ಅ
(46)
ಆ
(22)
ಇ
(24)
ಈ
(4)
ಉ
(3)
ಊ
(0)
ಋ
(0)
ೠ
(0)
ಎ
(54)
ಏ
(2)
ಐ
(0)
ಒ
(10)
ಓ
(1)
ಔ
(0)
ಅಂ
(15)
ಅಃ
(15)
ಕ
(42)
ಖ
(1)
ಗ
(33)
ಘ
(7)
ಙ
(0)
ಚ
(8)
ಛ
(1)
ಜ
(17)
ಝ
(0)
ಞ
(0)
ಟ
(0)
ಠ
(0)
ಡ
(0)
ಢ
(0)
ಣ
(0)
ತ
(33)
ಥ
(0)
ದ
(7)
ಧ
(2)
ನ
(46)
ಪ
(34)
ಫ
(1)
ಬ
(25)
ಭ
(14)
ಮ
(29)
ಯ
(1)
ರ
(3)
ಱ
(0)
ಲ
(13)
ವ
(13)
ಶ
(41)
ಷ
(1)
ಸ
(55)
ಹ
(26)
ಳ
(0)
ವಚನಕಾರ: ಷಣ್ಮುಖಸ್ವಾಮಿ
ಅಂಕಿತ ನಾಮ: ಅಖಂಡೇಶ್ವರ
ಕಾಲ:
ದೊರಕಿರುವ ವಚನಗಳು: 717 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ: ಮಲ್ಲಪ್ಪ ಶೆಟ್ಟಿ ಮತ್ತು ದೊಡ್ಡರೊಂಬೆ
ಹುಟ್ಟಿದ ಸ್ಥಳ: ಜೇವರಗಿ, ಕಲಬುರ್ಗಿ ಜಿಲ್ಲೆ
ಪರಿಚಯ: ವಚನ ವಾಗ್ಮಯದ ಮೂರನೆ ಘಟ್ಟದ ಪ್ರಮುಖರಿವರು, ಸಂಸ್ಕøತ-ಕನ್ನಡಗಳೆರಡರಲ್ಲೂ ಸಮಾನ ಪಾಂಡಿತ್ಯವಿದ್ದವರು, ನಿಶ್ಚಿತ ಶಾಸ್ತ್ರಜ್ಞಾನ ಯೋಗಸಿದ್ಧಿ, ಅನುಭಾವದ ದಿವ್ಯ ತೇಜಸ್ಸನ್ನು ಹೊಂದಿದ್ದಿಇವರು ಜೇವರಗಿ ವಿರಕ್ತಮಠದ ಅಧಿಪತಿಗಳಾಗಿ ವಚನಗಳನ್ನು ಸ್ಥಲಾನುಸರಿಯಾಗಿ ಬರೆದಿರುವರು, ಇವರ ವಚನಗಳು ಮುಖ್ಯವಾಗಿ ಷಟ್ಸ್ಥಲ ತತ್ತ್ವವನ್ನು ನಿರೂಪಿಸುತ್ತದೆ. ಈ ತತ್ತ್ವಗಳು ಪರಂಪರೆಯ ಜಾಡಿನಲ್ಲಿ ಹೆಚ್ಚು ವ್ಯವಸ್ಥಿತವಾಗಿ ಬಂದಿದೆ. ಒಟ್ಟು 14 ಸ್ಥಲಗಳಲ್ಲಿ ವಚನಗಳು ವಿಂಗಡಣೆಗೊಂಡಿವೆ. ಅವರ ವಚನಗಳಲ್ಲಿ ಅನುಭಾವ ತತ್ತ್ವ- ಸಾಹಿತ್ಯ ಮುಪ್ಪರಿಗೊಂಡಿದೆ.
ಒಬ್ಬರು ನಡೆದಾಚರಣೆಯಲ್ಲಿ ನಡೆಯರು. ಒಬ್ಬರು ಹಿಡಿದ ಶೀಲವ ಹಿಡಿಯರು. ಒಬ್ಬರು ನುಡಿದ ಭಾಷೆಯ ನುಡಿಯರು. ಅದೇನು ಕಾರಣವೆಂದೊಡೆ : ತಮ್ಮ ಲಿಂಗಮಚ್ಚಿ ನಡೆವರು. ತಮ್ಮ ಲಿಂಗಮಚ್ಚಿ ಹಿಡಿವರು. ತಮ್ಮ ಲಿಂಗಮಚ್ಚಿ ನುಡಿವರು. ಇದು ಕಾರಣ. ಅಖಂಡೇಶ್ವರಾ, ನಿಮ್ಮ ಶರಣರು ಪರಮ ಸ್ವತಂತ್ರಶೀಲರು.
ಒಳಗೆ ತಿಳಿಯದೆ ಹೊರಗೆ ಮಾಡುವ ಮಾಟವೆಲ್ಲ ಅಜ್ಞಾನದ ಗಡಣದೊಳಗು. ಒಳಗೆ ಗುರುಲಿಂಗಜಂಗಮದ ಪಾದತೀರ್ಥಪ್ರಸಾದವ ಕೊಂಡೆವೆಂದು ಹೊರಗೆ ಮಾಡುವ ಭಕ್ತಿಯ ಬಿಟ್ಟರೆ ಮುಂದೆ ಒದಗುವ ಮುಕ್ತಿಯ ಕೇಡು. ಅದೆಂತೆಂದೊಡೆ : ಅಸಲು ಕಳೆದ ಬಳಿಕ ಲಾಭವುಂಟೇ ? ಇಲ್ಲ ಇಲ್ಲ, ಮಾಣು. ಒಳಗಣ ಕೂಟ, ಹೊರಗಣ ಮಾಟವನರಿಯದೆ ಕೆಟ್ಟರು ನೋಡಾ ಹಿರಿಯರೆಲ್ಲರು ಅಖಂಡೇಶ್ವರಾ.
ಒಂಬತ್ತುನಾಳದೊಳಗೆ ತುಂಬಿಸೂಸುವ ಮನಪವನಂಗಳ ಒಂದೇ ಮಾರ್ಗದಲ್ಲಿ ನಡೆಸಿ, ಶಂಕಿನಿನಾಳವನಡರಿ, ಪಶ್ಚಿಮದ್ವಾರವ ಪೊಕ್ಕು, ಆ ಬ್ರಹ್ಮರಂಧ್ರವ ನುಸುಳಿ, ಶಿಖಾಗ್ರಂಥಿಯನೊಡೆದು ಆ ನಿರಂಜನಪೀಠವ ಮೆಟ್ಟಿ, ಮಹಾಬೆಳಗಿನ ಪ್ರಭಾಪುಂಜದಿಂದೆ ರಂಜಿಸುವ ನಿರಂಜನಸಮಾಧಿಯೊಳಗೆ ನಿರಂತರ ಬೆಳಗುತಿರ್ದೆನಯ್ಯಾ ಅಖಂಡೇಶ್ವರಾ.
ಒಳಗೆ ಲಿಂಗದ ಕೂಟದಲ್ಲಿ ಮನವಡಗಿರಬೇಕು. ಹೊರಗೆ ಜಂಗಮದ ಮಾಟದಲ್ಲಿ ತನುವಿಡಿದಿರಬೇಕು. ಈ ಉಭಯವ ಒಂದರೊಳಗೊಂದು ಛೇದಿಸಿಕೊಂಡು ತಾನಳಿದು ಮಾಡುವ ಭಕ್ತನ ಕೂಡಿಕೊಂಡಿರ್ಪನು ನೋಡಾ ಅಖಂಡೇಶ್ವರಾ.
ಒಮ್ಮೆ ಜ್ಞಾನಿಯೆನಿಸಿ, ಒಮ್ಮೆ ಅಜ್ಞಾನಿಯೆನಿಸಿ, ಒಮ್ಮೆ ವಿಕಲನೆನಿಸಿ, ಒಮ್ಮೆ ನಿಃಕಲನೆನಿಸಿ, ಒಮ್ಮೆ ಭ್ರಾಂತನೆನಿಸಿ, ಒಮ್ಮೆ ನಿಭ್ರಾಂತನೆನಿಸಿ, ನಾನಾ ತೆರದಿಂದೆ ಎನ್ನ ಹುಸಿದಿಟವ ಮಾಡಿಕಾಡದಿರಯ್ಯ. ನೀವು ದಯಾನಿಧಿ ಎಂದು ನಂಬಿದೆನಯ್ಯ. ನಿಮ್ಮ ಕರುಣಕಟಾಕ್ಷದಿಂದೆ ನೋಡಿ ಸಲಹಯ್ಯ ಎನ್ನ ಅಖಂಡೇಶ್ವರಾ.
ಒಳಗೆ ನೋಡಿದಡೆ ನಿಮ್ಮನೆ ನೋಡುವೆನಯ್ಯಾ. ಹೊರಗೆ ನೋಡಿದಡೆ ನಿಮ್ಮನೆ ನೋಡುವೆನಯ್ಯಾ. ಒಳಗೆ ಪೂಜಿಸಿದಡೆ ನಿಮ್ಮನೆ ಪೂಜಿಸುವೆನಯ್ಯಾ. ಹೊರಗೆ ಪೂಜಿಸಿದಡೆ ನಿಮ್ಮನೆ ಪೂಜಿಸುವೆನಯ್ಯಾ. ಒಳಗೆ ಧ್ಯಾನಿಸಿದಡೆ ನಿಮ್ಮನೆ ಧ್ಯಾನಿಸುವೆನಯ್ಯಾ. ಹೊರಗೆ ಧ್ಯಾನಿಸಿದಡೆ ನಿಮ್ಮನೆ ಧ್ಯಾನಿಸುವೆನಯ್ಯಾ. ನೀವು ಭಕ್ತ್ಯನುಕಂಪಿತರಾದ ಕಾರಣ ಎನ್ನ ಭಾವವು ಎಲ್ಲಿ ನಿಂದಿಹುದು ಅಲ್ಲಿ ನಿಮ್ಮ ನಿಲವೆ ತುಂಬಿರ್ಪುದಯ್ಯಾ ಅಖಂಡೇಶ್ವರಾ.