ಎನ್ನ ಗುರುವೆನ್ನ ಪ್ರಾಣಲಿಂಗವ
ಕರುಣದಿಂದನುಗ್ರಹವ ಮಾಡಿದ ಪರಿ ಎಂತೆಂದಡೆ :
ಪಚ್ಚೆಯ ನೆಲಗಟ್ಟಿ£ ಮೇಲೆ ಚೌಮೂಲೆಯ ಸರಿಸದಲ್ಲಿ.
ಷೋಡಶ ಕಂಬಂಗಳ ಮಂಟಪವ ಮಾಡಿ,
ಮಧ್ಯದಲ್ಲಿ ಕುಳ್ಳಿರ್ದು ಉಪದೇಶದ ಪಡೆಯಲೆಂದು ಹೋದಡೆ,
ಎನ್ನಂತರಂಗದಲ್ಲಿ ಚತುಷ್ಕೋಣೆಯ ಚತುರ್ದಳದ ನೆಲಗಟ್ಟಿನ ಮೇಲೆ
ಷೋಡಶಕಲೆಗಳೆಂಬ ಹದಿನಾರುಕಂಬವ ನೆಟ್ಟು,
ಧ್ಯಾನ ವಿಶ್ರಾಮದ ಮೇಲೆ ಆದಿಮಧ್ಯತ್ರಿಕೂಟವೆಂಬ ಮಂಟಪವನಿಕ್ಕೆ,
ಆ ಮಂಟಪಸ್ಥಾನದಲ್ಲಿ ಎನ್ನ ಗುರು ಕುಳ್ಳಿರ್ದು ಅನುಗ್ರಹವ ಮಾಡಿದಡೆ,
ನುಡಿಯಡಗಿದ, ಒಡಲಳಿದ ಸ್ವಯಲಿಂಗಸಂಬಂಧವಾದ ಭೇದವ
ಮಹಾಲಿಂಗಕಲ್ಲೇಶ್ವರಾ, ನಿಮ್ಮ ಶರಣ ಬಲ್ಲ.