ಸತ್ತು ಚಿತ್ತು ಆನಂದ ನಿತ್ಯಪರಿಪೂರ್ಣ ಮಹಾಘನಲಿಂಗವು
ಭಕ್ತಂಗೆ ಸಾಕಾರವಾಗಿ ತನುತ್ರಯಕ್ಕೆ ಇಷ್ಟ-ಪ್ರಾಣ-ಭಾವಲಿಂಗ
ಸ್ವರೂಪವಾಗಿರ್ದ ಕಾರಣ,
ನಡೆವುತ್ತ ನುಡಿವುತ್ತ ಸರ್ವಾವಸ್ಥೆಯಲ್ಲಿ ಲಿಂಗದೊಳಗಿಪ್ಪಾತನೆ ಭಕ್ತ.
ಹೀಗಲ್ಲದೆ ನಿತ್ಯವಾದ ಲಿಂಗಕ್ಕೆ ಕೇಡ ಬಯಸುವ
ತನ್ನ ಸಂಕಲ್ಪ ವಿಕಲ್ಪ ಸಂದೇಹದಿಂದ ನುಡಿದಡೆ
ತನ್ನ ಭಾವಕ್ಕಲ್ಲದೆ ಆ ಮಹಾಘನಲಿಂಗವ ನಂಬಿದವರಿಗೆ
ಇಂಬಾಗಿಪ್ಪನು ವಿಶ್ವಾಸದಿಂದ.
ವಿಶ್ವಾಸದಿಂದ ಗೊಲ್ಲಾಳಯ್ಯಂಗೆ ಕುರಿಯ ಹಿಕ್ಕೆ ಲಿಂಗವಾದುದಿಲ್ಲವೆ ?
ಸದ್ಭಾವದಿಂದ ಬಳ್ಳೇಶಮಲ್ಲಯ್ಯಂಗೆ ಬಳ್ಳ ಲಿಂಗವಾದುದಿಲ್ಲವೆ?
ಭಾವದಿಂದ ನಂಬೆಣ್ಣಂಗೆ ಅಂಗನೆಯ ಕುಚ ಲಿಂಗವಾದುದಿಲ್ಲವೆ ?
ವಿಶ್ವಾಸದಿಂದ ಕೆಂಬಾವಿ ಭೋಗಣ್ಣಂಗೆ ಲಿಂಗ ಒಡನೆ ಹೋದುದಿಲ್ಲವೆ?
ಮತ್ತೆ ಇಷ್ಟಲಿಂಗದೊಳಗೆ ನೀಲಲೋಚನೆಯಮ್ಮನವರ
ಶರೀರವೆ ಏಕಾಕಾರವಾಗಲಿಲ್ಲವೆ ?
ಸಾಕ್ಷಿ:
''ಕರ್ಪೂರಮನಲಗ್ರಾಹ್ಯಂ ರೂಪಂ ನಾಸ್ತಿ ನಿರಂತರಂ |
ತಥಾ ಲಿಂಗಾಂಗಸಂಯೋಗೇ ಅಂಗೋ ನಿರ್ವಯಲಂ ಗತಃ ||'
ಎಂದುದಾಗಿ,
ಇಂತಪ್ಪ ದೃಷ್ಟವ ಕಂಡು ನಂಬದಿರ್ದಡೆ ಕರ್ಮದ ಫಲವು.
ಇಂತಪ್ಪ ಮಹಾಲಿಂಗದ ನಿಲವ ಅರಿದಾತ
ನಮ್ಮ ಶಾಂತಕೂಡಲಸಂಗಮದೇವ ಬಲ್ಲನಲ್ಲದೆ
ದುರ್ಭಾವಕರು ಎತ್ತ ಬಲ್ಲರು ನೋಡಾ !