ಅಂದಿನಕಾಲದ ಹನುಮ ಲಂಕೆಯ ಹಾರಿದನೆಂದು
ಇಂದಿನಕಾಲದ ಕಪಿ ಕಟ್ಟೆಯ ಹಾರುವಂತೆ,
ಅರಸುವೆಣ್ಣು ಉಪ್ಪರಿಗೆಯನೇರಿದಳೆಂದು
ತೊತ್ತು ತಿಪ್ಪೆಯನೇರುವಂತೆ,
ಕೊಮಾರ ಕುದುರೆಯನೇರಿದನೆಂದು
ಕೋಡಗ ಕುನ್ನಿಯನೇರುವಂತೆ,
ಆನೆ ಮದಸೊಕ್ಕಿ ಸೋಮಬೀದಿಯ ಸೂರೆಮಾಡಿತೆಂದು
ಆಡು ಮದಸೊಕ್ಕಿ ಬೇಡಗೇರಿಯ ಹೊಕ್ಕು ಕೊರಳ ಮುರಿಸಿಕೊಂಬಂತೆ,
ಉರದಮೇಲಣ ಗಂಡನ ಬಿಟ್ಟು
ಪರವೂರ ಮಿಂಡನ ಕೊಂಡಾಡುವ ಮಿಂಡಿನಾರಿಯಂತೆ
ಕಂಡಕಂಡುದ ಪೂಜಿಸುವ ಭಂಡಮುಂಡೆ
ಮೂಕೊರೆಯರ ಮುಖವ ನೋಡಲಾಗದು
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ.