ಶ್ರೀಗುರುವಿನ ಸಂದರ್ಶನಕ್ಕೆ ಹೋದಲ್ಲಿ
ಮೂರ್ತಿಧ್ಯಾನದಿಂದ ಮಹಾಪ್ರಸಂಗವ
ಮಹಾಪ್ರಸಾದವೆಂದು ಕೈಕೊಂಡು,
ಆ ಗುಣ ಗುರುಭಕ್ತಿ ಸಾಧನ,
ಶಿವಲಿಂಗ ಪೂಜೆಯ ಮಾಡುವಲ್ಲಿ
ಪರಾಕು ಪರಿಭ್ರಮಣ ಪ್ರಕೃತಿಭಾವ
ಪಗುಡಿ ಪರಿಹಾಸಕರ ವಾಗ್ವಾದಿಗಳ ಕೂಡದೆ
ಕಂಗಳಲ್ಲಿ ಹೆರೆಹಿಂಗದೆ,
ಭಾವದಲ್ಲಿ ಬೈಚಿಟ್ಟುಕೊಂಡು
ಹೆರೆಹಿಂಗದಿರವು ಶಿವಲಿಂಗಪೂಜಕನ ಭಾವ
ಜಂಗಮ ಸೇವೆಯ ಮಾಡುವಲ್ಲಿ
ಇಷ್ಟ ಕಾಮ್ಯ ಮೋಕ್ಷಂಗಳನರಿತು
ಆಶನ ವಿಷಯ ರೋಷ ಆಸಕರನರಿತು
ವರ್ಮಕ್ಕೆ ವರ್ಮ, ಧರ್ಮಕ್ಕೆ ಮುಕ್ತಿ,
ವೈಭವಕ್ಕೆ ಖ್ಯಾತಿ ಲಾಭಂಗಳನರಿತು
ಮಾಡಿದ ದ್ರವ್ಯ ಕೇಡಿಲ್ಲದಂತೆ ಅಡಗಿಪ್ಪುದು ಜಂಗಮಭಕ್ತಿ;
ಇಂತೀ ತ್ರಿವಿಧಭಕ್ತಿಯಲ್ಲಿ ನಿರತ ಸ್ವಯ ಸನ್ನದ್ಧನಾಗಿಪ್ಪ
ಭಕ್ತನ ಪಾದದ್ವಯವೆ, ಗೋಪತಿನಾಥ ವಿಶ್ವೇಶ್ವರಲಿಂಗವಿಪ್ಪ ಸಜ್ಜಾಗೃಹ.