ವಿಷಯವೆಂಬ ಕಾಳಗಿಚ್ಚಿನ ಜ್ವಾಲೆಯಲ್ಲಿ
ಈರೇಳುಲೋಕವೆಲ್ಲ ಹತವಾಗುತಿರ್ಪುದು ನೋಡಾ !
ಅದೆಂತೆಂದೊಡೆ :
ಕುಂಡಲಿಯೆಂಬ ಮಾಯಾಸರ್ಪನು
ತನ್ನ ಬಾಲವ ಬ್ರಹ್ಮರಂಧ್ರಕ್ಕೇರಿಸಿ,
ನಾಭಿಚಕ್ರವ ಸುತ್ತಿಕೊಂಡು,
ಅಧೋಮುಖವಾಗಿ ಇಂದ್ರಿಯವಿಷವ ಕಾರುತಿಪ್ಪುದು ನೋಡಾ !
ಆ ವಿಷದ ನಂಜು ತಲೆಗೇರಿದಲ್ಲಿ
ಅಸಿಯಜವ್ವನೆಯರ ಸಂಗಸುಖ ಬಹುಸವಿಯೆಂದು
ತಲೆದೂಗುತ್ತಿಪ್ಪುದು ನೋಡಾ ಸಕಲ ಪ್ರಾಣಿಗಳು.
ಇದು ಪಶುಪತಿಯುಮಾಡಿದ
ಮಾಯದ ವಿಧಿಯೆಂದು ತಿಳಿಯದೆ
ಹಸಗೆಟ್ಟುಹೋಯಿತ್ತು ನೋಡಾ ಮೂಜಗವೆಲ್ಲ ಅಖಂಡೇಶ್ವರಾ.