ಐಶ್ವರ್ಯದಿಂದ ಶರೀರವು ಪ್ರಕಾಶಿಸುತ್ತಿರ್ಪುದು,
ಮನಸ್ಸಿನಿಂದ ಜೀವನು ಪ್ರಕಾಶಿಸುತ್ತಿರ್ಪನು,
ಶರೀರದ ಸುಖದುಃಖಂಗಳಿಗೆ ಐಶ್ವರ್ಯವೇ ಕಾರಣಮಾಗಿರ್ಪಂತೆ,
ಜೀವನ ಸುಖದುಃಖಕ್ಕೆ ಮನಸ್ಸೇ ಕಾರಣಮಾಗಿರ್ಪುದು.
ಅರ್ಥವಂ ಪ್ರಪಂಚಮುಖದಲ್ಲಿ ವೆಚ್ಚಿಸಿ,
ಅರ್ಥಕ್ಕೆ ತಕ್ಕ ಉಪಾಂಗವಂ ಸಂಪಾದಿಸಿ,
ತದುಪಭೋಗಯುಕ್ತಮಾಗಿರ್ಪ ಶರೀರದಂತೆ
ಮನಸ್ಸನ್ನು ಕರ್ಮಮುಖದಲ್ಲಿ ವೆಚ್ಚಿಸಿ,
ಆ ಮನಸ್ಸನ್ನಟ್ಟಿ, ಸೂಕ್ಷ್ಮಶರೀರವಂ ಸಂಪಾದಿಸುತ್ತಾ
ಅದರಲ್ಲಿ ಜೀವನನುಭವಿಸುತ್ತಿಹನು.
ಪ್ರಾಣವು ಶರೀರದಲ್ಲಿ ಬದ್ಧಮಾಗಿರ್ಪುದು,
ಅರ್ಥದಲ್ಲಿ ಮನಸ್ಸು ಬದ್ಧಮಾಗಿಹುದು,
ಜಡರೂಪಮಾದೈಶ್ವರ್ಯವು ಶರೀರವಂ ಹೊಂದಿ,
ತಾನು ಚೈತನ್ಯರೂಪಮಾಗಿ ಸಕಲಪದಾರ್ಥಗಳನ್ನು
ಶರೀರಮುಖಕ್ಕೊದಗಿಸಿಕೊಡುವಂತೆ
ಜಡರೂಪಮಾದ ಮನಸ್ಸು ಜೀವನಂ ಹೊಂದಿದಲ್ಲಿ,
ಆ ಜೀವನಿಗೂ ಪರಮಚೈತನ್ಯವಿತ್ತು. ತಾನು ಚೈತನ್ಯರೂಪಮಾಗಿ
ಸಂಚರಿಸುತ್ತಾ,
ಅನುಭವಯೋಗ್ಯವಾದ ಪದಾರ್ಥಂಗಳನ್ನು ಜೀವನಿಗೆ
ಸಂಪಾದಿಸಿಕೊಡುತ್ತಿರ್ಪುದು.
ಸಕಲಪ್ರಪಂಚವು ಅರ್ಥವಿದ್ದಲ್ಲಿ ಸೇರಿ,
ಆ ಅರ್ಥವನ್ನೇ ಜೀವನವಂ ಮಾಡಿಕೊಂಡಿರ್ಪಂತೆ,
ಸಕಲಗುಣಂಗಳು ಮನಸ್ಸನ್ನೇ ಸೇರಿ,
ಆ ಮನಸ್ಸನ್ನೇ ಜೀವನವಂ ಮಾಡಿಹನು.
ಆ ಅರ್ಥವುಳ್ಳ ಪುರುಷನು ಸಕಲರಿಗೂ ತಾನೂ ಪ್ರಭುವಾಗಿರ್ಪಂತೆ,
ಮನಸ್ಸುಳ್ಳ ಜೀವನು ಸಕಲಗುಣಂಗಳಿಗೂ ತಾನೇ ಸ್ವಾಮಿಯಾಗಿರ್ಪನು.
ಹೊನ್ನಿನಿಂದ ಹೆಣ್ಣನ್ನೂ ಹೆಣ್ಣಿನಿಂದ ಮಣ್ಣನ್ನು ಸಾಧಿಸಿ,
ಆ ಹೆಣ್ಣು ಮಣ್ಣುಗಳಿಂದ ಹೊನ್ನಂ ಸಾಧಿಸುವಂತೆ,
ಮನದಿಂದ ಅಹಂಬುದ್ಧಿಯು, ಅಹಂಬುದ್ಧಿಯಿಂ ಮನಸ್ಸು ಸಾಧ್ಯಮಪ್ಪದು.
ಐಶ್ವರ್ಯವಿಲ್ಲದೆ ಶರೀರಮೋಕ್ಷ, ಮನಸ್ಸಿಲ್ಲದೆ ಜೀವನ್ಮುಕ್ತಿ.
ಇಂತಪ್ಪ ವಿಚಿತ್ರವನ್ನು ಗುರುಮುಖದಿಂದ ತಿಳಿದ ಮಹಾಪುರುಷನು
ಜಂಗಮರೂಪಿಯಾದ ನಿನಗೆ ಇಂದ್ರಿಯಮುಖದಲ್ಲರ್ಥವನ್ನು ಸಮರ್ಪಿಸಿ,
ಲಿಂಗರೂಪಿಯಾದ ನಿನಗೆ ಭಾವಮುಖದಲ್ಲಿ ಮನಸ್ಸನ್ನು ಸಮರ್ಪಿಸಿದಲ್ಲಿ.
ಆ ಲಿಂಗವೇ ಪ್ರಾಣಮಪ್ಪುದು.
ಅರ್ಥವಂಚನೆಯೂ ಮನೋವಂಚನೆಯೂ
ಲಿಂಗಜಂಗಮಮುಖದಲ್ಲಿ ಲಯಮಪ್ಪುದೇ ಲಿಂಗೈಕ್ಯ ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.