ಭಕ್ತಗಣಂಗಳು ನಮಸ್ಕಾರವ ಮಾಡುವ ಕ್ರಮವು:
ಗುರುವಿಗೆ ದೀರ್ಘದಂಡ ನಮಸ್ಕಾರವ ಮಾಡಿದಡೆ
ಹಿಂದಣ ಜನ್ಮದ ಪಾತಕದ ಪರಿಹಾರವು.
ಲಿಂಗಕ್ಕೆ ಕರಮುಟ್ಟಿ ನಮಸ್ಕಾರವ ಮಾಡಿದಡೆ
ಉರಿಯುಂಡ ಕರ್ಪುರದ ಹಾಗೆ ಆಗುವುದು.
ಜಂಗಮಕ್ಕೆ ತಲಮುಟ್ಟಿ ನಮಸ್ಕಾರವ ಮಾಡಿದಡೆ
ನಿಜಮುಕ್ತಿಯಾಗುವುದು.
ಭಕ್ತಂಗೆ ಸಾಷ್ಟಾಂಗ ನಮಸ್ಕಾರವು.
ಅಭಯಂಗೆ ಸಾಷ್ಟಾಂಗ ನಮಸ್ಕಾರವು.
ಏಕೆಂದಡೆ, ಆ ಭಕ್ತನ ಹೃದಯದಲ್ಲಿ
ಅಷ್ಟಾವರಣಮೂರ್ತಿಗಳಿಹರು.
ಅದಕ್ಕೆ ಭಕ್ತಂಗೆ ಅಷ್ಟಾಂಗಭೂಮಿಗೆ ಹೊಂದಿ
ನಮಸ್ಕಾರವ ಮಾಡಿದಡೆ ಗಣಪದವಿಯಪ್ಪುದು.
ಇದಕ್ಕೆ ತ್ರಿಕರಣಶುದ್ಭವಾಗಿ ವಂಚನೆಯಿಲ್ಲದೆ
ತನು-ಮನ-ಧನವನೊಪ್ಪಿಸಿ
ಈ ಚತುರ್ವಿಧಮೂರ್ತಿಗಳಿಗೆ
ನಮಸ್ಕಾರವ ಮಾಡಿದಡೆ ನಾಲ್ಕು ಪದವಿ
ಸಿದ್ಧವಪ್ಪುದು ತಪ್ಪದು ಶಾಶ್ವತ
ಎಂದಾತ ನಮ್ಮ ಶಾಂತಕೂಡಲಸಂಗಮದೇವ.