ಬ್ರಹ್ಮಾಬ್ರಹ್ಮರಿಲ್ಲದಂದು,
ವಿಷ್ಣುಮಾಯೆ, ಜಗಮಾಯೆಯಿಲ್ಲದಂದು,
ಸೃಷ್ಟಿಯಸೃಷ್ಟಿ ಇಲ್ಲದಂದು, ಕಾಳಿಂಗ ಕರಿಕಂಠರಿಲ್ಲದಂದು,
ಉಮೆಯ ಕಲ್ಯಾಣವಿಲ್ಲದಂದು, ದ್ವಾದಶಾದಿತ್ಯರಿಲ್ಲದಂದು,
ನಂದಿಕೇಶ್ವರ ದಂಡನಾಥರಿಲ್ಲದಂದು, ವಿಷವನಮೃತ ಮಾಡದಂದು,
ಲಿಂಗಸ್ಥಲ, ಜಂಗಮಸ್ಥಲ, ಪ್ರಸಾದಿಸ್ಥಲವಿಲ್ಲದಂದು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ
ನಿಮ್ಮ ನಿಲವನಾರು ಬಲ್ಲರು ?