ಆರೂ ಇಲ್ಲದ ಅಡವಿಯಲ್ಲಿ, ಬೇರೊಂದು ಮನೆಯ ಮಾಡಿ ಐವರು ಹಾರುವರು ಕೂಡಿ, ಮೂವರು ಗೆಯ್ವರು ಕೂಡಿ ಆರಂಬಗೆಯ್ಯುತ್ತಿರಲಾಗಿ ಬೆಳೆ ಬೆಳೆಯಿತ್ತು. ಮೃಗ ಫಲವಾಗಲೀಸವು. ಬೇಡರ [ಅ]ಗಡ ಘನವೆಂದು ಬೀಡ ಬಿಟ್ಟಿತ್ತು, ಏಣಾಂಕಧರ ಸೋಮೇಶ್ವರಲಿಂಗಕ್ಕೆ ಹೇಳಿಹೆನೆಂದು.
ಆಕಾಶದುರಿ, ನೆಲದ ಮಡಕೆಯಲ್ಲಿ ಬಯಲ ನೀರ ತುಂಬಿ, ಇಲ್ಲದ ಅಕ್ಕಿಯ ಹಾಕಿ ಮೂರು ನೆಲೆಯಲ್ಲಿ ಕುದಿವುತ್ತಿದ್ದಿತ್ತು. ಪಾವಕನರಿದು ನೀರ ಹೊಯಿದು, ಗಂಜಿ ಅಲ್ಲಿ ಇಂಗಿತ್ತು, ಏಣಾಂಕಧರ ಸೋಮೇಶ್ವರಲಿಂಗಕ್ಕೆ ಓಗರ ಬೇಕೆಂದು.
ಆತ್ಮ ಘಟದಲ್ಲಿ ನಿಂದಿಹ ಭೇದ : ನೀರು ಮಣ್ಣಿನಂತೆ, ಬೇರು ಸಾರದಂತೆ ಗಂಧ ತರುವಿನಂತೆ ಒಂದ ಬಿಟ್ಟೊಂದ ಹಿಂಗಿರವಾಗಿ, ಅಂಗ ಲಿಂಗ ಪ್ರಾಣಯೋಗ ಸಂಬಂಧ ಸಂದಿಲ್ಲ ಏಣಾಂಕಧರ ಸೋಮೇಶ್ವರಲಿಂಗದಲ್ಲಿ.