ಅಂಗದ ಲಿಂಗ ಆತ್ಮನಲ್ಲಿ ವೇಧಿಸಬೇಕೆಂಬುದಕ್ಕೆ ವಿವರ;
ತಿಲರಾಶಿಯಲ್ಲಿ ಸುಗಂಧದ ಕುಸುಮವ
ದ್ವಂದ್ವವಮಾಡಿ ಕೂಡಿ ಇರಿಸಲಿಕ್ಕಾಗಿ,
ಆ ಗಂಧ ತಿಲದಂಗವ ವೇಧಿಸಿ
ಆ ತಿಲರಸವ ಭೇದಿಸಿದಂತೆ ಆಗಬಲ್ಲಡೆ,
ಆ ಲಿಂಗ ಆತ್ಮನಲ್ಲಿ ವೇಧಿಸಿಹುದು.
ಕುಸುಮದ ಗಂಧ ಒಳಗಾದುದನು,
ತಿಲದ ಹಿಪ್ಪೆ ಹೊರಗಾದುದನು ಅರಿದು ನಿಶ್ಚಯವ ಕಂಡಲ್ಲಿ,
ಹೊರಗಣ ಪೂಜೆ, ಒಳಗಣ ದಿವ್ಯಪ್ರಕಾಶ,
ವಸ್ತುವಿನ ಭಾವದ ಕೂಟ ಇಷ್ಟಲ್ಲದಿಲ್ಲ.
ಇದ ಮೀರಿ ಕಾಬ ನಿಜಲಿಂಗೈಕ್ಯರು ನೀವೆ ಬಲ್ಲಿರಿ.
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನ
ಮುಳುಗಿದುದೆ ಸಮುದ್ರ.