ಜೀವನ್ಮುಕ್ತಿ ಯಾವುದೆಂದಡೆ
ಹೇಳಿಹೆ ಕೇಳಿರಯ್ಯಾ.
ಜೀವನ ಬುದ್ಧಿಯ ಬಿಟ್ಟುದು ಜೀವನ್ಮುಕ್ತಿ.
ಜೀವನ ಬುದ್ಧಿ ಯಾವುದೆಂದಡೆ :
ಜ್ಞಾನಗುರುಗಳಿಂದ ಜ್ಞಾನವ ಪಡೆದು
ಅಂಗಲಿಂಗಸಂಗ ಸಮರಸವಾದುದೇ ಜೀವನ್ಮುಕ್ತಿ.
ಇಂಥದ ಬಿಟ್ಟು ತಾನು ಮಂಗಬುದ್ಧಿಯಿಂದ ನಡೆದು
ಜ್ಞಾನಪ್ರಕಾಶವ ಕಾಣಲಿಲ್ಲವೆಂದು
ಮತ್ತೊಬ್ಬ ಗುರುಗಳಲ್ಲಿ ತಿಳಿಯಬೇಕೆಂಬರು.
ಅವರಲ್ಲಿ ಏನು ಇದ್ದಿತೊ !
ಹೀಗೆಂಬುದೇ ಜೀವನ ಬುದ್ದಿಯು.
ಹೊಲವ ಬಿತ್ತುವ ಒಕ್ಕಲಿಗ ಯಾವನಾದಡೆ ಆಗಲಿ
ಬೀಜವ ಬಿತ್ತುವ ಪರಿ ಒಂದೇ.
ಮತ್ತೆ ಗೊಲ್ಲಾಳಯ್ಯಂಗೆ ಕುರಿಯ ಹಿಕ್ಕೆಯ ದೃಢದಿಂದ ಪೂಜಿಸಿ
ಗುರು ಪ್ರಸನ್ನತೆಯ ಹಡೆದುದಿಲ್ಲವೆ ?
ಅವಿಶ್ವಾಸದಿಂದೆ, ಅಂಗಬುದ್ಧಿಯಿಂದೆ
ಹಲವು ಗುರು, ಹಲವು ಲಿಂಗ ಅರ್ಚಿಸಿ ಪೂಜಿಸಿ
ಹಲವು ಭವದಲ್ಲಿ ಬಂದರು ನೋಡಾ !
ಜೀವನ ಬುದ್ಧಿ ಎಂತೆಂದಡೆ :
ಆಶೆ ರೋಷ ಅಹಂಕಾರ ಅರಿಷಡ್ವರ್ಗಂಗಳು
ಅಷ್ಟಮದಂಗಳು, ಅನೃತ,
ಪರಧನ, ಪರಸ್ತ್ರೀ, ಪರನಿಂದೆ, ಪರಹಿಂಸೆ
ಇವೆಲ್ಲವೂ ಜೀವನಬುದ್ಧಿ.
ಇಂತಿವೆಲ್ಲವ ಒಳಗಿಟ್ಟುಕೊಂಡು
ನಾವು ಜೀವನ್ಮುಕ್ತರೆಂಬರು ಎಂತಹರೋ ನೋಡಾ!
ದೀಪವೆಂದಡೆ ಕತ್ತಲೆ ಹೋಯಿತ್ತೆ ?
ಅಮೃತವೆಂದಡೆ ಹಸಿವು ಹೋಯಿತ್ತೆ ?
ಉದಕವೆಂದಡೆ ತೃಷೆ ಹೋಯಿತ್ತೆ ?
ಇಂಥವರಿಗೆ ಮುಕ್ತಿಯಿಲ್ಲವಯ್ಯಾ.
ಮತ್ತೆ ಜೀವನ್ಮುಕ್ತಿ ಹೇಗೆಂದಡೆ -
ಶರಣಸತಿ ಲಿಂಗಪತಿಯೆಂಬ
ಭೇದವ ತಿಳಿದಡೆ ಜೀವನ್ಮುಕ್ತಿ.
ಈ ತ್ರಿವಿಧತನವು ಮೀಸಲಾಗಿ
ತ್ರಿವಿಧಲಿಂಗಕ್ಕೆ ಅರ್ಪಿಸಬಲ್ಲಾತನೆ ಜೀವನ್ಮುಕ್ತನು ಎಂದಾತ
ನಮ್ಮ ಶಾಂತಕೂಡಲಸಂಗಮದೇವ.