ಒಂದು ಯೋನಿಯಲ್ಲಿ ಬಂದ ಮಕ್ಕಳ ವಿವರ: ಕಡೆ ನಡು ಮೊದಲೆಂದು ಕುರುಹಿಟ್ಟು ಕರೆದಡೆ ನುಡಿವಂತೆ ಅವರ ಪರಿ. ನಾಮಧೇಯದಲ್ಲಿ ಕರೆದಡೆ ಓ ಎಂಬಂತೆ ಅದು ಏಕರೂಪು. ಸರ್ವಮಯನಾಗಿ ಸಂಪದಕ್ಕೆ ಬಂದುದನರಿ; ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
ಒಂದಿರುಹಿನ ಗೂಡಿನಲ್ಲಿ ಆಯಿದಾನೆ ಮರಿಯನಿಕ್ಕಿ ಹೋದವು ತಮ್ಮ ಕಾಡಿಗೆ. ಇರುಹು ಮರಿಯ ಕಣ್ಣ ಕಟ್ಟಿ ಮರಿಯ ತೆಗೆದು ಹಾಕಿದವು ತಮ್ಮ ಗೃಹದಿಂದ. ಆನೆ ಬಂದು ನಿಂದು ನೋಡಿ ಇದೇನಾಯಿತ್ತು ಮರಣ ಎಂಬುದಕ್ಕೆ ಮೊದಲೇ ಆನೆ ಸತ್ತು ಇರುಹಿನ ಹಗೆ ಬಿಟ್ಟಿತ್ತು. ಆ ಅರಿವ ಅರಿದು ನೋಡು, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.