ಆಚಾರ-ಅರುಹಿನಲ್ಲಿ ಸತ್ಕ್ರಿಯಾಸುಜ್ಞಾನ ಗುರುವ
ಸಂಬಂಧವ ಮಾಡಿಕೊಂಡು,
ಪಾಣಿ-ಪ್ರಾಣದಲ್ಲಿ ಸತ್ಕ್ರಿಯಾಸುಜ್ಞಾನಲಿಂಗವ
ಸಂಬಂಧವ ಮಾಡಿಕೊಂಡು,
ಆಚರಣೆ-ಸಂಬಂಧಂಗಳಲ್ಲಿ ಸತ್ಕ್ರಿಯಾಸುಜ್ಞಾನಜಂಗಮವ
ಸಂಬಂಧವ ಮಾಡಿಕೊಂಡು,
ನಡೆ-ನುಡಿಗಳಲ್ಲಿ ಸತ್ಕ್ರಿಯಾಸುಜ್ಞಾನ ಪಾದೋದಕವ
ಸಂಬಂಧವ ಮಾಡಿಕೊಂಡು,
ಜಿಹ್ವೆ-ನಾಸಿಕಂಗಳಲ್ಲಿ ಸತ್ಕ್ರಿಯಾಸುಜ್ಞಾನ ಪ್ರಸಾದವ
ಸಂಬಂಧವ ಮಾಡಿಕೊಂಡು,
ಸರ್ವಾಂಗ-ಸುಮನದಲ್ಲಿ ಸತ್ಕ್ರಿಯಾಸುಜ್ಞಾನ ಚಿದ್ವಿಭೂತಿಯ
ಸಂಬಂಧವ ಮಾಡಿಕೊಂಡು,
ತತ್ಸ್ಥಾನ-ಚಿದೃಕ್ಕಿನಲ್ಲಿ ಸತ್ಕ್ರಿಯಾಸುಜ್ಞಾನ ಚಿದ್ರುದ್ರಾಕ್ಷಿಯ
ಸಂಬಂಧವ ಮಾಡಿಕೊಂಡು,
ಕ್ರಿಯಾಕಾಶ-ಜ್ಞಾನಾಕಾಶಂಗಳಲ್ಲಿ ಸತ್ಕ್ರಿಯಾಸುಜ್ಞಾನ ಚಿನ್ಮಂತ್ರವ
ಸಂಬಂಧವ ಮಾಡಿಕೊಂಡರು ನೋಡ-
ಸೂಕ್ಷ್ಮಕಂಥೆಯ ಧರಿಸಿ, ಸಚ್ಚಿದಾನಂದ ಲೀಲಾಮೂರ್ತಿಗಳಾಗಿ
ಇಂತು ಉಭಯ ವಿಚಾರವಿಡಿದು ಆಚರಿಸುವರೆ
ಆದಿಸದ್ಭಕ್ತ ಶಿವಶರಣಗಣಂಗಳು ನೋಡ
ಸಂಗನಬಸವೇಶ್ವರ.