ಓಗರ ಮೇಲೋಗರವನುಂಬನ್ನಕ್ಕ ಗಡಿತಡಿಯ ಕಾಯಿಸಿ,
ಮತ್ತೊಡೆಯರ ಕರೆಯೆಂದು,
ಮತ್ತೊಡೆಯರು ಬಂದಲ್ಲಿ ಮಡದಿಯರ ಮನೆಯೊಳಗವಿಸಿ,
ತನ್ನ ಬಿಡುಗಡೆಯ ಸ್ತ್ರೀಯರ ಕೈಯಲ್ಲಿ
ಒಡೆಯರು ಪಾದವೆಂದು ಅಡಿಯ ತೊಳೆವುತ್ತ,
ಆ ತೊಳೆದ ನೀರ ತಾ ಕುಡಿವುತ್ತ,
ಲಿಂಗಮಜ್ಜನವೆಂದು ಎರೆವುತ್ತ,
ಅವರು ಉಂಡು ಮಿಕ್ಕ ಓಗರವ ಪ್ರಸಾದವೆಂದು
ಲಿಂಗಕ್ಕೆ ತೋರಿ ತಾವು ಭುಂಜಿಸುತ್ತ,
ಇಂತಿವರು ತಮ್ಮ ವ್ರತವ ತಾವರಿಯದೆ, ತಮ್ಮ ಭಾವವ ತಾವರಿಯದೆ,
ಸುರೆಯ ಕುಡಿದವರಂತೆ, ಮರುಳು ಗ್ರಹ ಹೊಡೆದವರಂತೆ!
ಇಂತೀ ತ್ರಿವಿಧ ಗುಡಿಹಿಯ ಭಕ್ತಿ ಅಸಗ ನೀರಡಿಸಿ ಸತ್ತಂತಾಯಿತ್ತು.
ಆ ಗುಣಕಟ್ಟಳೆ ಏಲೇಶ್ವರಲಿಂಗವ ಮುಟ್ಟದೆ ಇತ್ತಲೆ ಉಳಿಯಿತ್ತು.