ಖಂಡಿತಭಾವವಳಿದು ಅಖಂಡಬ್ರಹ್ಮದಲ್ಲಿ
ಅವಿರಳ ಸಮರಸದಿಂದಡಗಿದ ಶರಣಂಗೆ
ಜ್ಞಾನಕ್ರಿಯೆಯೆಂಬುದೇನೊ ?
ಧ್ಯಾನಮೌನವೆಂಬುದೇನೊ ?
ನೇಮ ನಿತ್ಯವೆಂಬುದೇನೊ ?
ಜಪತಪವೆಂಬುದೇನೊ ?
ಅರುಹು ಆಚಾರವೆಂಬುದೇನೊ ?
ಕುರುಹು ಪೂಜೆಯೆಂಬುದೇನೊ ?
ಇಂತೀ ಮೇರೆಯುಳ್ಳನ್ನಕ್ಕರ ಭಿನ್ನಫಲಪ್ರಾಪ್ತಿಯಲ್ಲದೆ,
ಮುಂದೆ ಅವಿರಳ ಸಮರಸ ನಿಜೈಕ್ಯ ನಿರವಯಲ ಪದವಿನ್ನೆಲ್ಲಿಯದೊ ?
ಇದನರಿದು ಇಂತಿವೆಲ್ಲವು ಹಾಳು ಸಂಕಲ್ಪ,
ವಿಪರೀತ ಭ್ರಾಂತಿ, ಅಜ್ಞಾನವೆಂದು ತಿಳಿದು,
ಇವನೆಲ್ಲವ ವಿಭಾಗಿಸಿ ಕಳೆದು,
ಬಚ್ಚಬರಿಯ ಬಯಲಬ್ರಹ್ಮವೆ ತನ್ನ ನಿಜದ ನಿಲವೆಂದು ತಿಳಿದು,
ದಗ್ಧಪಟನ್ಯಾಯದಂತೆ ದೇಹವಿರ್ದು ನಿರ್ದೇಹಿಯಾಗಿರ್ದನಯ್ಯಾ
ನಿಮ್ಮ ಶರಣ ಅಖಂಡೇಶ್ವರಾ.