ಭಕ್ತಂಗೆ ಗುರುಪ್ರಸಾದ, ಮಾಹೇಶ್ವರಂಗೆ ಲಿಂಗಪ್ರಸಾದ,
ಪ್ರಸಾದಿಗೆ ಜಂಗಮಪ್ರಸಾದ, ಪ್ರಾಣಲಿಂಗಿಗೆ ಜ್ಞಾನಪ್ರಸಾದ,
ಶರಣಂಗೆ ಪ್ರಸನ್ನ ಪ್ರಸಾದ, ಐಕ್ಯಂಗೆ ನಿಜಪ್ರಸಾದ.
ಹೀಂಗಲ್ಲದೆ ರಣದ ವೀರರಂತೆ ಸೂರೆಗೂಳಿನಲ್ಲಿ ಅದಾರ ಪ್ರಸಾದ ಹೇಳಾ?
ತ್ರಿವಿಧಶೇಷಪ್ರಸಾದವ ಕೊಂಬಲ್ಲಿ
ಸಮಭೇದವನರಿತು, ಪ್ರಸಾದದ ಕ್ರಮಭೇದವ ಕಂಡು,
ಆಯತ ಸ್ವಾಯತ ಸನ್ನಹಿತವೆಂಬ ತ್ರಿವಿಧ ಕ್ರೀಯ
ವಿಚಾರಿಸಿ ನಡೆವುದು ಷಟ್ಸ್ಥಲದ ಕ್ರೀ,
ಆಚಾರಕ್ಕೆ ಇಕ್ಕಿದ ಗೊತ್ತು, ಏಲೇಶ್ವರಲಿಂಗವು ವ್ರತಸ್ಥನಾದ ಯುಕ್ತಿ.