ಇಚ್ಛೆಯರಿದು, ಕಾಲಕಾಲದಲ್ಲೂ ಇಚ್ಛೆಯ ಸಲಿಸಿ,
ನಿರುಪಾಧಿಕ ದಾಸೋಹವ ಮಾಡಿ,
ಶಿವನಾನೆಂಬ ಅಹಂಕಾರವಡಗಿದಡೆ ಭಕ್ತನು.
ಮಹಾವಸ್ತುಗಳ ಆವ ಕಾಲ ಆವ ಹೊತ್ತು
ಆತ ಬೆಸಸಿತ್ತುದ ಮಹಾಪ್ರಸಾದವೆಂದು,
ಪ್ರತ್ಯುತ್ತರವಿಲ್ಲದೆ ಆಜ್ಞೆಯಲ್ಲಿ ನಡೆದು, ಆಜ್ಞೆಯಲ್ಲಿ ನುಡಿದು
ಇರಬಲ್ಲಡೆ ಆತನೇ ಭಕ್ತನು.
ಈ ಸದ್ಭಕ್ತಿ ಬಸವಣ್ಣಂಗಲ್ಲದೆ
ಸರ್ವಬ್ರಹ್ಮಾಂಡದೊಳಗಣ ಸರ್ವಲೋಕದ
ದೇವ ದಾನವ ಮಾನವರಾರಿಗೂ ಅಳವಡದು, ಆರಿಗೂ ಆಗದು.
ಸದ್ಭಕ್ತಿ ಬಸವಣ್ಣಂಗಳವಟ್ಟಿತ್ತು, ಬಸವಣ್ಣನೇ ಭಕ್ತನು,
ಬಸವಣ್ಣನ ನೆನೆವುದೇ ಭಕ್ತಿಯ ಪಥವು,
ಬಸವಣ್ಣನ ನೆನೆವುದೇ ಮುಕ್ತಿಯ ಪಥವು,
ಬಸವಣ್ಣನ ನೆನೆದು ಬದುಕಿದೆನಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.