ರಾವಣ ಪಡೆದ ಲಿಂಗ ಚಂದ್ರಾಯುಧ ಪಾರ್ವತಿಯ ಗಜಮುಖನ
ಹರಿಯಜರು ಬಿಡಿಸಿದರೆಂದೆಂಬರು, ಸ್ವಾಮಿಭೃತ್ಯ ನ್ಯಾಯಕ್ಕದೇನು ಚೋದ್ಯ !
ಹರಿಯಜರು ಹರನ ಕೊಲ್ಲುವೆನೆಂದಸುರನ
ಹೆಣ್ಣು ರೂಪಾಗಿ, ಅವನ ಕೈಯಿಂದಲವನ ಸುಟ್ಟು,
ಇವರು ಮೊದಲಾದ ಶಿವದ್ರೋಹಿಗಳ ಹರಿಸಂಹರಿಸಿದರೇನು ?
ದೈತ್ಯರಂ ಗೆಲುವ ಸಾಹಸಮಂ ಶಿವನು
ತನ್ನ ಭೃತ್ಯರ ಸಾಹಸಮಂ ಮೆರೆಸುವ ವಿನೋದವಲ್ಲದೆ
ಶಿವನ ಕೃಪೆಯಿಂದ ಪಡೆದು ಮಾಡುವ
ಸ್ವಾಮಿಭೃತ್ಯ ನ್ಯಾಯಕ್ಕದೇನು ಚೋದ್ಯ !
ಬಲೆಯೊಳಗೆ ಸಿಡಿಲುವಕ್ಕಿ ಬಿದ್ದರೆ ಬೇಂಟೆಕಾರಗೆ ಸಾಧ್ಯವಾಗಲ್ಲುದೆ ?
ಮರಣವಿರಹಿತ ಶಿವನ ಕೊಲಬಲ್ಲುವರುಂಟೆ ?
ಸರ್ವಜ್ಞ ಶಿವನ ಸತಿಯ ಮತ್ತೊಬ್ಬರಾಳುವರುಂಟೆ ?
ಸೂತ್ರಕನಾಡಿಸುವಂತೆ ಆಡುವ ಬೊಂಬೆ ಆ ಸೂತ್ರಕನ ಕೊಲಬಲ್ಲವೆ ?
ಆ ಸೂತ್ರಧಾರಕನ ಸತಿಯ ಬಂದು ಬೊಂಬೆಯಾಳಬಲ್ಲುದೆ ?
ಮತ್ತೊಂದು ಬೊಂಬೆ ಬುದ್ಧಿಯಿಂದ ಸೆಳೆದುಕೊಳಬಲ್ಲುದೆ ?
ಅದು ಕಾರಣ ಬ್ರಹ್ಮನಿಂದಲಾಯಿತು! ವಿಷ್ಣುವಿಂದಲಾಯಿತ್ತು!
ಮತ್ತೆ ಕೆಲವು ದೈವಗಳಿಂದವಾಯಿತ್ತೆಂಬ ಅಜ್ಞಾನಿಗಳ ಮಾತಂತಿರಲಿ,
ಬ್ರಹ್ಮವಿಷ್ಣುಗಳು ಸ್ವತಂತ್ರರಾದರೆ ಬ್ರಹ್ಮನ ತಲೆ ಹೋಗಲೇತಕ್ಕೆ ?
ಸರಸ್ವತಿಯ ಮೂಗು ಹೋಗಲೇತಕ್ಕೆ ?
ಬ್ರಹ್ಮನ ಮಗ ಸನತ್ಕುಮಾರ ಒಂಟೆಯಾಗಲೇತಕ್ಕೆ ?
ಹರಿಯ ಮಗ ಕಾಮನುರಿದು ಹೋಗಲೇತಕ್ಕೆ ?
ನಾರಸಿಂಹನು [ವ]ಧೆಗೆ ಒಳಗಾಗಲೇತಕ್ಕೆ ?
ಕೃಷ್ಣನ ಹದಿನಾರು ಸಾವಿರ ಸ್ತ್ರೀಯರ ಮೇಲೆ ಬೇಡರು ನೆರೆಯಲೇತಕ್ಕೆ ?
ಕಾಳುಬೇಡನೆಚ್ಚಂಬು ತಾಗಿ ಕೃಷ್ಣ ಗೋಳುಗುಟ್ಟಿ ಸಾಯಲೇತಕ್ಕೆ ?
ಅದು ಕಾರಣ, ನಮ್ಮ ಶಿವನು ಆಡಿಸಿದಂತೆಯಾಡಿ,
ಹುಟ್ಟೆಂದರೆ ಹುಟ್ಟಿ, ನಡೆಯಂದರೆ ನಡದು, ನುಡಿಯೆಂದರೆ ನುಡಿದು
ಸಾಯಂದರೆ ಸತ್ತು, ಕೆಡಹಿದಂತೆ ಬಿದ್ದಿಹ ತೃಣದೊಂಬೆಗಳಿಗುಂಟೆ ಸ್ವತಂತ್ರ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.