ಅಥವಾ

ಒಟ್ಟು 74 ಕಡೆಗಳಲ್ಲಿ , 17 ವಚನಕಾರರು , 53 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಗನೆಯ ಚಿತ್ತ, ರಮಣನ ಸುತ್ತಿಮುತ್ತಿ ಅಪ್ಪಿ ಅಗಲದಿಪ್ಪಂತೆ ಜಾಗ್ರ, ಸ್ವಪ್ನ, ಸುಷುಪ್ತಿಯಲ್ಲಿ ಶರಣ ಚಿತ್ತರತಿ ಶಿವಲಿಂಗವ ಸುತ್ತಿ ಮುತ್ತಿ ಅಪ್ಪಿ ಅಗಲದಿಪ್ಪರೆ ಆ ಮಹಾತ್ಮನ ಏನೆಂದುಪಮಿಸುವೆನಯ್ಯ? ಲಿಂಗಪ್ರಾಣಿಯ, ಪ್ರಾಣಲಿಂಗಸಂಬಂದ್ಥಿಯ? ಸ್ವತಂತ್ರ ವಸ್ತುವಿನಲ್ಲಿ ಅರಿವರತು ಬೆರಗು ನಿಬ್ಬೆರಗಾದ, ಘನಲಿಂಗಪ್ರಾಣಿಗೆ ನಮೋ ನಮೋಯೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶ್ರದ್ಧೆ ತೋರಿದಲ್ಲಿ ಆಚಾರಲಿಂಗವ ಕಾಣುವನು. ನೈಷ್ಠೆದೋರಿದಲ್ಲಿ ಗುರುಲಿಂಗವ ಕಾಣುವನು. ಸಾವಧಾನ ತೋರಿದಲ್ಲಿ ಶಿವಲಿಂಗವ ಕಾಣುವನು. ಅನುಭಾವ ತೋರಿದಲ್ಲಿ ಜಂಗಮಲಿಂಗವ ಕಾಣುವನು. ಆನಂದದೋರಿದಲ್ಲಿ ಪ್ರಸಾದಲಿಂಗವ ಕಾಣುವನು. ಸಮರಸ ತೋರಿದಲ್ಲಿ ಮಹಾಲಿಂಗವ ಕಾಣುವನು. ಇಂತು ಷಡ್ವಿಧಭಕ್ತಿ ನಿಷ್ಪತ್ತಿಯಾದಲ್ಲಿ ಗುರುನಿರಂಜನ ಚನ್ನಬಸವಲಿಂಗವ ಕಾಣದೆ ತಾನು ತಾನಾಗಿಹನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಶಿವಲಿಂಗವ ನೋಡುವ ಕಣ್ಣಲ್ಲಿ ಪರಸ್ತ್ರೀಯ ನೋಡಿದಡೆ ಅಲ್ಲಿ ಲಿಂಗವಿಲ್ಲ. ಪರಬ್ರಹ್ಮವ ನುಡಿವ ಜಿಹ್ವೆಯಲ್ಲಿ, ಪರಸ್ತ್ರೀಯರ ಅಧರಪಾನವ ಕೊಂಡಡೆ ಪ್ರಸಾದಕ್ಕೆ ದೂರ. ಘನಲಿಂಗವ ಪೂಜಿಸುವ ಕೈಯಲ್ಲಿ, ಪರಸ್ತ್ರೀಯರ ಕುಚವ ಮುಟ್ಟಿದಡೆ, ತಾ ಮಾಡಿದ ಪೂಜೆ ನಿಷ್ಫಲ. ಇದನರಿಯದಿರ್ದಡೆ ಬಳ್ಳದಲ್ಲಿ ಸುರೆಯ ತುಂಬಿ ಮೇಲೆ ಬೂದಿಯ ಹೂಸಿದಂತಾಯಿತ್ತು ಕಾಣಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ರೂಪು ಲಿಂಗವೋ ನಿರೂಪು ಲಿಂಗವೋ ಎಂಬುದ ವಿವರಿಸಿ ತಿಳಿದು ನೋಡೆ, ರೂಪು ಲಿಂಗದಲ್ಲಿ ತ್ರಿಭುವನಾಧಾರವಾದ ಶಿವ ಕಲಾ ರೂಪ ಚೈತನ್ಯ. ನಿರೂಪಲಿಂಗವ ಭಾವಿಸಿ, ಧ್ಯಾನಪೂಜೆಯ ಮಾಡಿ; ಕೋಟಿ ಸೂರ್ಯ ಪ್ರಕಾಶ ಚಿದ್ರೂಪ ಶಿವಲಿಂಗವ ನೆನಹಿನ ಕೊನೆಯ ಮೇಲಿರಿಸಿ ನೆನೆದು ನಿತ್ಯ ತೃಪ್ತನಾದ ಪರಾನಂದರೂಪ ಶಿವಯೋಗಿಯ ಯೋಗನಿದ್ರಾಮುದ್ರೆಯಲ್ಲಿ ತಾನಿದಿರೆಂಬುದ ಮರೆದು ಬ್ಥಿನ್ನವಿಲ್ಲದೆ ಶಿವಸುಖದೊಳಗಿಹನು ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣನು.
--------------
ಸ್ವತಂತ್ರ ಸಿದ್ಧಲಿಂಗ
ವೀರಮಾಹೇಶ್ವರರು ಸರ್ವಾಂಗದಲ್ಲಿ ವಿಭೂತಿ-ರುದ್ರಾಕ್ಷಿ ಧಾರಣವಾಗಿ, ಶಿವಲಿಂಗವ ಧರಿಸಿ, ಕಾವಿಲಾಂಛನವ ಪೊದ್ದರೆಂದು ಈ ಮತ್ರ್ಯಲೋಕದ ಜಡಮತಿ ಮರುಳಮಾನವರು ತಾವು ಧರಿಸುತ್ತಿರ್ಪರು. ಇಂತಪ್ಪವರ ನಡತೆ ಎಂತಾಯಿತ್ತೆಂದರೆ, ಗುರುವನರಿಯದೆ ವಿಭೂತಿಧರಿಸುವರೆಲ್ಲ ಬೂದಿಯೊಳಗಣ ಕತ್ತೆಗಳೆಂಬೆ. ತಮ್ಮ ನಿಜವ ತಾವರಿಯದೆ ರುದ್ರಾಕ್ಷಿ ಧರಿಸುವರೆಲ್ಲ ಕಳವು ಮಾಡಿ ಕೈಯ ಕಟ್ಟಿಸಿಕೊಂಡ ಕಳ್ಳರೆಂಬೆ. ಲಿಂಗದ ಸ್ವರೂಪವ ತಿಳಿಯದೆ ಕೊರಳಲ್ಲಿ ಲಿಂಗವ ಕಟ್ಟುವರೆಲ್ಲ ವಾಳೆ ಆವಿಗೆ ಯಳಗುದ್ದಿಯ ಕಟ್ಟುವಂತೆ ಕಟ್ಟುವರೆಂಬೆ. ಜಂಗಮದ ನಿಲವ ಅರಿಯದೆ ಕಾವಿಯ ಲಾಂಛನ ಹೊದ್ದವರೆಲ್ಲ ರಕ್ತಮುಳುಗಿದ ಹಸಿಯ ಚರ್ಮವ ಹೊದ್ದವರೆಂಬೆ. ಇಂತಿದರನುಭಾವವ ತಿಳಿಯದೆ ಈಶ್ವರನ ವೇಷವ ಧರಿಸಿ ಉದರಪೋಷಣಕ್ಕೆ ತಿರುಗುವರೆಲ್ಲ ಜಾತಿಹಾಸ್ಯಗಾರರೆಂಬೆ. ಇಂತಪ್ಪ ವೇಷಧಾರಿಗಳ ಶಿವಸ್ವರೂಪರೆಂದು ಭಾವಿಸುವವರ ಶಿವಸ್ವರೂಪರೆಂದು ಹೇಳುವವರ, ಇಂತಪ್ಪ ಉಭಯ ಮೂಢಾತ್ಮರ ಮುಖದ ಮೇಲೆ ಲೊಟ್ಟಲೊಟ್ಟನೆ ಉಗುಳಿ ನಿಮ್ಮ ಗಣಂಗಳ ಪಾದರಕ್ಷೆಯಿಂದ ಘಟ್ಟಿಸಿ ಅಟ್ಟೆಂದ ಕಾಣಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಸಕಲೇಂದ್ರಿಯಂಗಳ ಪ್ರಪಂಚು ನಾಸ್ತಿಯಾಗಿರಬಲ್ಲಡೆ ಕಕ್ಷದಲ್ಲಿ ಧರಿಸುವುದಯ್ಯಾ ಶಿವಲಿಂಗವ. ಕಾಂಚನಕ್ಕೆ ಕೈಯಾನದಿರ್ದಡೆ ಕರಸ್ಥಲದಲ್ಲಿ ಧರಿಸುವುದಯ್ಯ ಶಿವಲಿಂಗವ. ಪರಸ್ತ್ರೀಯರ ಅಪ್ಪುಗೆ ಇಲ್ಲದಿರ್ದಡೆ ಉರಸ್ಥಲದಲ್ಲಿ ಧರಿಸುವುದಯ್ಯ ಶಿವಲಿಂಗವ. ಎಂದೆಂದೂ ಹುಸಿಯನಾಡದಿರ್ದಡೆ ಜಿಹ್ವಾಪೀಠದಲ್ಲಿ ಧರಿಸುವುದಯ್ಯ ಶಿವಲಿಂಗವ. ಅನ್ನಪಾನಂಗಳಿಗೆ ಬಾಯ್ದೆರೆಯದಿರ್ದಡೆ ಅಮಳೋಕ್ಯದಲ್ಲಿ ಧರಿಸುವುದಯ್ಯ ಶಿವಲಿಂಗವ. ಅನ್ಯರಾಜರಿಗೆ ತಲೆವಾಗದಿರ್ದಡೆ ಉತ್ತಮಾಂಗದಲ್ಲಿ ಧರಿಸುವುದಯ್ಯ ಶಿವಲಿಂಗವ. ಇಂತೀ ಷಡ್‍ವಿಧಾಚಾರ ನೆಲೆಗೊಂಡು ಷಡ್‍ವಿಧ ಸ್ಥಾನದಲ್ಲಿ ಶಿವಲಿಂಗವ ಧರಿಸಬಲ್ಲಡೆ, ಭಕ್ತನೆಂಬೆನು, ಮಹೇಶ್ವರನೆಂಬೆನು, ಪ್ರಸಾದಿಯೆಂಬೆನು, ಪ್ರಾಣಲಿಂಗಿಯೆಂಬೆನು, ಶರಣನೆಂಬೆನು, ಐಕ್ಯನೆಂಬೆನು. ಇಂತೀ ಭೇದವನರಿಯದೆ ಲಿಂಗವ ಧರಿಸಿದಡೆ ಮಡಿಲಲ್ಲಿ ಕಲ್ಲ ಕಟ್ಟಿಕೊಂಡು ಕಡಲ ಬಿದ್ದಂತಾಯಿತ್ತು ಕಾಣಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಶ್ರೀಗುರು ಶಿವಗಣಂಗಳ ಮಧ್ಯದಲ್ಲಿ ಎನಗೆ ಉಪದೇಶಿಸುವಲ್ಲಿ ಪರಮೇಶ್ವರನ ಪಂಚಮುಖವನೆ ಪಂಚಕಳಶವಾಗಿ ಮೂರ್ತಿಗೊಳಿಸಿ, ಗಣಂಗಳು ಸಾಕ್ಷಿಯಾಗಿ ಕರಸ್ಥಲಕ್ಕೆ ಶಿವಲಿಂಗವ ಕೊಟ್ಟು `ಈ ಲಿಂಗವೆ ಗಂಡ, ನೀನೇ ಹೆಂಡತಿ'ಯೆಂದು ಹೇಳಿ, ಲಲಾಟದಲ್ಲಿ ವಿಭೂತಿಯ ಪಟ್ಟವ ಕಟ್ಟಿ ಹಸ್ತದಲ್ಲಿ ಕಂಕಣವ ಕಟ್ಟಿ, ಪಾದೋದಕ ಪ್ರಸಾದವನಿತ್ತು ಎಂದೆಂದಿಗೂ ಸತಿಪತಿಭಾವ ತಪ್ಪದಿರಲಿಯೆಂದು ನಿರೂಪಿಸಿದದನಯ್ಯ ಶ್ರೀಗುರು. ಆ ನಿರೂಪವ ಮಹಾಪ್ರಸಾದವೆಂದು ಕೈಕೊಂಡೆನಯ್ಯ. ಇದು ಕಾರಣ, ಎನ್ನ ಪತಿಯಲ್ಲದೆ ಅನ್ಯವನರಿಯೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶಿವನೆ, ನಿಮ್ಮ ನಾ ಬಲ್ಲೆನು. `ಗುರುದೇವೋ ಮಹಾದೇವೋ' ಎಂದುದಾಗಿ ಶ್ರೀಗುರು ರೂಪಾಗಿ ಬಂದು ದೀಕ್ಷೆಯಂ ಮಾಡಿ ಶಿವಲಿಂಗವ ಬಿಜಯಂಗೈಸಿ ಕೊಟ್ಟಿರಿ, ಜಂಗಮವ ತೋರಿದಿರಿ. ಇದು ಕಾರಣ, ನಿಮ್ಮ ನಾ ಬಲ್ಲೆನು, ಎನ್ನನೂ ನೀವು ಬಲ್ಲಿರಿ. ನಿಮ್ಮ ಶಿಶುವೆಂದು ಕರುಣಿಸಿ ಪ್ರಸಾದವನಿಕ್ಕಿ ರಕ್ಷಸಿದಿರಿ. ಇದು ಕಾರಣದಿಂದವೂ, ನಿಮ್ಮ ನಾ ಬಲ್ಲೆನು, ಎನ್ನನೂ ನೀವು ಬಲ್ಲಿರಿ. ಮತ್ತೆ ಮರೆಮಾಡಿ, ಜ್ಞಾನವನೂ ಅಜ್ಞಾನವನೂ, ಭಕ್ತಿಯನೂ ಅಭಕ್ತಿಯನೂ ಸುಖವನೂ ದುಃಖವನೂ ಒಡ್ಡಿ ಕಾಡಿದಿರಯ್ಯಾ . ಇವೆಲ್ಲವಕ್ಕೆಯೂ ನೀವೆ ಕಾರಣ. ಇದು ಕಾರಣ, ನಿಮ್ಮ ಬೇರಬಲ್ಲವರಿಗೆ ಎಲೆಯ ತೋರಿ ಆಳವಾಡಿ ಕಾಡುವರೆ ? ಕಾಡದಿರಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಲಿಂಗವನರಿಯರು ಲಿಂಗದ ಮುಖವನರಿಯರು. ಪೂಜಿಸಲರಿಯರು ಅರ್ಚಿಸಲರಿಯರು ಅರ್ಪಿಸಲರಿಯರು. ನಾನೇ ಭಕ್ತನು ನಾನೇ ಮಾಹೇಶ್ವರನು ನಾನೇ ಪ್ರಸಾದಿಯೆಂಬರು. ಶಿವಾಚಾರಪರಾಙ್ಮುಖರು ನೋಡಾ. ಶಿವ ಶಿವಾ, ಪ್ರಾಣಲಿಂಗಿ ಐಕ್ಯನೆಂಬುದು ಮಹಾಕ್ರೀ. ಅದನೆಂತೂ ಅರಿಯರು. ಗುರು ಲಿಂಗ ಜಂಗಮ ಒಂದೆಂಬುದನೂ ವೇದ ಶಾಸ್ತ್ರ ಆಗಮ ಪುರಾಣ ಪುರಾತನರ ನಡೆ ನುಡಿಯಿಂದರಿದು ಕ್ರೀಯನರಿದು ಕಾಲವನರಿದು ಮನ ವಂಚನೆಯಿಲ್ಲದೆ ಶಿವಲಿಂಗವ ಪೂಜಿಸಬೇಕು, ಸದ್ಭಕ್ತಿಯಿಂ ಭಕ್ತನಾಗಿ. `ನ ಗುರೋರಧಿಕಂ ನ ಗುರೋರಧಿಕಂ ಎಂಬುದನರಿದು ಪರಧನ ಪರಸ್ತ್ರೀ ಪರದೈವವ ತ್ಯಜಿಸಿ ತನು ಮನ ಧನದಲ್ಲಿ ವಂಚನೆಯಿಲ್ಲದೆ ಮನೋವಾಕ್ಕಾಯಶುದ್ಧನಾಗಿ ಅಷ್ಟವಿಧಾರ್ಚನೆ ಷೋಡಶೋಪಚಾರದಿಂ ಅರ್ಚಿಸಬೇಕು ಶ್ರೀಗುರುಲಿಂಗಕ್ಕೆ ಮಾಹೇಶ್ವರನಾಗಿ. ಜಂಗಮ ಪರಶಿವನೆಂದರಿದು ಭೋಗಮೂರ್ತಿ ಎಂದರಿದು ಮನೋವಾಕ್ಯಾಯಶುದ್ಧನಾಗಿ ಧನವಂಚನೆಯಿಲ್ಲದೆ ಸರ್ವಪದಾರ್ಥ ಸರ್ವಭೋಗಂಗಳನರ್ಪಿಸಿ ಜಂಗಮಲಿಂಗಾರ್ಚನೆಯಂ ಮಾಡಿ ಜಂಗಮಪ್ರಸಾದವಂ ಪಡೆದು ಪ್ರಸಾದವ ಭೋಗಿಸಿ ಪ್ರಸಾದಿಯಾಗಿ ಜಂಗಮಲಿಂಗಾರ್ಚನೆಯಂ ಮಾಡುವುದಯ್ಯಾ ಪ್ರಸಾದಿಯಾಗಿ. ಇಂತು ಭಕ್ತ ಮಾಹೇಶ್ವರ ಪ್ರಸಾದಿ ತನುವಿಡಿದು `ಏಕ ಮೂರ್ತಿಸ್ತ್ರಧಾ ಭೇದಾಃ ಎಂಬುದನರಿದು ಕ್ರಿಯೆಯಲ್ಲಿ ಕ್ರಿಯೆಯನರಿದು ತನುವಿಡಿದು ಸಕಲನಾಗಿ ನಡೆವ ಸ್ಥಲ ಈ ಮೂರು ಪ್ರಾಣಲಿಂಗಿ ಶರಣನೈಕ್ಯನೆಂಬುದು ಇವು ಮೂರುಸ್ಥಲ. ಮನವಿಡಿದು ನಡೆವುದು ನಿಷ್ಕಲಸ್ಥಲವನೊಂದುಮಾಡಿ ಏಕೀಭವಿಸಿ ನಡೆವುದು. ಇವು ಮೂರುಸ್ಥಲಕ್ಕೆ ನಿಷ್ಕ್ರಿಯಾಸಂಬಂಧ. ಈ ಮಹಾವರ್ಮವನೂ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ ನಿಮ್ಮ ಶರಣರೇ ಬಲ್ಲರು, ವಾಙ್ಮನೋತೀತರು ಉಪಮಾತೀತರು, ಘನ ಮಹಾ[ಕ್ರೀಯ].
--------------
ಉರಿಲಿಂಗಪೆದ್ದಿ
ಆಯತಲಿಂಗವಿಡಿದು ಸ್ವಾಯತಲಿಂಗವ ಕಾಣಬೇಕು ಸಿದ್ಧರಾಮಯ್ಯಾ. ಸ್ವಾಯತಲಿಂಗವಿಡಿದು ಸನ್ನಹಿತಲಿಂಗವ ಕಾಣಬೇಕು ಸಿದ್ಧರಾಮಯ್ಯಾ. ಸನ್ನಹಿತಲಿಂಗವಿಡಿದು ಮಹಾಲಿಂಗವ ಕಾಣಬೇಕು ಸಿದ್ಧರಾಮಯ್ಯಾ. ಮಹಾಲಿಂಗವಿಡಿದು ಜಂಗಮಲಿಂಗವ ಕಾಣಬೇಕು ಸಿದ್ಧರಾಮಯ್ಯಾ. ಜಂಗಮಲಿಂಗವಿಡಿದು ಶಿವಲಿಂಗವ ಕಾಣಬೇಕು ಸಿದ್ಧರಾಮಯ್ಯಾ. ಶಿವಲಿಂಗವಿಡಿದು ಗುರುಲಿಂಗವ ಕಾಣಬೇಕು ಸಿದ್ಧರಾಮಯ್ಯಾ. ಗುರುಲಿಂಗವಿಡಿದು ಆಚಾರಲಿಂಗವ ಕಾಣಬೇಕು ಸಿದ್ಧರಾಮಯ್ಯಾ_ ಇಂತೀ ಆಚಾರಲಿಂಗವಿಡಿದು ಷಟ್‍ಸ್ಥಲದ ಆದಿ ಮಧ್ಯಾಂತವರಿದು, ಸಂಬಂಧಿಸಿ, ಒಂದು ಮಾಡಿಕೊಂಡಿಪ್ಪ ಈ ಕರಸ್ಥಲದನುವ, ಗುಹೇಶ್ವರನ ಶರಣ ಸಂಗನಬಸವಣ್ಣ ಬಲ್ಲ. ಬೆಸಗೊಂಬ ಬಾರಾ ಸಿದ್ಧರಾಮಯ್ಯಾ.
--------------
ಅಲ್ಲಮಪ್ರಭುದೇವರು
ಮೇಷನ ದನಿಗೇಳಿ ಹುಲಿ ಬಲಿಯ ಬೀಳ್ವಂತೆ, ಕರ್ಣ ಹರನಿಂದ್ಯ ಗುರುನಿಂದ್ಯವ ಕೇಳುವುದು. ಶಿವಮಂತ್ರ ಶಿವಸ್ತೋತ್ರ ಶಿವಾಗಮ ಶಿವಸೂತ್ರವ ಕೇಳದೆ ಕರ್ಮಗುರಿಯಾಗುವದು ಈ ಶ್ರೋತ್ರೇಂದ್ರಿಯ. ಕರಿಯು ಸ್ಪರುಶನೇಂದ್ರಿಯದಲ್ಲಿ ಮಡಿದಂತೆ, ಪರಧನ ಪರಸ್ತ್ರೀ ಪರರನ್ನವ ಮುಟ್ಟೇನೆಂಬುದೀ ಹಸ್ತ. ಶಿವಪೂಜೆ ಶಿವಲಿಂಗವ ಮುಟ್ಟಿ ಶಿವಜಪವನೆಣಿಸದೆ ಅನ್ಯಕ್ಕೆ ಗುರಿಯಾಯಿತ್ತು ತ್ವಗಿಂದ್ರಿಯ. ದೀಪವ ಕಂಡು ಮುಟ್ಟುವ ಪತಂಗನಂತೆ ನಯನೇಂದ್ರಿಯ. ಪರಧನ ಪರಸ್ತ್ರೀಯ ಆಟ ನೋಟ ಪರಾನ್ನವ ನೋಡಿ ಮರುಳಾಗಿ ಶಿವಲಿಂಗ ಶಿವಪೂಜೆಗೆ ಅನುಮಿಷದೃಷ್ಟಿಯಿಡದೆ ಕೆಡುವುದೀ ನಯನೇಂದ್ರಿಯ. ಕೀಳುಮಾಂಸದ ಸವಿಗೆ ಗಂಟಲಗಾಣವ ಬೀಳುವ ಮೀನಿನಂತೆ ಜಿಹ್ವೇಂದ್ರಿಯ. ಹರನಿಂದೆ ಗುರುನಿಂದೆ ಪರನಿಂದ್ಯವ ಮಾಡಿ, ಕಾಳಗವಾರ್ತೆಯನಾಡಿ, ಪುರಾತರ ವಚನ ಶಿವಸ್ತುತ್ಯ ಶಿವಮಂತ್ರ ಶಿವಾಗಮವನೋದದೆ ಕರ್ಮಕ್ಕೆ ಗುರಿಯಾಗುವದೀ ಜಿಹ್ವೇಂದ್ರಿಯ. ಕಂದ :ಶ್ರೀಕಂಠ ಶಿವನ ನೆನೆಯದೆ ಲೌಕಿಕ ವಾರ್ತೆಯನೆ ಪೊರಹುತ್ತಿರ್ದಪುದೆನ್ನೀ ಬಾಕುಳಿಕ ಜಿಹ್ವೆಯಿದರಿಂ ನಾ ಕರನೊಂದೆ ಪ್ರಸನ್ನಶಂಕರಲಿಂಗ | 1 | ಎನ್ನಯ ನಾಲಿಗೆಯ ನಿಮ್ಮಯ ಮನ್ನಣೆಯ ಮಹಾನುಭಾವಿಗಳ ಚರಣಕ್ಕಂ ಹೊನ್ನಹಾವುಗೆಯ ಮಾಡೆಲೆ ಪನ್ನಗಕಟಕಾ ಪ್ರಸನ್ನಶಂಕರಲಿಂಗ | 2 | ಕಾಳಗದ ವಾರ್ತೆಯಂ ಸ್ಮರ ಲೀಲೆಯ ಪದಗಳ ಗಳಹುತಿರ್ದಪುದೆನ್ನೀ. ನಾಲಗೆಯಂ ಬೇರುಸಹಿತಂ ಕೀಳುವರಿಲ್ಲಾ ಪ್ರಸನ್ನಶಂಕರಲಿಂಗ | 3 | ಈ ತೆರದಿ ಸಂಪಿಗೆಯ ಕುಸುಮದ ಪರಿಮಳಕೆರ[ಗಿ]ದಳಿ ಮೃತವಾದಂತೆ ನಾಸಿಕೇಂದ್ರಿಯ ಮಾಯಾದುರ್ಗಂಧಚಂದನವಾಸನೆಗೆಳಸಿ ಸ್ವಾನುಭಾವಸದ್ವಾಸನೆಯ ಮರೆದು ಕರ್ಮಕ್ಕೆ ಗುರಿಯಾಯಿತ್ತೀ ಘ್ರಾಣೇಂದ್ರಿಯ. ಇಂತೀ ಪಂಚೇಂದ್ರಿಯಂಗಳೆಂಬ ಶುನಿ ಕಂಡಕಡೆಗೆ ಹರಿದು ಭಂಗಬಡಿಸಿ ಕಾಡುತಿದೆ, ಇವಕಿನ್ನೆಂತೊ ಶಿವಶಿವ, ಇವಕ್ಕಿನ್ನೆಂತೊ ಹರಹರ. ಇವ ನಿರಸನವ ಮಾಡೇನೆಂದರೆನ್ನಳವಲ್ಲ , ನಿಮ್ಮ ಧರ್ಮ ಕಾಯೋ ಕಾಯೋ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ತನ್ನ ಸತಿ, ತನ್ನ ಧನ ಉನ್ನತಿಯಲಿರಬೇಕು. ಅನ್ಯ ಸತಿ, ಅನ್ಯ ಧನದಾಸೆಯನ್ನು ಬಿಡಬೇಕೆಂಬುದು ನೋಡ, ಜಗ. ತನ್ನ ಸತಿಯಾರು ಅನ್ಯಸತಿಯಾರೆಂದು ಬಲ್ಲವರುಂಟೆ ಹೇಳ ಮರುಳೆ, ಬಲ್ಲವರುಂಟುಂಟು ಶಿವಶರಣರು. ತನ್ನ ಶಕ್ತಿಯೆ ಶಿವಶಕ್ತಿ; ಅನ್ಯಶಕ್ತಿಯು ಮಾಯಾಶಕ್ತಿ ಕಾಣ ಮರುಳೆ. ಇದು ಕಾರಣ, ಮಾಯಾಶಕ್ತಿಯ ಸಂಗ ಭಂಗವೆಂದು ನಿವೃತ್ತಿಯ ಮಾಡಿ ಶಿವಶಕ್ತಿಸಂಪನ್ನರಾಗಿ ಶಿವಲಿಂಗವ ನೆರೆವರಯ್ಯ ನಿಮ್ಮ ಶರಣರು. ಇದು ಕಾರಣ, ಶರಣಂಗೆ ಅನ್ಯಸ್ತ್ರೀಯ ಸಂಗ ಅಘೋರನರಕ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ದುರ್ವಿಕಾರದಲ್ಲಿ ನಡೆದು, ಗುರುಲಿಂಗವ ಪೂಜಿಸಬೇಕು. ಮನವಿಕಾರದಲ್ಲಿ ನಡೆದು, ಶಿವಲಿಂಗವ ಪೂಜಿಸಬೇಕು. ತ್ರಿವಿಧ ವಿಕಾರದಿಂದ ನಡೆದು, ಜಂಗಮಲಿಂಗವ ಪೂಜಿಸಬೇಕು. ಒಳಗನರಿದು ಹೊರಗ ಮರೆದ ಮತ್ತೆ ವೀರಶೂರ ರಾಮೇಶ್ವರಲಿಂಗವ ಕೂಡಬೇಕು.
--------------
ಬಾಲಬೊಮ್ಮಣ್ಣ
ಈ ಪ್ರಕಾರದಲ್ಲಿ ಗುರುವಿನ ಹಸ್ತದಲ್ಲಿ ಹುಟ್ಟಿ ಲಿಂಗದೇಹಿಯೆನಿಸಿಕೊಂಡ ಜ್ಞಾನಿಪುರುಷನು ತನ್ನ ಜ್ಞಾನಸ್ವರೂಪವನರಿಯಬೇಕಯ್ಯ. ಆ ಜ್ಞಾನವೇ ಆರುತೆರನಾಗಿಪ್ಪುದು. ಅವಾವವೆಂದಡೆ: ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ, ಮಹಾಲಿಂಗವೆಂದು ಇಂತೀ ಆರುತೆರನಾಗಿಪ್ಪುದು. ಈ ಷಡ್ವಿಧವ್ರತವನರಿದು ಆಚರಿಸುವ ಕ್ರಮವೆಂತುಟಯ್ಯಯೆಂದಡೆ: ಆಧಾರಚಕ್ರಸ್ಥಾನದಲ್ಲಿ ನಾಲ್ಕೆಸಳಕಮಲದ ವ ಶ ಷ ಸಯೆಂಬ ನಾಲ್ಕು ಬೀಜಾಕ್ಷರದ ಪೃಥ್ವಿತತ್ವದ ಕೆಂಪುವರ್ಣದ ನೆಲೆಯನರಿಯಬೇಕಯ್ಯ. ಸ್ವಾಧಿಷಾ*ನಚಕ್ರದಲ್ಲಿ ಆರೆಸಳಕಮಲದ ಬ ಭ ಮ ಯ ರ ಲಯೆಂಬ ಆರು ಬೀಜಾಕ್ಷರ ಯುಕ್ತವಾದ ಅಪ್ಪುತತ್ವದ ನೀಲವರ್ಣದ ನೆಲೆಯನರಿಯಬೇಕಯ್ಯ. ಮಣಿಪೂರಕಚಕ್ರಸ್ಥಾನದಲ್ಲಿ ಹತ್ತೆಸಳಕಮಲದ ಡ ಢ ಣ ತ ಥ ದ ಧ ನ ಪ ಫ ಯೆಂಬ ಹತ್ತು ಬೀಜಾಕ್ಷರ ಸ್ವಾಯತವಾಗಿಪ್ಪ ಅಗ್ನಿತತ್ವದ ಕುಂಕುಮವರ್ಣದ ನೆಲೆಯನರಿಯಬೇಕಯ್ಯ. ಅನಾಹತಚತ್ರಸ್ಥಾನದಲ್ಲಿ ಹನ್ನೆರಡೆಸಳಕಮಲದ ಕ ಖ ಗ ಘ ಙ ಚ ಛ ಜ ರುsು ಞ ಟ ಠಯೆಂಬ ಹನ್ನೆರಡು ಬೀಜಾಕ್ಷರಯುಕ್ತವಾಗಿರ್ಪ ವಾಯುತತ್ವದ ಶ್ವೇತವರ್ಣದ ನೆಲೆಯನರಿಯಬೇಕಯ್ಯ. ವಿಶುದ್ಧಿಚಕ್ರಸ್ಥಾನದಲ್ಲಿ ಹದಿನಾರೆಸಳಕಮಲದ ಅ ಆ ಇ ಈ ಉ ಊ ಋ ಋೂ ಎ ಏ ಐ ಒ ಓ ಔ ಅಂ ಅಃ ಎಂಬ ಹದಿನಾರು ಬೀಜಾಕ್ಷರ ಸ್ವಾಯತವಾಗಿಪ್ಪ ಆಕಾಶತತ್ವದ ಸ್ಫಟಿಕವರ್ಣದ ನೆಲೆಯನರಿಯಬೇಕಯ್ಯ. ಆಜ್ಞಾಚಕ್ರಸ್ಥಾನದಲ್ಲಿ ಎರಡೆಸಳಕಮಲದ ಹಂ ಸ ಯೆಂಬ ಎರಡು ಬೀಜಾಕ್ಷರಯುಕ್ತವಾಗಿಪ್ಪ ಆತ್ಮತತ್ವದ ಮಾಣಿಕ್ಯವರ್ಣದ ನೆಲೆಯನರಿಯಬೇಕಯ್ಯ. ಇವೆಲ್ಲವಕ್ಕೂ ಮೇಲಣತತ್ವವೆನಿಸುವ ಬ್ರಹ್ಮರಂದ್ರದಲ್ಲಿ ಸಾವಿರೆಸಳಕಮಲದ, ಸಾವಿರ ಬೀಜಾಕ್ಷರ ಸರ್ವತೋಮುಖವಾಗಿಪ್ಪ ಭೇದವನರಿಯಬೇಕಯ್ಯ. ಇನ್ನೀ ಚಕ್ರಂಗಳಿಗೆ ಲಿಂಗಸ್ವಾಯತಯುಕ್ತವಾಗಿಪ್ಪ ಭೇದವ ಹೇಳಿಹೆನು: ಆಧಾರಚಕ್ರದ ನಾಲ್ಕೆಸಳಕಮಲದ ಮಧ್ಯದಲ್ಲಿ ಆಚಾರಲಿಂಗವ ಸ್ವಾಯತವ ಮಾಡಿ ಸ್ವಾಧಿಷಾ*ನಚಕ್ರದ ಆರೆಸಳಕಮಲದ ಮಧ್ಯದಲ್ಲಿ ಗುರುಲಿಂಗವ ಮೂರ್ತಿಗೊಳಿಸಿ ಮಣಿಪೂರಕಚಕ್ರದ ಹತ್ತೆಸಳಕಮಲದ ಮಧ್ಯದಲ್ಲಿ ಶಿವಲಿಂಗವ ಸಂಬಂಧಿಸಿ ಅನಾಹತಚಕ್ರದ ಹನ್ನೆರಡೆಸಳಕಮಲದ ಮಧ್ಯದಲ್ಲಿ ಪ್ರಸಾದಲಿಂಗವ ಮೂರ್ತಿಗೊಳಿಸಿ ಆಜ್ಞಾಚಕ್ರದ ಎರಡೆಸಳಕಮಲದ ಮಧ್ಯದಲ್ಲಿ ಮಹಾಲಿಂಗವ ನೆಲೆಗೊಳಿಸಿ ಪ್ರಾಣದಲ್ಲಿ ಆಚಾರಲಿಂಗವ ಸಂಬಂಧಿಸಿ ಜಿಹ್ವೆಯಲ್ಲಿ ಗುರುಲಿಂಗವ ಸ್ವಾಯತವಮಾಡಿ ನೇತ್ರದಲ್ಲಿ ಶಿವಲಿಂಗವ ಮೂರ್ತಿಗೊಳಿಸಿ ತ್ವಕ್ಕಿನಲ್ಲಿ ಜಂಗಮಲಿಂಗವ ನೆಲೆಗೊಳಿಸಿ ಶ್ರೋತ್ರದಲ್ಲಿ ಪ್ರಸಾದಲಿಂಗವ ಸಂಬಂಧಿಸಿ ಭಾವದಲ್ಲಿ ಮಹಾಲಿಂಗವ ನೆಲೆಗೊಳಿಸಿ ಬ್ರಹ್ಮರಂಧ್ರದಲ್ಲಿರ್ಪ ಪರಿಪೂರ್ಣಲಿಂಗವು ಸರ್ವಾಂಗದಲ್ಲಿಯು ಸ್ವಾಯತವಾಗಲು ಅಂಗಸಂಗಗಳೆಲ್ಲವು ಲಿಂಗಸಂಗಗಳಾಗಿ ಲಿಂಗ ದೃಕ್ಕೇ ನಿರಂತರ ಪ್ರಕಾಶಿಸುತಿಪ್ಪುದಯ್ಯ. ಲಿಂಗಪ್ರಭೆಯೊಳಗೆ ಶಿವಶಿವಾಯೆನುತಿರ್ದೆನಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶಿವಭಾವದಿಂದ ಆತ್ಮ ಹುಟ್ಟಿ, ಶಿವ ತಾನೆಂಬ ಉಭಯವನಲಂಕರಿಸಿದನಾಗಿ ಆತ್ಮಂಗೆ ಭಾವನೆಂಬ ಹೆಸರಾಯಿತ್ತು. ಆತ್ಮ ಬಂದು ಆಕಾಶವ ಕೂಡಿದಲ್ಲಿ ಜ್ಞಾನವೆಂಬ ಹೆಸರಾಯಿತ್ತು. ಆತ್ಮ ಬಂದು ವಾಯುವ ಕೂಡಿದಲ್ಲಿ ಅಹಂಕಾರವೆಂಬ ಹೆಸರಾಯಿತ್ತು. ಆತ್ಮ ಬಂದು ಅಪ್ಪುವ ಕೂಡಿದಲ್ಲಿ ಬುದ್ಧಿಯೆಂಬ ಹೆಸರಾಯಿತ್ತು. ಆತ್ಮ ಬಂದು ಪೃಥ್ವಿಯ ಕೂಡಿದಲ್ಲಿ ಚಿತ್ತೆಂಬ ಹೆಸರಾಯಿತ್ತು. ಚಿತ್ತು ಆಚಾರಲಿಂಗವ ಧರಿಸಿಪ್ಪುದು. ಬುದ್ಧಿ ಗುರುಲಿಂಗವ ಧರಿಸಿಪ್ಪುದು. ಅಹಂಕಾರ ಶಿವಲಿಂಗವ ಧರಿಸಿಪ್ಪುದು ಮನಸ್ಸು ಜಂಗಮಲಿಂಗವ ಧರಿಸಿಪ್ಪುದು. ಜ್ಞಾನ ಪ್ರಸಾದಲಿಂಗವ ಧರಿಸಿಪ್ಪುದು. ಭಾವ ಮಹಾಲಿಂಗವ ಧರಿಸಿಪ್ಪುದು. ಸೌರಾಷ್ಟ್ರ ಸೋಮೇಶ್ವರಲಿಂಗ ತಾನು ತಾನಾಗಿರಬೇಕು.
--------------
ಆದಯ್ಯ
ಇನ್ನಷ್ಟು ... -->