ಅಥವಾ
(4) (1) (3) (1) (0) (0) (0) (0) (1) (0) (0) (0) (1) (0) ಅಂ (2) ಅಃ (2) (1) (0) (5) (1) (0) (0) (0) (1) (0) (0) (0) (0) (0) (0) (0) (1) (0) (1) (1) (4) (2) (0) (1) (1) (0) (0) (0) (0) (5) (1) (2) (0) (2) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗುರುಲಿಂಗಜಂಗಮಾರ್ಚನೆಯ ಕ್ರಮವ ದಯೆಯಿಂದ ಕರುಣಿಪುದು ಸ್ವಾಮಿ. ಕೇಳೈ ಮಗನೆ : ತಾನಿದ್ದ ಊರಲ್ಲಿ ಗುರುವು ಇದ್ದಡೆ ನಿತ್ಯ ತಪ್ಪದೆ ದರುಶನವ ಮಾಡುವುದು. ಗುರುಪೂಜೆಯ ಮಾಡುವಾಗ ಆ ಗುರುವಿನೊಳಗೆ ಲಿಂಗ-ಜಂಗಮವುಂಟೆಂದು ಭಾವಿಸಿ ತನು-ಮನ-ಧನವನೊಪ್ಪಿಸಿ ಅರ್ಚಿಸಿದ್ದುದೆ ಗುರುಪೂಜೆ. ಲಿಂಗಪೂಜೆಯ ಮಾಡುವಾಗ ಆ ಲಿಂಗದೊಳಗೆ ಜಂಗಮ-ಗುರುವುಂಟೆಂದುಭಾವಿಸಿ ತನು-ಮನ-ಧನವನೊಪ್ಪಿಸಿ ಅರ್ಚಿಸಿದ್ದುದೆ ಲಿಂಗಪೂಜೆ. ಇನ್ನು ಜಂಗಮದ ಪೂಜೆ ಮಾಡುವಾಗ ಆ ಜಂಗಮದೊಳಗೆ ಗುರು-ಲಿಂಗವುಂಟೆಂದು ಭಾವಿಸಿ ತನು-ಮನ-ಧನವನೊಪ್ಪಿಸಿ ಅರ್ಚಿಸಿದ್ದುದೆ ಜಂಗಮಪೂಜೆ. ಈ ತ್ರಿವಿಧಮೂರ್ತಿ ಭಕ್ತನ ತ್ರಿವಿಧ ತನುವಿಗೋಸ್ಕರವಾಗಿ ಇಷ್ಟ ಪ್ರಾಣ ಭಾವಲಿಂಗಸ್ವರೂಪವಾಗಿಹರೆಂದು ನಿರೂಪಿಸಿದಿರಿ ಸ್ವಾಮಿ. ಆ ತ್ರಿವಿಧಲಿಂಗದ ಪೂಜೆಯ [ಕ್ರಮವ] ಕರುಣಿಪುದು ಎನ್ನ ಶ್ರೀಗುರುವೇ. ಕೇಳೈ ಮಗನೆ : ಇಷ್ಟಲಿಂಗದ ಪೂಜೆಯ ಮಾಡುವಾಗ ಆ ಇಷ್ಟಲಿಂಗದೊಳಗೆ ಪ್ರಾಣಲಿಂಗ ಭಾವಲಿಂಗವುಂಟೆಂದು ಭಾವಿಸಿ ಕರ-ಮನ-ಭಾವದೊಳಗಿರಿಸಿ ಪೂಜಿಸುವುದು ಇಷ್ಟಲಿಂಗದಪೂಜೆ. ಪ್ರಾಣಲಿಂಗದ ಪೂಜೆಯ ಮಾಡುವಾಗ ಆ ಪ್ರಾಣಲಿಂಗದೊಳಗೆ ಇಷ್ಟಲಿಂಗ ಭಾವಲಿಂಗವುಂಟೆಂದು ಭಾವಿಸಿ ಭಾವ-ಮನ-ಕರದೊಳಗಿರಿಸಿ ಪೂಜಿಸುವುದು ಪ್ರಾಣಲಿಂಗದಪೂಜೆ. ಭಾವಲಿಂಗದ ಪೂಜೆಯ ಮಾಡುವಾಗ ಆ ಭಾವಲಿಂಗದೊಳಗೆ ಇಷ್ಟಲಿಂಗ ಪ್ರಾಣಲಿಂಗವುಂಟೆಂದು ಭಾವಿಸಿ ಕರ-ಮನ-ಭಾವದೊಳಗಿರಿಸಿ ಪೂಜಿಸುವುದು ಭಾವಲಿಂಗದಪೂಜೆ. ಸಾಕ್ಷಿ : 'ಏಕಮೂರ್ತಿಸ್ತ್ರಯೋ ಭಾಗಾಃ ಗುರುರ್ಲಿಂಗಂತು ಜಂಗಮಃ | ಜಂಗಮಶ್ಚ ಗುರುರ್ಲಿಂಗಂ ತ್ರಿವಿಧಂ ಲಿಂಗಮುಚ್ಯತೇ ||' ಎಂದುದಾಗಿ, ತ್ರಿವಿಧವು ಒಂದೇ ಎಂದರಿದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಗುರುಲಿಂಗ ಶಿವಭಕ್ತ ಇವರು ಒಂದೆ ವಸ್ತು; ಎಂಟಕ್ಷರಾದವು. ಆ ಎಂಟಕ್ಷರವೆ ಅಷ್ಟಾವರಣವಾದವು. ಆ ಅಷ್ಟಾವರಣವೆ ಇಪ್ಪತ್ತುನಾಲ್ಕು ಅಕ್ಷರಾದವು. ಆ ಇಪ್ಪತ್ತುನಾಲ್ಕು ಅಕ್ಷರವೆ ಚತುರ್ವಿಂಶತಿತತ್ವಂಗಳಾದವು. ಗುರು ಲಿಂಗ ಜಂಗಮ ಪಾದೋದಕ ಪ್ರಸಾದ ಇವೈದು ಒಂದೇ ವಸ್ತು; ಹದಿನಾಲ್ಕು ಅಕ್ಷರಾದವು. ಆ ಹದಿನಾಲ್ಕು ಅಕ್ಷರಂಗಳೇ ಹದಿನಾಲ್ಕು ಭುವನಂಗಳಾದವು. ವಿಭೂತಿ ರುದ್ರಾಕ್ಷಿ ಪಂಚಾಕ್ಷರಿ ಇವು ಮೂರು ಒಂದೇ ವಸ್ತು; ಹತ್ತು ಅಕ್ಷರವಾದವು. ಆ ಹತ್ತಕ್ಷರವೇ ದಶದಿಕ್ಕುಗಳಾದವು. ಆ ದಶಾಕ್ಷರವೇ ದಶಗಂಗೆಗಳಾದವು. ಆ ದಶಾಕ್ಷರವೇ ದಶವಿಧ ಪಾದೋದಕವಾದವು. ಇಂತಿವನೊಳಕೊಂಡು ಎನ್ನ ಕರಸ್ಥಳಕ್ಕೆ ಬಂದು ನಿಂದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಗುರುಭಕ್ತರು ವಾರ ತಿಥಿ ನಕ್ಷತ್ರ ವ್ಯತಿಪಾತ ಯೋಗ ಕರಣ ಶುಭಾಶುಭವ ನೋಡಲಾಗದು, ಕೇಳಲಾಗದು. ಅವರ ಮನೆಯಲ್ಲಿ ಬಾಲರಂಡೆ ಇಪ್ಪ ಕಾರಣ ಕೇಳಲಾಗದು. ವಾರ ತಿಥಿ ನಕ್ಷತ್ರ ಆರೈದು ಕೇಳಿದವರಿಗೆ ಗುರುವಿಲ್ಲ, ಶಿವನಿಲ್ಲ. ಅವರಿಗೆ ವಾರಗಳೇ ದೈವವಾಗಿಪ್ಪವು. ಇದಕ್ಕೆ ದೃಷ್ಟಾಂತ: ವಸಿಷ*ಮುನಿ ರಾಮ ಲಕ್ಷ್ಮಣರಿಗೆ ಒಳ್ಳೆ ಶುಭವೇಳೆಯ ಲಗ್ನವ ನೋಡಿ ತೆಗೆದುಕೊಟ್ಟನು. ಲಗ್ನವಾದ ಮೇಲೆ ಹೆಂಡತಿ ಸೀತೆಯನ್ನು ರಾವಣನೇಕೆ ಒಯ್ದ? ಮತ್ತೆ ಅವರು ದೇಶತ್ಯಾಗಿಯಾಗಿ ವನವಾಸವೇಕೆ ಹೋದರು? ಸಾಕ್ಷಿ: 'ಕರ್ಮಣಾಂ ಹಿ ಪ್ರಧಾನತ್ವಂ ಕಿಂ ಕರೋತಿ ಶುಭಗ್ರಹಃ | ವಸಿಷಾ*ದಿ ಕೃತೇ ಲಗ್ನೇ ರಾಮಃ ಕಿಂ ಭ್ರಮತೇ ವನಂ||' ಎಂದುದಾಗಿ, ಈ ನಡತೆ ಭಕ್ತಗಣಂಗಳಿಗೆ ಸಮ್ಮತವಲ್ಲ. ಸಮ್ಮತ ಹೇಗೆಂದಡೆ : ಮದುವೆಯ ಮಾಡುವಲ್ಲಿ, ಊರು ಕೇರಿಗೆ ಹೋಗುವಲ್ಲಿ, ಪ್ರಸ್ಥವ ಮಾಡುವಲ್ಲಿ, ಕೆರೆ ಬಾವಿ ಅಗಿಸುವಲ್ಲಿ, ಸಮಸ್ತ ಕಾರ್ಯಕ್ಕೆ ಗುರುಲಿಂಗಜಂಗಮ ಭಕ್ತಗಣಂಗಳ ಕೇಳಿ, ಅವರು ಹೇಳಿದ ಹಾಗೆ ಕೇಳಿ ಅಪ್ಪಣೆಯ ತಕ್ಕೊಂಡು ಸಮಸ್ತ ಕಾರ್ಯವ ಮಾಡುವುದು. ಹೀಗೆ ನಂಬಿದವರಿಗೆ ಸಿದ್ಧಿಯಾಗುವುದು. ಅದು ಹೇಗೆಂದಡೆ : ನಕ್ಷತ್ರಫಲವ ಕೇಳಿಹೆನೆಂದಡೆ, ನಮ್ಮ ಗಣಂಗಳಾದ ರಾಜೇಂದ್ರಜೋಳ, ಚೇರಮರಾಯ, ಸೌಂದರ ಪಾಂಡ್ಯ ಈ ಮೂವರ ಸೀಮೆಯ ಮೇಲೆ ಮಳೆ ಬೀಳದಿದ್ದಡೆ ಆಗ ಮೂವರು ಕೂಡಿ ಸ್ವರ್ಗಕ್ಕೆ ಹೋಗಿ ಆ ಇಪ್ಪತ್ತೇಳು ನಕ್ಷತ್ರಗಳ ಮುಂಗೈ ಕಟ್ಟಿ ತಮ್ಮ ಊರಿಗೆ ತಂದು ಸೆರೆಮನೆಯೊಳಗೆ ಹಾಕಿದುದ ಜಗವೆಲ್ಲ ಬಲ್ಲುದು. ಅಂದಿನ ಗಣಂಗಳು ಇಂದಿದ್ದಾರೆಂದು ನಂಬಿದವರಿಗೆ ಬೇಡಿದ್ದನೀವ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಗುರುಭಕ್ತರಾದವರು ಶಿವಭಕ್ತರಾದವರ ದಣಿವ ಕಂಡು ಸುಮ್ಮನಿರಲಾಗದು. ಅದೇನು ಕಾರಣವೆಂದಡೆ : ಒಬ್ಬ ಗುರುವಿನ ಮಕ್ಕಳಾದ ಮೇಲೆ ತನಗೆ ಗುರುವು ಕೊಟ್ಟ ದ್ರವ್ಯವ ಸವೆಸಲೇಬೇಕು. ಮತ್ತೆ ಪ್ರಪಂಚಿನ ತಂದೆ ಒಬ್ಬನಿಗೆ ಮಕ್ಕಳೈವರು. ಅವರು ತಂದೆಯ ಬದುಕು ನ್ಯಾಯದಿಂದ ಸರಿಮಾಡಿಕೊಂಬರು. ಈ ದೃಷ್ಟವ ಕಂಡು ನಮಗೆ ಭಕ್ತಿಪಕ್ಷವಾಗದಿದ್ದಡೆ ಈ ಪ್ರಪಂಚರಿಗಿಂತ ಕಡಿಮೆಯಾಯಿತಲ್ಲಾ ಗುರುವೆ ಎನ್ನ ಬಾಳುವೆ. ಒಂದಗಳ ಕಂಡರೆ ಕಾಗೆ ಕರೆಯದೆ ತನ್ನ ಬಳಗವನೆಲ್ಲವ ? ಒಂದು ಗುಟುಕ ಕಂಡರೆ ಕೋಳಿ ಕೂಗಿ ಕರೆಯದೆ ತನ್ನ ಕುಲವನೆಲ್ಲವ ? ಇಂತಪ್ಪ ದೃಷ್ಟವ ಕಂಡು ನೋಡಿ ಆ ಭಕ್ತರಿಗೆ ಭಕ್ತಿಪಕ್ಷವಾಗದಿದ್ದಡೆ ಆ ಕಾಗೆ ಕೋಳಿಗಿಂದ ಕರಕಷ್ಟವಾಯಿತಲ್ಲಾ ಎನ್ನ ಬಾಳುವೆ. ಭಕ್ತರಿಗೆ ಕಡಬಡ್ಡಿ ಕೊಟ್ಟ ಮೇಲೆ ಕೊಟ್ಟರೆ ಲೇಸು, ಕೊಡದಿರ್ದಡೆ ಲೇಸು. ಬೇಡಲಾಗದು, ಅದೇನು ಕಾರಣವೆಂದಡೆ ಅವರಲ್ಲಿ ಗುರು-ಲಿಂಗ-ಜಂಗಮವು ಇಪ್ಪರಾಗಿ. ಗುರುವಿನ ದ್ರವ್ಯ ಗುರುವಿಗೆ ಮುಟ್ಟಿತಲ್ಲದೆ, ಮತ್ತೆ ನ್ಯಾಯಕಿಕ್ಕಿ ಅನ್ಯರಿಗೆ ಹೇಳಿ ಅವರ ಭಂಗವ ಮಾಡಿಸಿದರೆ ಗುರುಹಿರಿಯರೆಂಬರು, ನಮ್ಮ ಮನೆಯ ಬೆಕ್ಕು ನಾಯಿಗೆ ಮನ್ನಿಸಬೇಕಲ್ಲದೆ, ಮನ್ನಿಸದಿದ್ದಡೆ ಅವರಿಗೆ ಅವರ ತಕ್ಕ ಶಿಕ್ಷೆಯಾದೀತು. ಮತ್ತೆ ಭಕ್ತಾಭಕ್ತರಿಗೆ ಕೊಟ್ಟು ಕೊಂಬ ಉದ್ಯೋಗವಾಗಲಿ ಆಚಾರ-ವಿಚಾರವಾಗಲಿ, ಬೈದರಾಗಲಿ, ಹೊಯ್ದರಾಗಲಿ ಮತ್ತೆ ಏನಾದರು ತೊಡಕು ಬರಲಿ ತಮ್ಮ ಮನೆಯೊಳಗೆ ಸುಮ್ಮನೆ ಇರುವುದು ಲೇಸು. ಮತ್ತೆ ಭಕ್ತಗಣಂಗಳು ಇದ್ದಲ್ಲಿಗೆ ಇಬ್ಬರೂ ಹೋಗಿ ತಮ್ಮಲ್ಲಿ ಇರುವ ಸ್ಥಿತಿಯ ಹೇಳಿ, ಅವರು ಹೇಳಿದ ಹಾಗೆ ಕೇಳಿಕೊಂಡು ಇಪ್ಪುದೇ ಲೇಸು. ಇಲ್ಲಿ ಭಕ್ತಗಣಂಗಳು ಒಪ್ಪಿದರೆ ಅಲ್ಲಿ ಒಪ್ಪುವರು. ಕಡ ಒಯ್ದದ್ದು ಕೊಡದಿದ್ದಡೆ, ಮತ್ತೆ ಭಕ್ತರು ಬೈದರೆ ನಮಗೆ ದುಮ್ಮಾನವಾಗುವದು ಸ್ವಾಮಿ. ಅನ್ಯರು ಒಯ್ದ ದ್ರವ್ಯ ಮುಳುಗಿದಡೆ ಚಿಂತೆಯಿಲ್ಲವು, ಭವಿಜನಾತ್ಮರು ಬೈದಡೆ ಎಳ್ಳಷ್ಟು ಸಿಟ್ಟಿಲ್ಲವು. ಇಂಥ ಬುದ್ಧಿಯ ಕೊಡಬಹುದೆ ಲಿಂಗವೆ ! ನೀವು ಬೇಡಿದುದನೀವೆನೆಂಬ ನಿಮ್ಮ ತಮ್ಮಟ ಬಿರಿದನು ಕೇಳಿ ಬೇಡಿಕೊಂಬೆನು. ಏನೆಂದಡೆ : ಉದ್ಯೋಗ ವ್ಯಾಪಾರ ಮಾಡುವಲ್ಲಿ ಹುಸಿ [ಬರೆಹವ] ಮಾಡಿ ಒಬ್ಬರ ಮನೆಯ ದ್ರವ್ಯವ ಒಬ್ಬರ ಮನೆಗೆ ಹಾಕಿ, ಅಹುದಲ್ಲದ ಮಾಡುವದ ಬಿಡಿಸು. ನಿಮ್ಮ ನೆನಹಿನೊಳಗೆ ಇಟ್ಟ ಮೇಲೆ ಮತ್ತೆ ರೊಕ್ಕ ಕೊಟ್ಟು ಉದ್ಯೋಗವ ಮಾಡದಿರಯ್ಯ. ಈ ರೊಕ್ಕವು ತಂದೆ-ಮಕ್ಕಳಿಗೆ ವಿರೋಧ. ಕೊಂಬಲ್ಲಿ ವಿರೋಧ, ಕೊಟ್ಟಲ್ಲಿ ವಿರೋಧ. ಇಂತಿದ ತಿಳಿದ ಮೇಲೆ ಹೇಸಿಕೆಯಾಯಿತ್ತು. ರೊಕ್ಕವ ಕೊಡಬೇಡ, ಸಿರಿತನ ಬೇಡ, ಬಡತನ ಕೊಡಿರಯ್ಯ. ಹಿರಿತನ ಬೇಡ ಕಿರಿತನ ಕೊಡಿರಯ್ಯ. ಒಡೆತನ ಬೇಡ ಬಂಟತನ ಕೊಡಿರಯ್ಯ. ಭಕ್ತಗಣಂಗಳ ಸೇವೆಯ ಕೊಡಿರಯ್ಯ. ಭಕ್ತರ ನೆರೆಯಲ್ಲಿ ಇರಿಸಯ್ಯ. ಅವರು ಒಕ್ಕುಮಿಕ್ಕ ಪ್ರಸಾದವ ಕೊಡಿಸಯ್ಯ. ಅವರು ತೊಟ್ಟ ಮೈಲಿಗೆಯ ಕೊಡಿಸಯ್ಯ. ಅವರ ಬಾಗಿಲ ಕಾಯಿಸಯ್ಯ. ಅವರ ಬಂಟತನ ಮಾಡಿಸಯ್ಯ. ಅವರ ಸಂಗ ಎಂದೆಂದಿಗೂ ಅಗಲಿಸದಿರಯ್ಯ. ನಾಲಗೆಯಲ್ಲಿ ಪಂಚಾಕ್ಷರವ ನಿಲಿಸಯ್ಯ. ನೇತ್ರದೊಳಗೆ ನಿಮ್ಮ ರೂಪವ ನಿಲಿಸಯ್ಯ. ಇಷ್ಟನು ಕೊಡದಿರ್ದಡೆ ನೀವು ಬೇಡಿದ್ದನೀವನೆಂಬ ನಿಮ್ಮ ತಮ್ಮಟ ಬಿರಿದು ಕೇಳಿ ನಮ್ಮ ಗಣಂಗಳು ಹಿಡಿತಿಯ ಹಿಡಿದಾರಯ್ಯ ! ಎಂದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಗುರುವೇ ಪರಶಿವನು. ಗುರುವೇ ಸಕಲಾಗಮಮೂರ್ತಿ. ಗುರುವೇ ಸಕಲ ವಿದ್ಯಾಸ್ವರೂಪನು. ಗುರುವೇ ಸಕಲ ಮಂತ್ರಸ್ವರೂಪನು. ಗುರುವೇ ಕಲ್ಪವೃಕ್ಷವು, ಕಾಮಧೇನುವು. ಗುರುವೇ ಪರುಷದ ಖಣಿ, ತವನಿಧಿ. ಗುರುವೇ ಕರುಣರಸಾಬ್ಧಿ. ಗುರುವಿನಿಂದಧಿಕ ದೈವವಿಲ್ಲ. ಸರ್ವಧ್ಯಾನಕ್ಕೆ ಗುರುಧ್ಯಾನವೇ ಅಧಿಕ. ಸರ್ವಪೂಜೆಗೆ ಗುರುವಿನ ಪಾದಪೂಜೆಯೇ ಅಧಿಕ. ಸರ್ವಮಂತ್ರಕ್ಕೆ ಗುರುವಿನ ವಾಕ್ಯವೇ ಅಧಿಕ. ಸರ್ವಮುಕ್ತಿಗೆ ಗುರುವಿನ ಕರುಣಕೃಪೆಯೇ ಅಧಿಕ. ಸಾಕ್ಷಿ : ''ಧ್ಯಾನಮೂಲಂ ಗುರೋರ್ಮೂರ್ತಿಃ ಪೂಜಾಮೂಲಂ ಗುರೋಃ ಪದಂ | ಮಂತ್ರಮೂಲಂ ಗುರೋರ್ವಾಕ್ಯಂ ಮುಕ್ತಿಮೂಲಂ ಗುರೋಃ ಕೃಪಾ ||'' ಎಂಬುದಾಗಿ, ಇಂತಿವನೆಲ್ಲವನೊಳಕೊಂಡು ಎನ್ನ ಕರಸ್ಥಲಕ್ಕೆ ಇಷ್ಟಲಿಂಗಸ್ವರೂಪವಾಗಿ ಮತ್ತೆ ಮನಸ್ಥಲಕ್ಕೆ ಪ್ರಾಣಲಿಂಗಸ್ವರೂಪವಾಗಿ ಮತ್ತೆ ಭಾವಸ್ಥಲಕ್ಕೆ ಭಾವಲಿಂಗಸ್ವರೂಪವಾಗಿ ಈ ತ್ರಿವಿಧಮೂರ್ತಿಯೇ ಅಷ್ಟಾವರಣಸ್ವರೂಪವಾಗಿ ಎನ್ನ ಅಱುಹಿನಲ್ಲಿ ಗುರು ಎನ್ನ ಪ್ರಾಣದಲ್ಲಿ ಲಿಂಗ ಎನ್ನ ಜ್ಞಾನದಲ್ಲಿ ಜಂಗಮ ಎನ್ನ ಜಿಹ್ವೆಯಲ್ಲಿ ಪಾದೋದಕ ಎನ್ನ ನಾಸಿಕದಲ್ಲಿ ಪ್ರಸಾದ ಎನ್ನ ತ್ವಕ್ಕಿನಲ್ಲಿ ವಿಭೂತಿ ಎನ್ನ ನೇತ್ರದಲ್ಲಿ ರುದ್ರಾಕ್ಷಿ ಎನ್ನ ಶ್ರೋತ್ರದಲ್ಲಿ ಪಂಚಾಕ್ಷರಿ ಇಂತಿವು ಅಷ್ಟಾವರಣಸ್ವರೂಪವಾಗಿ ಎನ್ನೊಳು ತನ್ನ ಕರುಣಕೃಪೆಯ ತೋರಿದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ