ಘ್ರಾಣಜಿಹ್ವಾತ್ವಕ್ಫ್ರೋತ್ರಮಾನಸಾದಿ ವಿಷಯೇಂದ್ರಿಗಳಲ್ಲಿ
ಪೃಥ್ವಿವ್ಯಪ್ತೇಜೋವಾಯ್ವಾಕಾಶಾತ್ಮಾದಿ ಷಡ್ಭೂತಂಗಳು
ವಿಪರೀತಸಂಬಂಧಂಗಳಾಗಿ ತೋರುತ್ತಿರ್ಪವೆಂತೆಂದೊಡೆ:
ಮನಸ್ಸಿನ ವಿಷಯದಲ್ಲಿ ಪೃಥ್ವಿಯು ಸೃಷ್ಟಿಕಾರಣಮಾಗಿಹುದು.
ಶ್ರೋತ್ರವಿಷಯದಲ್ಲಿ ಜಲವು ಸಂರಕ್ಷಣಕಾರಣಮಾಗಿ ಶುಚಿಯಾಗಿಹುದು.
ತ್ವಗ್ವಿಷಯದಲ್ಲಗ್ನಿಯು ಸಂಹಾರಕಾರಣಮಾಗಿಹುದು.
ನೇತ್ರವಿಷಯದಲ್ಲಿ ವಾಯುವು ಚಂಚಲಕಾರಣಮಾಗಿಹುದು.
ಜಿಹ್ವಾವಿಷಯದಲ್ಲಾಕಾಶವು ಶಬ್ದಕಾರಣಮಾಗಿಹುದು.
ನಾಸಿಕ ವಿಷಯದಲ್ಲಾತ್ಮನು ಚೈತನ್ಯಕಾರಣಮಾಗಿಹನು.
ವಾಯುವಿನೊಳಗೆ ಬೆರೆದ ಆತ್ಮನೇ ಜೀವನು ;
ಆತ್ಮನೊಳಗೆ ಬೆರೆದ ವಾಯುವೆ ಮನಸ್ಸು.
ಪಂಚಭೂತರೂಪಮಾದ ಶರೀರಕ್ಕೆ ಜೀವನು ಕರ್ತನಾದಂದದಿ
ಪಂಚಭೂತಗುಣಗ್ರಾಹಿಗಳಾದ ಇಂದ್ರಿಯಂಗಳಿಗೆ ಮನಸ್ಸೇ ಕರ್ತೃವಾಗಿ,
ಆ ಇಂದ್ರಿಯಂಗಳು ಹೋದಲ್ಲಿಗೆ ಶರೀರವು ಹೋಗುವಂದದಿ,
ಆ ಮನಸ್ಸೇ ಜೀವನಾಗಿ, ಆ ಮನಸ್ಸು ಹೋದಲ್ಲಿಗೆ ಜೀವನು ಹೋಗುತ್ತಿಹನು.
ಅಂತಪ್ಪ ನಿಜಸ್ವರೂಪಮಾದ ಪರಮಾತ್ಮನಾಯಿತ್ತು ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.