ಪೂಜಿಸುವವರ ಕಂಡವರ ಕಂಡು,
ಆ ಗುಣವ ತಾ ಕೈಕೊಂಡು ಪೂಜಿಸದೆ
ವಾಗ್ಬ್ರಹ್ಮವ ನುಡಿವವರ ಕಂಡು, ಶೇಷವನು ಈಚೆಯಲ್ಲಿ ನುಡಿಯದೆ,
ತನ್ನ ಸ್ವಯಾನುಭಾವ ಪೂಜೆ, ತನ್ನ ಸ್ವಯಸಿದ್ಭವಾದ ನುಡಿ,
ಇಂತೀ ಉಭಯಸ್ಥಲಗೂಡಿ,
ಕ್ಷೀರ ನೀರಿನಂತೆ ಹೊರೆಯಿಲ್ಲದೆ ವರ್ಣಭೇದವಿಲ್ಲದೆ ಕೂಡಬೇಕು,
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ.