ಜಂಗಮದ ಪಾದೋದಕವ ಲಿಂಗಮಜ್ಜನಕ್ಕೆರೆದು,
ಆ ಜಂಗಮದ ಪ್ರಸಾದವನೆ ಲಿಂಗಕ್ಕರ್ಪಿಸುವ
ಅವಿವೇಕಿಗಳು ನೀವು ಕೇಳಿರೆ !
ಅಟ್ಟೋಗರವನಟ್ಟೆನೆಂಬ, ಕಾಷ*ವ ಸುಟ್ಟ ಬೂದಿಯ
ಮರಳಿ ಸುಟ್ಟೆಹೆನೆಂಬ ಭ್ರಮಿತರು ನೀವು ಕೇಳಿರೆ !
ಪದಾರ್ಥ ಪ್ರಸಾದವಾದುದು ಇಷ್ಟಲಿಂಗ ಮುಖದಿಂದ.
ಆ ಇಷ್ಟಲಿಂಗವ ಸೋಂಕಿ ಬಂದ ಆದಿಪ್ರಸಾದವೆ
ಪ್ರಾಣಲಿಂಗಕ್ಕೆ ಅಂತ್ಯಪ್ರಸಾದ.
ಆ ಪ್ರಾಣಲಿಂಗಮುಖದಿಂದಲೊದಗಿದ ಅಂತ್ಯಪ್ರಸಾದವೆ
ಭಾವಲಿಂಗಕ್ಕೆ ತೃಪ್ತಿಮುಖದಲ್ಲಿ ಸೇವ್ಯ ಪ್ರಸಾದ.
ಇಂತೀ ಆದಿಪ್ರಸಾದ, ಅಂತ್ಯಪ್ರಸಾದ, ಸೇವ್ಯಪ್ರಸಾದ ಗ್ರಾಹಕವೆಂಬ ಜಂಗಮ
ಇಷ್ಟಲಿಂಗವಿಡಿದು ಗುರು, ಇಷ್ಟಲಿಂಗವಿಡಿದು ಭಕ್ತ,
ಇಷ್ಟಲಿಂಗವಿಡಿದು ಜಂಗಮ.
ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಿ,
ಪ್ರಸನ್ನ ಪ್ರಸಾದವ ಪಡೆದು, ಅಷ್ಟಭೋಗವ ಭೋಗಿಸುವಾತನೆ ಗುರು.
ಇಂತೀ ಆದಿಕುಳ ಮಹಾನಂದ ಪ್ರಸಾದದ ನಿಜಾನುಭಾವಿಯೆ ಜಂಗಮ.
ಇಂತೀ ಗುರು ಲಿಂಗ ಜಂಗಮದಲ್ಲಿ ಭಕ್ತಿ ನೆಲೆಗೊಂಡ
ನಿರುಪಾಧಿಕನೆ ಭಕ್ತ.
ಆ ಭಕ್ತನು ಲಿಂಗಮುಖದಲ್ಲಿ ಸಿದ್ಧಪ್ರಸಾದವ ಪಡೆದು ಭೋಗಿಸೂದು.
ಸ್ವಚ್ಛಂದ ಲಲಿತ ಭೈರವಿಯಲ್ಲಿ :
ಲಿಂಗಾರ್ಪಿತ ಪ್ರಸಾದಂ ಚ ನದದ್ಯಾತ್ ಜಂಗಮಾದಿಷು |
ಜಂಗಮಸ್ಯ ಪ್ರಸಾದಂ ಚ ನ ದದ್ಯಾ ಲಿಂಗಮೂರ್ತಿಷು |
ಜಂಗನಸ್ಯ ಪ್ರಸಾದಂ ಚ ಸ್ವೇಷ್ಟಲಿಂಗೇನ ಚಾರ್ಪಯೇೀತ್ |
ಪ್ರಮಾದಾದರ್ಪಯೇದ್ದೇವಿ ಪ್ರಸಾದೋ ನಿಷ್ಫಲೋ ಭವೇತ್ ||
ಇಂತೆಂದುದಾಗಿ,
ಅಂದಾದಿಯಿಂದಾದಿಯಾಗಿ ಎಂದೆಂದೂ ಇದೇ ಪ್ರಸಾದದಾದಿಕುಳ.
ಈ ಆದಿಕುಳದರಿವುವಿಡಿದು ಪ್ರಸಾದವಿಡಿವ
ಮಹಾಪ್ರಸಾದ ಸಾಧ್ಯಗ್ರಾಹಕರಿಗೆ ನಮೋ ನಮೋ ಎಂಬೆ.
ಉಳಿದ ಉದ್ದೇಶಿಗಳೆನಿಸುವ ಭ್ರಾಂತರಹ ಜಾತ್ಯಂಧಕರಿಗೆ
ನಾನಂಜುವೆನಯ್ಯಾ, ಮಹಾಲಿಂಗ ಕಲ್ಲೇಶ್ವರಾ.