ಎಂಬತ್ತುನಾಲ್ಕುಲಕ್ಷ ಮಂಡಲದೊಳಗೆ
ಒಂದೊಂದು ಜನ್ಮದಲ್ಲಿ ಸಹಸ್ರವೇಳೆ ಸತ್ತು ಹುಟ್ಟಿ ಸುತ್ತಿಸುಳಿದು
ಸುಖದುಃಖಗಳಿಂದೆ ನೊಂದು ಬೆಂದು
ತೊಳಲಿ ಬಳಲುವ ಜೀವಂಗೆ,
ಬಡವಂಗೆ ಕಡವರ ದೊರೆಕೊಂಡಂತೆ,
ಮನುಷ್ಯದೇಹವು ದೊರೆಕೊಂಡಲ್ಲಿ,
ಶಿವಕೃಪೆಯಿಂದ ಗುರುಕಾರುಣ್ಯವಾಗಿ
ಅಂಗದ ಮೇಲೆ ಲಿಂಗಧಾರಣವಾದ ಬಳಿಕ
ಆ ಲಿಂಗದ ಮೇಲೆ ಪ್ರಾಣಪ್ರತಿಷೆ*ಯಂ ಮಾಡಿ
ನಿಮಿಷ ನಿಮಿಷಾರ್ಧವಗಲದಿರಬೇಕು.
ಮತ್ತಂ, ಆ ಲಿಂಗದಲ್ಲಿ ಐಕ್ಯವಾಗುವನ್ನಬರ
ಸತ್ಕ್ರಿಯಾ ಸಮ್ಯಕ್ಜ್ಞಾನವ ಬಿಡದಿರಬೇಕು.
ಇಷ್ಟುಳ್ಳಾತಂಗೆ ಶಿವನಲ್ಲಿ ಸಮರಸವಲ್ಲದೆ,
ಅಂತರಂಗದಲ್ಲಿ ಅಂತಃಪ್ರಾಣಲಿಂಗದ ಪರಿಪೂರ್ಣ ಬೆಳಗಕಂಡೆವು.
ಇನ್ನು ಇಷ್ಟಲಿಂಗದ ಹಂಗು ಏತಕೆಂದು
ಆ ಇಷ್ಟಲಿಂಗವ ಕಡೆಗೆ ತೆಗೆದು ಹಾಕಿ
ಲಿಂಗಬಾಹ್ಯನಾಗಿ ವ್ರತಗೇಡಿಯಾದಾತನು
ಒಂದುಕೋಟಿ ಕಲ್ಪಾಂತರವು ನರಕದೊಳಗಿರ್ದು
ಅಲ್ಲಿಂದತ್ತ ಎಂಬತ್ತುನಾಲ್ಕುಲಕ್ಷ ಜನ್ಮದಲ್ಲಿ
ಬಂಧನಬಡುತಿರ್ಪನಲ್ಲದೆ ಶಿವನಲ್ಲಿ
ಅವಿರಳ ಸಮರಸವಿಲ್ಲ ನೋಡಾ !
ಅದೆಂತೆಂದೊಡೆ :
``ಅಂಗೇ ಚ ಲಿಂಗಸಂಬಂಧಃ ಲಿಂಗಂಚ ಪ್ರಾಣಸಂಯುತಂ |
ನಿಮಿಷಾರ್ಧಂ ಪ್ರಾಣವಿಯೋಗೇನ ನರಕೇ ಕಾಲಮಕ್ಷಯಂ||''
ಎಂದುದಾಗಿ, ಇಂತಪ್ಪ ಅದ್ವೈತ ಹೀನಮಾನವರ
ಎನಗೊಮ್ಮೆ ತೋರದಿರಯ್ಯಾ ಅಖಂಡೇಶ್ವರಾ.