ಸುಜ್ಞಾನ ಅಜ್ಞಾನವೆಂಬ ಉಭಯದ ಭೇದ,
ದೀಪದ ಕುಡಿವೆಳಗಿನ ಧೂಮದ ಪರಿಯಂತೆ.
ಅರಿವು ಮರವೆ ಬೇರೆ ಎಡೆದೆರಪಿಲ್ಲದೆ ಪುದಿದು,
ಆತ್ಮನಲ್ಲಿ ಎಡೆಬಿಡುವಿಲ್ಲದಿಪ್ಪುದು,
ಹೆರೆಹಿಂಗುವ ಪರಿಯಿನ್ನೆಂತೊ ?
ಪಂಕ ಸಲಿಲದಂತೆ, ಪಾಷಾಣ ಪಾವಕನಂತೆ,
ತೈಲ ರಜ್ಜುವಿನ ಯೋಗದಂತೆ
ಹೆರೆಹಿಂಗಿದಡೆ ಅರಿಯಬಾರದು.
ಕೂಡಿದ್ದಡೆ ಅರಿವಿಂಗೆ ವಿರೋಧ.
ಗೋವು ಮಾಣಿಕವ ನುಂಗಿದಂತೆ.
ಇದಾರಿಗೂ ಅಸಾಧ್ಯ, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ
ಅವನರಿದವಂಗಲ್ಲದಿಲ್ಲ.