ಎಂಟು ತಟ್ಟೆಯ ನೆಟ್ಟು, ಒಂಬತ್ತು ನೇಣು ಕಟ್ಟಿ ಎಂಟ ಬಿಟ್ಟು ಒಂದೇ ನೇಣಿನಲ್ಲಿ ಹತ್ತಿ ಆಡುತ್ತಿರಲಾಗಿ ತಟ್ಟೆ ಮುರಿದು, ಮೆಟ್ಟಿನಿಂದ ದಾರ ಕಿತ್ತು, ನೋಡುವರ ದೃಷ್ಟಿ ಬಟ್ಟಬಯಲು ರೇಕಣ್ಣಪ್ರಿಯ ನಾಗಿನಾಥನಲ್ಲಿ ಆಟವನಾಡಿದ ಅರಿದಾಗಿ.
ಎಲ್ಲರಾಟದಂತಲ್ಲ ಎನ್ನಾಟ, ಕರದಾಧಾರದಲಪ್ಪಿ, ಪಂಚಾಮೃತ ಮಂತ್ರವನುಂಡಾಡಿದೆ. ಆ ದೇಶ ಈ ದೇಶವೆಂತೆನ್ನದೆ ಪರದೇಶದಲಾಡಿ ಪರದೇಶಿಯಾದೆನು. ಕಾಲನ ಮೇಲೆ ನಿಂದು, ಕಪಾಲದ ಭಿಕ್ಷವ ಹಿಡಿದು ಹರಿಯ ಶೂಲದಲೆತ್ತಿಯಾಡಿದೆ. ಹರಶರಣರಾಧಾರದ ಬಸವನ ಶಿಶು ನಾನು ಕಾಣಾ ರೇಕಣ್ಣಪ್ರಿಯ ನಾಗಿನಾಥಾ.
ಎಲ್ಲಾ ಜಗಂಗಳೊಳಗಿರ್ದಡೇನು ಶಿವನು ಜಗದಂತಹನಲ್ಲ. ಜಗವ ತನ್ನೊಳಗಿಕ್ಕಿ ತಾ ಹೊರಗಿರ್ದಹೆನೆಂದಡೆ ಬ್ರಹ್ಮಾಂಡದಂತಹನೇ ? ಅಲ್ಲ. ಆಕಾಶದೋಪಾದಿಯಲ್ಲಿ ಸರ್ವಲೋಕದ ಒಳ ಹೊರಗೆ ಮೂಲ ಚೈತನ್ಯ ತಾನಾಗಿ, ಆಧಾರವಾದ ನಮ್ಮ ರೇಕಣ್ಣಪ್ರಿಯ ನಾಗಿನಾಥ