ಹಸುವಿಂಗೆ ಸಂಜ್ಞೆ, ಎತ್ತಿಂಗೆ ಮುಟ್ಟು, ಕರುವಿಂಗೆ ಲಲ್ಲೆ.
ಇಂತೀ ತ್ರಿಗುಣದ ಇರವ, ತ್ರಿಗುಣಾತ್ಮಕ ಭೇದವ,
ತ್ರಿಗುಣ ಭಕ್ತಿಯ ಮುಕ್ತಿಯ, ತ್ರಿಗುಣ ಘಟಾದಿಗಳ,
ತ್ರಿಗುಣ ಮಲ ನಿರ್ಮಲಂಗಳ,
ತ್ರಿಗುಣ ಸ್ವಯ ಚರ ಪರಂಗಳಲ್ಲಿ
ತ್ರಿವಿಧ ಶಕ್ತಿ ತ್ರಿವಿಧ ಮುಕ್ತಿ
ಇಂತೀ ತ್ರಿವಿಧಂಗಳೊಳಗಾಗಿ
ಉತ್ಪತ್ಯ ಸ್ಥಿತಿ ಲಯ ತ್ರಿವಿಧದ ಹೆಚ್ಚು ಕುಂದನರಿತು,
ಎತ್ತು ಹಸುವಿನ ಸಂಗದಿಂದ ಕರುವಾದ ತೆರನನರಿತು
ಇಂತೀ ಒಂದರಲ್ಲಿ ಒಂದು ಕೂಡಲಿಕ್ಕೆ
ಬಿಂದು ನಿಂದು ಕುರುಹಾದುದ ಕಂಡು
ನೆನೆದು ನೆನೆಸಿಕೊಂಬುದದೇನೆಂದು ತಿಳಿದು,
ಇಂತೀ ಅಂಡ ಪಿಂಡಗಳಲ್ಲಿ ನಿರಾತ್ಮನು ಆತ್ಮನಾಗಿ,
ನಾನಾರೆಂಬುದ ತಾನರಿತು ತಿಳಿದಲ್ಲಿ
ತುರುಮಂದೆಯೊಳಗಾಯಿತ್ತು.
ಇದು ಗೋಪತಿನಾಥನ ಕೂಟ,
ವಿಶ್ವನಾಥಲಿಂಗನ ಲೀಲಾಭಾವದಾಟ.