ನೀರಿನ ಮೇಲೆ ಧರೆ ಹೊರೆಯಾಗಿ
ಮತ್ತಾ ನೀರನಾಶ್ರಯಿಸಿಕೊಂಡಿಪ್ಪಂತೆ,
ಬೀಜದ ಸಾರ ಬಲಿದು ಬೀಜವಾಗಿ
ಆ ಸಾರ ಬೀಜವನಿಂಬಿಟ್ಟುಕೊಂಡಿಪ್ಪಂತೆ,
ನಿರವಯವಸ್ತು ಕುರುಹಾಗಿ
ಆ ಕುರುಹಿಂಗೆ ತಾನರಿವಾಗಿ ಭಾವಿಸಿಕೊಂಬಂತೆ,
ದರ್ಪಣದಲ್ಲಿ ತನ್ನೊಪ್ಪವ ಕಾಣಿಸಿಕೊಂಬ ದೃಕ್ಕು
ದರ್ಪಣದಿಂದೆಂದಡೆ ನಿಶ್ಚಯವಲ್ಲ;
ದೃಕ್ಕಿನಿಂದೆಂದಡೆ ಇದಿರಿಟ್ಟು ಲಕ್ಷಿಸಬೇಕು.
ಇದು ಭಿನ್ನವಲ್ಲ, ಅಭಿನ್ನವಲ್ಲ; ಕ್ರಿಯೆಯಲ್ಲ, ನಿಃಕ್ರಿಯೆಯಲ್ಲ;
ಇದು ಭಿನ್ನವಲ್ಲ, ನಿರ್ಭಾವವಲ್ಲ.
ಅಹುದು ಅಲ್ಲವೆಂಬ ಸಂದೇಹ ಸಂಧಿಸಿ ನಿಂದಲ್ಲಿ
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನು
ಸ್ವಯವಾದ ಸಂಬಂಧಸ್ಥಲ.