ಆದಿಯಲ್ಲಿ ಪ್ರಸಾದ, ಏಕಮುಖ ಸಾಧಕರ ಮುಖದಿಂದ
ಅನಂತಮುಖವಾದುದು.
ಎಯ್ದಿ ನಿಂದಲ್ಲಿ ಮತ್ತೆ ಏಕಮುಖವಾದುದು.
ಇದರ ಭೇದವ ಬಸವಣ್ಣ ಚೆನ್ನ ಬಸವಣ್ಣನ ಸಂಪಾದನೆಯಿಂದಲಾನರಿದೆನು.
ಅರಿದಡೇನು ಎನಗಾಯತವಾಗದು. ಆಯತವಾದಡೇನು ಸನ್ನಹಿತವಾಗದು.
ಗುರುಲಿಂಗ ಜಂಗಮದನುವನರಿರದ ವಿಶ್ವಾಸ, ಜಾನಿಗಲ್ಲದೆ ಅಳವಡದು.
ಆ ಪರಮ ವಿಶ್ವಾಸ ಸತ್ಸದಯದಿಂದಲ್ಲದೆ ಸಮನಿಸದು.
ಇದು ಕಾರಣ, ಪ್ರಸಾದದಾದಿಕುಳವ ನಾನೆತ್ತ ಬಲ್ಲೆನಯ್ಯಾ?
ಪ್ರಸಾದವೆಂಬುದು ಅನಿಂದ್ಯ, ಅಮಲ ಅಗೋಚರ,
ನಿರಂಜನ, ನಿತ್ಯಸತ್ಯ, ಜ್ಞಾನಾನಂದ, ಪರಬ್ರಹ್ಮ, ನಿಶ್ಚಯ.
ಅದು ತನ್ನ ತಾನೆ ನುಡಿವುತ್ತಿಹುದು.
ಆ ನುಡಿಯೆ ಸುನಾದ, ಆ ಸುನಾದವೆ ಓಂಕಾರ.
ಆ ಓಂಕಾರ ತಾನೆ ಮಹಾಜ್ಞಾನ, ಪರಮಚೈತನ್ಯ, ಪ್ರಸಿದ್ಧ ಪಂಚಾಕ್ಷರ.
ಅದೆಂತೆಂದಡೆ :
`ಪ್ರಣವೋ ಹಿ ಪರಬ್ರಹ್ಮ ಪ್ರಣವೋ ಹಿ ಪರಂ ಪರದಂ'
ಎಂದುದಾಗಿ,
ಆ ಪ್ರಸಿದ್ಧ ಪಂಚಾಕ್ಷರವು ತನ್ನಿಂದ ತಾನೆ ಸಕಲ ನಿಷ್ಕಲವಾಯಿತ್ತು.
ಆ ಪರಮನಿಷ್ಕಲವೇ ಶ್ರೀಗುರು, ಸಕಲವೇ ಲಿಂಗ,
ಸಕಲನಿಷ್ಕಲವೇ ಜಂಗಮ.
ಅದೆಂತೆಂದಡೆ :
`ಏಕಮೂರ್ತಿಸ್ತ್ರೀಧಾ ಭೇದಾ ಗುರುರ್ಲಿಂಗಂತು ಜಂಗಮ'
ಎಂದುದಾಗಿ,
ಆ ಜಂಗಮಪ್ರಸಾದÀÀವೆ ಮೂಲವಾದ ಕಾರಣ, ಆ ಜಂಗಮವನಾರಾಧಿಸಿ,
ಅನಂತ ಪ್ರಮಥಗಣಂಗಳು ಪ್ರಸಾದವ ಪಡೆದು,
ತಮ್ಮ ಸದ್ಭಾವವೆಂತಂತೆ ಸ್ವೀಕರಿಸಿದ ಕಾರಣ, ಅನಂತಮುಖವಾಯಿತ್ತು.
ಅವೆಲ್ಲವನೊಳಕೊಂಡು ತಾನೆ ನಿಂದ ಕಾರಣ ಎಂದಿನಂತಾಯಿತ್ತು.
ಇದೇ ಪ್ರಸಾಧಾದಿ ಮಧ್ಯಾಂತದರಿವು ಕಾಣಿರೆ.
ಇಂತಪ್ಪ ಪ್ರಸಾದವ ಕೊಂಬ ಪ್ರಸಾದಿಯ ನಿಲವೆಂತೆಂದಡೆ :
ವಿಶ್ವಾಸವೆ ಒಡಲಾಗಿ, ಲಿಂಗನಿಷೆ*ಯೆ ಇಂದ್ರಿಯಂಗಳಾಗಿ,
ಸಾವಧಾನವೆ ಕರಣಂಗಳಾಗಿ, ಶಿವಾನುಭಾವವೆ ಪ್ರಾಣವಾಗಿ,
ಮಹದಾನಂದವೆ ತಾನಾಗಿ, ಲಿಂಗಸಮರಸವೆ ಭರಿತವಾಗಿರ್ಪ
ಮಹಾಜ್ಞಾನಿಯೆ ಪ್ರಸಾದಿ.
ಆ ಪ್ರಸಾದಿಯ ಪ್ರಸಾದವೆ ಎನ್ನ ಲಿಂಗಕ್ಕೆ ಕಳೆಯಾಯಿತ್ತು.
ಅದೆ ಎನಗೆ ತಿಳಿವಾಯಿತ್ತು, ಮಹಾಲಿಂಗ ಕಲ್ಲೇಶ್ವರಾ.