮಾಡುವ ಬ್ರಹ್ಮೇತಿಕಾರ ಪಂಚಮಹಾಪಾತಕರು ಇಹಪರಕ್ಕೆ ಸಲ್ಲರೆಂದುದು. ನಿಮ್ಮಾಣೆ ನಿಮ್ಮ ಪ್ರಮಥರಾಣೆ, ಇಹವಿಲ್ಲ ಪರವಿಲ್ಲ, ಮುಕ್ತಿಯ ಫಲವಿಲ್ಲ, ಅಘೋರವಲ್ಲದೆ ಮತ್ತೇನೂ ಇಲ್ಲ. ನಿಮ್ಮಾಣೆ ಬ್ಥೀಮಬಂಕೇಶ್ವರಾ.
--------------
ಭೀಮಬಂಕೇಶ್ವರ
ಸಚ್ಚಿದಾನಂದ ಬ್ರಹ್ಮೋಪದೇಶ ಭಕ್ತಮಹೇಶ್ವರರು ಪರಮಪಾತಕಸೂತಕಂಗಳ ಬಾಹ್ಯಾಂತರಂಗದಲ್ಲಿ ಹೊದ್ದದೆ, ಸತ್ಯಶರಣರು ಮಾಡುಂಡುದೊಂದು ಕಾಯಕ, ಬೇಡುಂಡುದೊಂದು ಕಾಯಕದಿಂದ ಗಳಿಸಿದಂಥ ಪದಾರ್ಥಗಳ, ಗುರುಚರಪರಸ್ಥಿರಕ್ಕೆ ಷಟ್‍ಸ್ಥಲಸಂಬಂಧಗಳಿಂದ, ಷಡ್ವಿಧಮಂತ್ರಗಳ ಸೊಮ್ಮಿನಿಂ ಸಂತೃಪ್ತರಾಗಿರ್ಪುದು. ಆ ನಿಲುಕಡೆಯೆಂತೆಂದಡೆ : ಶ್ರುತಿಗುರುಸ್ವಾನುಭವ ಸಾಕ್ಷಿಯಾಗಿ, ಶ್ರೀಗುರುಲಿಂಗಜಂಗಮವೆ ಪರಾತ್ಪರವೆಂದು ಕಂಡು, ಷಡುಸ್ಥಲಮಾರ್ಗವಿಡಿದು, ತನ್ನ ನಿಜವ ತಾನರಿಯದೆ, ಭವಿಶೈವ ಬ್ಥಿನ್ನ ಕರ್ಮಿಗಳಂತೆ ಭಾವಭ್ರಮೆಗೆಟ್ಟು, ಹೊಲಬುದಪ್ಪಿ, ಭೋಗಾಪೇಕ್ಷಿತರಾಗಿ, ಹಲವು ಶಾಸ್ತ್ರೋಪದೇಶವಿಡಿದು, ಕಾಶಿ ರಾಮೇಶ್ವರ ಕಂಚಿ ಕಾಳಹಸ್ತಿ ಪಂಪಾಕ್ಷೇತ್ರ ಗೋಕರ್ಣ ಶ್ರೀಶೈಲಾದಿಯಾದ ತೀರ್ಥಯಾತ್ರೆ, ವೀರಣ್ಣ ಬಸವಣ್ಣ ಮಲ್ಲಣ್ಣ ಹಾವಿಗೆ ದಂಡಾಗ್ರ ಗಿಳಿಲು ಶಂಖ ಭಸ್ಮಗುಂಟಿಕೆ ತೀರ್ಥದಗುಂಬ ಹಾದಿಬೆನವ ಹಳ್ಳದ ಬೆನವ ವಾಸರದಯ್ಯ ವಿನಾಯಕ ಶಕ್ತಿ ಗಣೇಶ ಚಂಡಿ ಚಾಮುಂಡಿಯಲ್ಲಿ ಏಕನಾತಿ ಹಿರಿಹೊಳೆ ಜಟ್ಟಿಂಗ ತೆಪ್ಪದಾರತಿ ಪಂಚಪಾಂಡವರು ಬನ್ನಿಮಹಾಂಕಾಳಿ ತುಳಸಿ ಬಿಲ್ವವೃಕ್ಷ ಸಮಾದ್ಥಿ ಗದ್ದುಗೆ ಪುರಾಣ ವಚನಾರ್ಥಪುಸ್ತಕ ಲೆಕ್ಕದ ಓಹಿ ಕತ್ತಿ ಕಂಡೇಪೂಜೆ, ಊರಬೀರ ಪೀರ ಗೋರಿ ಸತ್ತವರ ತಿಥಿ ಚಿತ್ತಹೊಲೆ ಕರ್ಮದ ಗಂಗೆ ಗುಗ್ಗುಳ ಗೌರೀನೋಂಪಿ ದೀಪಹರಕೆ ಪೂಜೆ ಕರಿಯಸೀರೆ ಊರ ಮಾರಿದೇವತೆ ಅಂಬಲಿ ಮಜ್ಜಿಗೆ ಕುಂಭ ಹೊಸ್ತಲ ಮದುವೆಯಕಂಭ ಕುಂಭ ಸರಕಿನಗಂಟು ಮಹತ್ವ ಮೆರೆದವರ ಪಾದಮುದ್ರೆ ಕಡೆಯಾದವಕ್ಕೆ, ತನ್ನ ಕಾಯ ವಾಚ ಮನದಲ್ಲಿ ಹೊಳೆದು, ಪಿತ-ಮಾತೆ ಸತಿ-ಸುತ ಒಡಹುಟ್ಟಿದವರು ಸೇವಕ ಕಡೆಯಾದವರಿಂದೆ ತನ್ನ ಮನೆಯಲ್ಲಿ ಮಾಡಿದ ಎಡೆ ವಾರಮೃತ್ಯೋದಕ, ಪಾದೋದಕಸಂಬಂಧವಾದ, ವಿಭೂತಿ-ಗಂಧಾಕ್ಷತೆ-ಪುಷ್ಪ-ಪತ್ರಿ ಧೂಪ-ದೀಪ ಹಣ್ಣು-ಕಾಯಿ ವಸ್ತ್ರಾಭರಣ-ಪಂಚಕಳಸ ಕಾಣಿಕೆ ಮೊದಲಾದ ಬ್ಥಿನ್ನವ ಕರ್ಮಕ್ರಿಯಾಚಾರಲಿಂಗಬಾಹ್ಯರಾದ ಬ್ರಹ್ಮ ಕ್ಷತ್ರಿಯ ವೈಶ್ಯ ಶೂದ್ರ ಪಾಶುಪತ ಕಾಳಾಮುಖಿ ಯೋಗಿ-ಜೋಗಿ ಶ್ರವಣ-ಸನ್ಯಾಸಿ ಯತಿ-ವ್ರತಿ ಮನು-ಮುನಿ ಗರುಡ-ಗಂಧರ್ವ ಯಕ್ಷ-ರಾಕ್ಷಸ ಸಿದ್ಧ-ಸಾಧ್ಯರುಪದೇಶವಿಡಿದು ಚರಲಿಂಗೋದಯಘನಪಾದತೀರ್ಥವರ್ಪಿಸಿ, ನೈವೇದ್ಯ ಮಾಡಿಸುವಂಥಾದ್ದೆ ಅನಾಚಾರ. ಇದೇ ಭವಿಮಾಟಕೂಟ ಅಸತ್ಯದ ನಡೆನುಡಿಯ ವಿಚಾರದ ಪ್ರಥಮಪಾತಕ. ಇದಕ್ಕೆ ಹರನಿರೂಪ ಸಾಕ್ಷಿ : ``ಶಿವಾಚಾರಸುಸಂಪನ್ನಃ ಕೃತ್ವ್ದಾನ್ಯದೈವಸ್ಯ ಪೂಜನಂ | ಶ್ವಾನಯೋನಿಶತಂ ಗತ್ವಾ ಚಾಂಡಾಲಗೃಹಮಾಚರೇತ್ || ಅನಾಚಾರಿಕೃತಂ ಪಾಕಂ ಲಿಂಗನೈವೇದ್ಯಕಿಲ್ಬಿಷಂ | ಲಿಂಗಾಚಾರಿಕೃತಂ ಪಾಕಂ ಲಿಂಗನೈವೇದ್ಯಮುತ್ತಮಂ || ತದ್ದಿನಂ ದಿನದೋಷೇಣ ಶೋಣಿತಂ ಸುರಾಮಾಂಸಯೋಃ | ಏಕಭುಕ್ತೋಪವಾಸೇನ ನರಕೇ ಕಾಲಮಕ್ಷಯಂ || ಸೌಮೇ ಭೌಮೇ ವ್ಯತಿಪಾತೇ ಸಂಕ್ರಾಂತಿಶಿವರಾತ್ರಿಯೋ | ಶೈವಕರ್ಮೋಪವಾಸಿನಾಂ ನರಕೇ ಕಾಲಮಕ್ಷಯಂ || ಕಾರ್ತೀಕಮಾಘಶ್ರಾವಣ ಶೈವಪೂಜಾವಿಶೇಷತಃ | ವೀರಶೈವಸ್ತಥಾ ಕೃತ್ವಾ ಸನ್ತಶ್ಟ ಪ್ರಾಕೃತೈಃ ಸಮಾಃ || ಸ್ಥಾವರಾರ್ಪಿತನೈವೇದ್ಯಾತ್ ನ ತೃಪ್ತಿರ್ಮಮ ಪಾರ್ವತಿ | ಜಂಗಮಾರ್ಪಿತನೈವೇದ್ಯಾತ್ ಮಮ ತೃಪ್ತಿಶ್ಚ ಸರ್ವದಾ || ಸತ್ಪಾತ್ರದತ್ತವಿತ್ತಸ್ಯ ತದ್ಧನಂ ಸ್ವಧನಂ ಸುಖಂ | ಅಪಾತ್ರದತ್ತ ವಿತ್ತಸ್ಯ ತದ್ಧನಂ ಸ್ವಸುಖಂ ಭವೇತ್ || ಚರಸ್ಯ ಗಮನೋ ನಾಸ್ತಿ ಭಕ್ತಸ್ಯ ಗೃಹಮಾಚರೇತ್ | ಅನ್ಯಗೃಹಂ ಗಮಿಷ್ಯಂತಿ ಸದ್ಯೋ ಗೋಮಾಂಸಭಕ್ಷಣಮ್ || ಇಷ್ಟಲಿಂಗಮವಿಶ್ವಸ್ಯ ಅನ್ಯದೈವಮುಪಾಸತೇ | ಶ್ವಾನಯೋನಿ ಶತಂ ಗತ್ವಾ ಚಾಂಡಾಲಗೃಹಮಾಚರೇತ್ || ಬಹುಲಿಂಗಪೂಜಕಸ್ಯ ಬಹುಭಾವಗುರುಸ್ತಥಾ | ಬಹುಪ್ರಸಾದಂ ಭುಂಜಂತಿ ವೇಶ್ಯಾಪುತ್ರಸ್ತಥೈವ ಚ || ಅಭಕ್ತಜನಸಂಗಶ್ಚ ಮಂತ್ರಸ್ಯ ಚ ಆಗಮಃ | ಅನ್ಯದೈವಪರಿತ್ಯಾಗಃ ಲಿಂಗಭಕ್ತಸ್ಯ ಲಕ್ಷಣಂ || ಲಿಂಗಧಾರಕಭಕ್ತಾನಾಂ ಲಿಂಗಬಾಹ್ಯಸತೀಸುತಾಃ | ಆಲಿಂಗಿತಾ ಚುಂಬಿತಾಶ್ಚ ರೌರವಂ ನರಕಂ ವ್ರಜೇತ್ ||'' ಇಂತೆಂಬ ಹರಗುರುವಾಕ್ಯಪ್ರಮಾಣವದಾಗಿ, ಸದ್ಭಕ್ತಶರಣಗಣಾರಾಧ್ಯರು ಭೂಪ್ರತಿಷ್ಠಾದಿಗಳ ಹೊದ್ದಿದಡೆ, ಭವಬಂಧನವಪ್ಪದು ತಪ್ಪದು. ಅದು ಕಾರಣವಾಗಿ ಗುರುಮಾರ್ಗಿಕರು ಹೊದ್ದದೆ, ಭವಸಾಗರವ ದಾಂಟಿ, ನಿರ್ಧರದಿಂದಿಪ್ಪುದೊಂದು ನರಗುರಿಗಳ ಪ್ರಥಮಪಾತಕನಿರಸನ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಈರೇಳು ಲೋಕವನೊಳಕೊಂಡ ಮಹಾಘನಲಿಂಗವು ಭಕ್ತನ ಕರಸ್ಥಲಕ್ಕೆ ಬಂದು ಪೂಜೆಗೊಂಬ ಪರಿಯ ನೋಡಾ. ಅಗಮ್ಯ ಅಗೋಚರ ಅಪ್ರಮಾಣ ಲಿಂಗಸಂಗದಲ್ಲಿ ಇರಬಲ್ಲಾತನೇ ಭಕ್ತನು. ಹೀಗಲ್ಲದೆ ಕೇಡಿಲ್ಲದೆ ಲಿಂಗಕ್ಕೆ ಕೇಡ ಕಟ್ಟಿ ಹೋದೀತೋ ಇದ್ದೀತೋ ಅಳಿದೀತೋ ಹೇಗೋ ಎಂತೋ ಎಂದು ಚಿಂತಿಸಿ ನುಡಿವರು ಬ್ಥಿನ್ನವಿಜ್ಞಾನಿಗಳು. ಆ ಲಿಂಗದೊಳಗೆ ಅಖಿಳಾಂಡಕೋಟಿ ಬ್ರಹ್ಮಾಂಡಗಳಡಗಿದವು. ಸಾಕ್ಷಿ : 'ಲಿಂಗಮಧ್ಯೇ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಂ | ಲಿಂಗಬಾಹ್ಯಾತ್ ಪರಂ ನಾಸ್ತಿ ತಸ್ಮಾಲ್ಲಿಂಗಂ ಪ್ರಪೂಜಯೇತ್ ||' ಎಂದುದಾಗಿ, ಇಂತಪ್ಪ ಘನಲಿಂಗವ ಶ್ರೀಗುರು ಭಕ್ತಂಗೆ ಕರ-ಮನ-ಭಾವಕ್ಕೆ ಪ್ರತ್ಯಕ್ಷವಾಗಿ ಮಾಡಿಕೊಟ್ಟ ಬಳಿಕ ಎಂದಿಗೂ ಅಗಲಬೇಡಿಯೆಂದು ಗಣಸಾಕ್ಷಿಯಾಗಿ ಮಾಡಿಕೊಟ್ಟ ಬಳಿಕ ಅಗಲಲುಂಟೆ ? ಅಗಲಿದಡೆ ಲಿಂಗವು ಗುರುತಲ್ಪಕವೆ ಸರಿ. ಆವ ಶಾಸ್ತ್ರ ಆವ ಆಗಮ ಆವ ವಚನ ಹೇಳಿಲ್ಲವಾಗಿ, ಮತ್ತಂ, ಸಂಪಿಗೆಯ ಪುಷ್ಪದ ಪರಿಮಳ ಬೇರೆ ಆಗಲುಂಟೆ ? ಇಂತಪ್ಪ ಮಹಾಘನಲಿಂಗವು ಹೇಗಿಪ್ಪುದೆಂದಡೆ : ಅವರವರ ಮನ ಭಾವ ಹೇಗಿಪ್ಪುದೊ ಹಾಗಿಪ್ಪುದು. ಇದಕ್ಕೆ ದೃಷ್ಟಾಂತ : ಉದಕ ಒಂದೇ, ಹಲವು ವೃಕ್ಷದ ಹಣ್ಣು ಮಧುರ ಒಗರು ಖಾರ ಹುಳಿ ಕಹಿ ಸವಿ. ಉದಕ ಒಂದೇ, ಶ್ವೇತ ಪೀತ ಹರಿತ ಮಾಂಜಿಷ್ಟ ಕಪೋತ ಮಾಣಿಕ್ಯ. ಈ ಆರು ವರ್ಣಂಗಳಲ್ಲಿ ಬೆರೆದುದು ಅಭ್ರಕ ಒಂದೇ! ಈ ಅಭ್ರಕ ಹೇಗೊ ಹಾಗೆ ಮನ, ಹಾಗೆ ಮಹಾಲಿಂಗ. ಹೀಗೆಂದರಿದಾತ ನಮ್ಮ ಶಾಂತಕೂಡಲಸಂಗಮದೇವ ಬಲ್ಲನಲ್ಲದೆ ಬ್ಥಿನ್ನಜ್ಞಾನಿಗಳು ಎತ್ತ ಬಲ್ಲರು ನೋಡಾ!
--------------
ಗಣದಾಸಿ ವೀರಣ್ಣ
ವೇದ ಘನವೆಂಬುದೊಂದು ಸಂಪಾದನೆ. ಶಾಸ್ತ್ರ ಘನವೆಂಬುದೊಂದು ಸಂಪಾದನೆ. ಪುರಾಣ ಘನವೆಂಬುದೊಂದು ಸಂಪಾದನೆ. ಆಗಮ ಘನವೆಂಬುದೊಂದು ಸಂಪಾದನೆ. ಅಹುದೆಂಬುದೊಂದು ಸಂಪಾದನೆ. ಅಲ್ಲವೆಂಬುದೊಂದು ಸಂಪಾದನೆ. ಗುಹೇಶ್ವರನೆಂಬ ಮಹಾಘನದ ನಿಜಾನುಭಾವಸಂಪಾದನೆಯ ಅರಿಯದ ಕಾರಣ ಹಲವು ಸಂಪಾದನೆಗಳಾದವು.
--------------
ಅಲ್ಲಮಪ್ರಭುದೇವರು
ವೇದ ನಡನಡುಗಿತ್ತು, ಶಾಸ್ತ್ರವಗಲಿ ಕೆಲಕ್ಕೆ ಸಾರಿದ್ದಿತಯ್ಯಾ ! ತರ್ಕ ತರ್ಕಿಸಲರಿಯದೆ ಮೂಗುವಟ್ಟಿದ್ದಿತಯ್ಯಾ ! ಆಗಮ ಹೆರತೊಲಗಿ ಅಗಲಿದ್ದಿತಯ್ಯಾ ! ನಮ್ಮ ಕೂಡಲಸಂಗಯ್ಯನು ಮಾದಾರ ಚೆನ್ನಯ್ಯನ ಮನೆಯಲುಂಡ ಕಾರಣ.
--------------
ಬಸವಣ್ಣ
ಜಗವೊಂದೆಸೆ, ತಾನೊಂದೆಸೆ, ಮತ್ತಾ ಜಗದೊಳಗೆ ತಾ, ತನ್ನೊಳಗೆ ಜಗ. ಆಗಮವೊಂದೆಸೆ, ತಾನೊಂದೆಸೆ, ಮತ್ತಾ ಆಗಮದೊಳಗೆ ತಾ, ತನ್ನೊಳಗೆ ಆಗಮ. ವಿದ್ಥಿಯೊಂದೆಸೆ, ತಾನೊಂದೆಸೆ, ಮತ್ತಾ ವಿದ್ಥಿಯೊಳಗೆ ತಾ, ತನ್ನೊಳಗೆ ವಿದ್ಥಿ. ಕ್ರೀಯೊಂದೆಸೆ, ತಾನೊಂದೆಸೆ, ಮತ್ತಾ ಕ್ರೀಯೊಳಗೆ ತಾ, ತನ್ನೊಳಗೆ ಕ್ರೀ. ಇಂತೀ ಜಗ, ಆಗಮ, ವಿದ್ಥಿ, ಕ್ರೀ ನಿಷೇಧವಾಗಿ, ಹೊದ್ದಿಯೂ ಹೊದ್ದನು, ನೀರ ತಾವರೆಯಂತೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ವೇದ ಯೋನಿಯ ಹಂಗು. ಶಾಸ್ತ್ರ ಯೋನಿಯ ಹಂಗು. ಪುರಾಣ ಯೋನಿಯ ಹಂಗು. ಆಗಮ ಯೋನಿಯ ಹಂಗು. ನಾದದಿಂದ ಉದಿಸಿದವು ಶ್ರೋತ್ರದ ಹಂಗು. ಹೇಳುವುದು ವೆಜ್ಜ, ಕೇಳುವುದು ವೆಜ್ಜ, ತಾ ಹಿಂದೆ ಬಂದುದು ವೆಜ್ಜ, ಈಗ ನಿಂದು ಮಾಡುವುದು ವೆಜ್ಜ. ಇಂತೀ ವೆಜ್ಜದಜ್ಜೆಯ ಗುದ್ದಿನಲ್ಲಿ ಬಿದ್ದವರಿಗೆ ನಿರ್ಧರವಿಲ್ಲ ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ವೇಷವ ಧರಿಸಿ, ಭಾಷೆಯ ಕಲಿತು, ದೇಶವ ಸುತ್ತಿ ಬಳಲಬೇಡ. ಜಗದೀಶನ ಪಾದವನೊಲಿದು ಪೂಜಿಸಿರಣ್ಣಾ. ಸವಿಯೂಟದಾಸೆಗೆ ಮನವೆಳಸಬೇಡ. ಪರಮೇಶನ ಪಾದವ ನೆನೆದು ಸುಖಿಸಿರಣ್ಣಾ. ತರ್ಕಶಾಸ್ತ್ರ ಆಗಮ ಮಾಯಾಜಾಲದ ಹರಟೆಗೆ ಹೊಗದೆ, ಮೂಲಮಂತ್ರ[ವ] ಮರೆಯದೆ ಸ್ಮರಿಸಿರಣ್ಣಾ. ಸಂಸಾರಿಗಳ ಸಂಗದೊಳಗೆ ಇರಬೇಡ. ಸದ್ಭಾವರ ಸಂಗದೊಳಗಿರ್ದು ನಿತ್ಯವ ಸಾದ್ಥಿಸಿಕೊಳ್ಳಿರಣ್ಣಾ. ಪರರ ಯಾಚಿಸಿ ತನುವ ಹೊರೆಯಬೇಡ. ಶಿವನಿಕ್ಕಿದ ಬ್ಥಿಕ್ಷೆಯೊಳಗಿದ್ದು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನನೊಲಿಸಿರಣ್ಣಾ.
--------------
ಸ್ವತಂತ್ರ ಸಿದ್ಧಲಿಂಗ
ಮಾಡುವ ಮಾಟದವರೆಲ್ಲರೂ ಆರೈಕೆಗೊಂಬವರಿಲ್ಲದಿರೆ, ಕೋಡಗ ಸತ್ತ ಜೋಗಿಯಂತಾದರು. ಆಗಮ ಹೇಳುವ ಅಣ್ಣಗಳೆಲ್ಲರೂ ಕೊಡುವರಿಲ್ಲದಿರೆ, ಹಾವ ಹಿಡಿದ ಕೋಡಗದಂತಾದರು. ನಾನಿನ್ನಾರ ಕೇಳುವೆ, ಇನ್ನಾರಿಗೆ ಹೇಳುವೆ. ನಾನಂಜುವೆ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
--------------
ಸಗರದ ಬೊಮ್ಮಣ್ಣ
ಪರಶಿವತತ್ವದ ಸ್ವರೂಪವ ಬಲ್ಲೆವೆಂಬಿರಿ, ನಿಮ್ಮ ಬಲ್ಲತನವ ಪೇಳಿರಯ್ಯಾ. ಆಗಮ ಪುರುಷರಿರಾ, ನಿಮ್ಮಾಗಮಂಗಳು ನಮ್ಮ ಶಿವನ ನಿಲುಕಡೆಯನರಿಯದೆ, ಅರಸಿ ಅರಸಿ ಆಸತ್ತು ಬಳಲಿ ಹೋದವು ಕೇಳಿರಯ್ಯಾ. ವೇದಪುರುಷರಿರಾ, ನಿಮ್ಮ ವೇದಂಗಳು ವೇದಿಸಲರಿಯದೆ ನಾಯಾಗಿ ಬೊಗಳಿ, ಬೆಂಡಾಗಿ ಹೋದವು ಕೇಳಿರಯ್ಯಾ. ಪುರಾಣಪುರುಷರಿರಾ, ನಿಮ್ಮ ಪುರಾಣಂಗಳು ಪೂರೈಸಿ ಪರಶಿವನ ಕಾಣದೆ ವೀರಶೈವ ಪುಂಡ್ರಮಸ್ತಕದಿಂದ ಮಥನಿಸಿ ಹೋದವು ಕೇಳಿರಯ್ಯಾ. ಶಾಸ್ತ್ರಸಂದ್ಥಿಗಳರಿರಾನಿಮ್ಮಶಾಸ್ತ್ರ ಸಾದ್ಥಿಸಿ ನಮ್ಮ ಪರಶಿವನ ನಿಲುಕಡೆಯ ಕಾಣದೆ ಒರಲಿ ಒರಲಿ ಹೋದವು ಕೇಳಿರಯ್ಯಾ. ತರ್ಕ ತಂತ್ರಗಳ ಕಲಿತು ಹೇಳುವರೆಲ್ಲ ಟಗರು, ಕೋಣ, ಹುಂಜಿನಂತೆ ಹೋರಾಡಿ ಮಥನದಿಂದ ಹೊಡೆದಾಡಿ ಪರಶಿವನ ಕಾಣದೆ ಸತ್ತು ಹೋದರಲ್ಲಾ ! ಇಂತೀ ವೇದ ಶಾಸ್ತ್ರಗಮ ಪುರಾಣ ತರ್ಕ ತಂತ್ರಗಳು ಶಿವನ ನಿಲುಕಡೆಯನೆಂದಿಗೂ ಅರಿಯವು. ಇಂತಿವನೆಲ್ಲವನು ನೋಡಿ ಶಿವನ ಕೂಡಬೇಕೆಂಬಣ್ಣಗಳು ಮುನ್ನವೆ ಅರಿಯರು, ಅದೇನು ಕಾರಣವೆಂದಡೆ- ಪ್ರಸೂತವಾಗದ ಮುನ್ನ ಶಿಶು ಬಯಸಿದರುಂಟೆ ? ಹಸಿಯಿಲ್ಲದ ಭೂಮಿಯಲ್ಲಿ ಬೀಜವ ಬಿತ್ತಿ ಫಲವ ಬಯಸಿದರುಂಟೆ ? ಈ ದೃಷ್ಟಾಂತದಂತೆ ತಿಳಿದು ಇಂತೀ ಎಲ್ಲವನು ವಿಸರ್ಜಿಸಿ ಕಳೆವುದು ಶಿವಜ್ಞಾನ. ಅಂತಪ್ಪ ಶಿವಜ್ಞಾನದ ನಿಲವು ಕರಸ್ಥಳದ ಇಷ್ಟಲಿಂಗ. ಆ ಇಷ್ಟಲಿಂಗಬ್ರಹ್ಮದ ನಿಜವು ತಾನೆಂದು ತಿಳಿದು ಶಿಶುಕಂಡ ಕನಸಿನಂತೆ, ಮೂಕ ಸಕ್ಕರಿಮೆದ್ದಂತೆ ಇರ್ದರಯ್ಯಾ ನಿಮ್ಮ ಶರಣರು ಎಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಓದಿ ಓದಿ ವೇದ ವಾದಕ್ಕಿಕ್ಕಿತ್ತು. ಕೇಳೀ ಕೇಳಿ ಶಾಸ್ತ್ರ ಸಂದೇಹಕ್ಕಿಕ್ಕಿತ್ತು. ಅರಿದೆ ಅರಿದೆನೆಂದು ಆಗಮ ಅಗಲಕ್ಕೆ ಹರಿಯಿತ್ತು. ನೀನೆತ್ತ ನಾನೆತ್ತಲೆಂದು_ ಬೊಮ್ಮ ಬಕ್ಕಟ ಬಯಲು ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ವೇದ ಶಾಸ್ತ್ರ ಆಗಮ ವಿಜ್ಞಾನ ತರ್ಕ ವ್ಯಾಕರಣಾದಿಗಳ ಕಲಿತು ಬಲ್ಲವರೆನಿಸಿಕೊಂಡರೇನು? ಪ್ರಾಣಲಿಂಗದ ನೆಲೆಯನರಿದ ಯೋಗಿಯ ಮುಂದೆ ಇವರೆಲ್ಲ ಮೂಢರಲ್ಲದೆ ಬಲ್ಲವರಲ್ಲ. ಅದೇನು ಕಾರಣವೆಂದಡೆ: ಅವರು ಸ್ವಾನುಭಾವಜ್ಞಾನಾನುಭಾವಿಗಳಲ್ಲವಾದ ಕಾರಣ. ಇಂತಿವರು ಒಂದು ಕೋಟಿ ಶಾಸ್ತ್ರಜ್ಞರಾದರೂ ಸಮ್ಯಜ್ಞಾನಿಯಾದ ಒಬ್ಬ ಶರಣಂಗೆ ಸರಿಯಲ್ಲ. ಇದು ಕಾರಣ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನೇ ಶಿವನೆನಬೇಕು.
--------------
ಸ್ವತಂತ್ರ ಸಿದ್ಧಲಿಂಗ
ಓಂ ನಮಃ ಶಿವಾಯ ಎಂಬುದೆ ವೇದ, ಓಂ ನಮಃ ಶಿವಾಯ ಎಂಬುದೆ ಶಾಸ್ತ್ರ, ಓಂ ನಮಃ ಶಿವಾಯ ಎಂಬುದೆ ಪುರಾಣ, ಓಂ ನಮಃ ಶಿವಾಯ ಎಂಬುದೆ ಆಗಮ, ಓಂ ನಮಃ ಶಿವಾಯ ಎಂಬುದೆ ಸಕಲಕಲೆ. ಓಂ ನಮಃ ಶಿವಾಯ, ಓಂ ನಮಃ ಶಿವಾಯ ಎಂದೆನಲು ಸರ್ವಜ್ಞ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಆಗಮಪುರುಷರಿರಾ, ನಿಮ್ಮ ಆಗಮ ವಾಯವಾಗಿ ಹೋಯಿತ್ತಲ್ಲಾ. ವಿದ್ಯಾಪುರುಷರಿರಾ ನಿಮ್ಮ ವಿದ್ಯೆ ಅವಿದ್ಯೆಯಾಗಿ ಹೋದಲ್ಲಿ, ಬರುಮುಖರಾಗಿ ಇದ್ದಿರಲ್ಲಾ. ವೇದಪುರುಷರಿರಾ ನಿಮ್ಮ ವೇದ ಹೊಲಬುದಪ್ಪಿ ಹೋದಲ್ಲಿ, ವೇದವೇ ದೈವವೆಂದು ಕೆಟ್ಟಿರಲ್ಲಾ. ಪುರಾಣಪುರುಷರಿರಾ ನಿಮ್ಮ ಪುರಾಣ ವಿಚಾರಭ್ರಷ್ಟವಾಗಿ ಹೋದಲ್ಲಿ, ನೀವು ಒಡನೆ ಭ್ರಷ್ಟರಾಗಿ ಹೋದಿರಲ್ಲಾ. ಶಾಸ್ತ್ರಪುರುಷರಿರಾ, ನಿಮ್ಮ ಶಾಸ್ತ್ರದ ಮಹಾಪಥ ಹೊನಲಲ್ಲಿ ಹೋದಲ್ಲಿ ಭಕ್ತದೇಹಿಕದೇವನೆಂದರಿಯದೆ ಕೆಟ್ಟಿರಲ್ಲಾ. `ಯತ್ರ ಶಿವಸ್ತತ್ರ ಮಾಹೇಶ್ವರ'ನೆಂದು ಹೇಳಿತ್ತು ಮುನ್ನ, ಅಂತು ಭಕ್ತ, ನಿತ್ಯ ಸತ್ಯ ಸನ್ನಹಿತ ಗುಹೇಶ್ವರಾ_ನಿಮ್ಮ ಶರಣ.
--------------
ಅಲ್ಲಮಪ್ರಭುದೇವರು
ನಾಲ್ಕುವೇದ, ಹದಿನಾರು ಶಾಸ್ತ್ರ, ಹದಿನೆಂಟು ಪುರಾಣ, ಇಪ್ಪತ್ತೆಂಟು ಆಗಮ, ಮೂವತ್ತೆರಡು ಉಪನಿಷತ್ತುಗಳೆಲ್ಲವೂ ಪಂಚಾಕ್ಷರದ ಸ್ವರೂಪವನರಿಯದೆ ನಿಂದವು. ಏಳುಕೋಟಿ ಮಹಾಮಂತ್ರಂಗಳಿಗೆ ತಾನೆ ಮೂಲಮಂತ್ರವಾಗಿ ಸುರತಿಗೆ ಅಣಿಮಾದಿಯ ಕೊಟ್ಟು ಶರಣರಿಗೆ ತ್ರಿಣಯನ ಕೊಟ್ಟುದು ಈ ಪಂಚಾಕ್ಷರ ಪ್ರಣವದೊಳಡಕವಾದ ಪಂಚಾಕ್ಷರವನರಿತಲ್ಲಿ ಸೌರಾಷ್ಟ್ರ ಸೋಮೇಶ್ವರಲಿಂಗಸಂಜ್ಞೆಯ ವರ್ಣವೆನ್ನ ಸರ್ವಾಂಗದಲ್ಲಡಗಿದವಯ್ಯಾ.
--------------
ಆದಯ್ಯ
ಇನ್ನಷ್ಟು ... -->