ಘನಕ್ಕೆ ಘನ ಮಹಿಮೆಯ ಪಡೆವರೆಲ್ಲರು ರುದ್ರಾಕ್ಷಿಯ ಧರಿಸಿಪ್ಪರು,
ಆ ಮನುಜರು ಮತ್ರ್ಯರಲ್ಲ ನೋಡಿರೆ.
ಮುನ್ನೊಬ್ಬ ವ್ಯಾಧನು ಶ್ವಾನನ ಕೊರಳಲ್ಲಿ ರುದ್ರಾಕ್ಷಿಯ ಕಟ್ಟಲು
ಆ ಶ್ವಾನವೂ ರುದ್ರಲೋಕಕ್ಕೆ ಐದಿತೆಂಬುದು ಪುರಾಣಿಸಿದ್ಧ ನೋಡಿರೆ.
ಅದು ಕಾರಣ,
ಶಿಖೆಯಲ್ಲಿ ಒಂದು, ಶಿರದಲ್ಲಿ ಮೂವತ್ತಾರು
ಗಳದಲ್ಲಿ ಮೂವತ್ತೆರಡು, ಕರ್ಣದ್ವಯದಲ್ಲೆರಡು
ಹಾರದಲ್ಲಿ ನೂರೆಂಟು, ತೋಳಿನಲ್ಲಿ ಹದಿನಾರು
ಕರದಲ್ಲಿ ಹನ್ನೆರಡು, ಜಪದಲ್ಲಿ ಇಪ್ಪತ್ತೆಂಟು
ಈ ಕ್ರಮವರಿದು ರುದ್ರಾಕ್ಷಿಯ ಧರಿಸಿದಾತನೇ ರುದ್ರನು,
ಆತನೇ ಸದ್ಯೋನ್ಮುಕ್ತನು,
ಆತನೇ ಇಹಲೋಕ ಪರಲೋಕ ಪೂಜ್ಯನು, ಅಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.