ಏನೇನು ಎನಲಿಲ್ಲದ ನಿರಾಲಯದಿಂದಾಯಿತ್ತು ಸಹಜ.
ಆ ಸಹಜದಿಂದಾಯಿತ್ತು ಸೃಷ್ಟಿ,
ಸೃಷ್ಟಿಯಿಂದಾಯಿತ್ತು ಸಂಸಾರ,
ಸಂಸಾರದಿಂದಾಯಿತ್ತು ಅಜ್ಞಾನ,
ಅಜ್ಞಾನದಿಂದಾಯಿತ್ತು ಮರವೆ.
ಆ ಮರವೆಯಿಂದವೆ ಜ್ಞಾನರತ್ನವ ಮರೆದು
ತಾಮಸಕ್ಕೊಳಗಾದಲ್ಲಿ ನಾನೀನೆಂಬ ಅಹಂಕಾರ ತಲೆದೋರಿತ್ತು.
ಆ ಅಹಂಕಾರದಿಂದ ಸೀಮೆಗೆಟ್ಟು ದುಷ್ಕರ್ಮಕ್ಕೀಡಾಗಿ
ನೀನೆಂಬುದ ಮರೆದೆನಯ್ಯಾ.
ಇನ್ನು ಕೃಪೆಯಮಾಡು, ಕೃಪೆಯ ಮಾಡು ಶಿವಧೋ ಶಿವಧೋ
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ.