ಜಂಗಮದ ಪಾದತೀರ್ಥ ಪ್ರಸಾದವ ಕೊಳ್ಳದಂತಹ
ಗುರುವಿನ ಕೈಯಲ್ಲಿ
ಲಿಂಗಧಾರಣವ ಮಾಡಿಸಿಕೊಳಲಾಗದು.
ಆತನ ಪಾದತೀರ್ಥ ಪ್ರಸಾದವ ಕೊಳಲಾಗದು.
ಅಥವಾ ಪ್ರಮಾದವಶದಿಂದ ಲಿಂಗಧಾರಣವ
ಮಾಡಿಸಿಕೊಂಡಡೆಯೂ ಮಾಡಿಸಿಕೊಳ್ಳಲಿ.
ಆ ಗುರುವನೆ, ಜಂಗಮದ ಪಾದತೀರ್ಥ ಪ್ರಸಾದವ
ಕೊಂಬ ಹಾಂಗೆ ಸದಾಚಾರಿಯ ಮಾಡುವದು.
ಶಿಷ್ಯನು, ಆ ಗುರು ಜಂಗಮದ
ಪಾದತೀರ್ಥ ಪ್ರಸಾದವ ಕೊಳ್ಳದಿರ್ದಡೆ
ಮತ್ತೆ ಲಿಂಗವನು ಮರಳಿ ಜಂಗಮದ ಪಾದತೀರ್ಥ ಪ್ರಸಾದವ
ಕೊಂಬಂತಹ ಜಂಗಮದ ಕೈಯಲ್ಲಿ ಕೊಟ್ಟು ಕೊಳಬೇಕು.
ಜಂಗಮಲಿಂಗಪ್ರಸಾದವ ಕೊಳದಂತಹ
ಜಂಗಮದ ಕೈಯಲ್ಲಿ ಪ್ರಸಾದವ ಕೊಳಲಾಗದು.
ಆ ಜಂಗಮ ಭಕ್ತನ ಮಠಕ್ಕೆ ಬಂದು
ಪಾದತೀರ್ಥ ಪ್ರಸಾದವ ಕೊಳದಂತಹ ಜಂಗಮವಾದಡೂ
ಅವರಲ್ಲಿ ಪಾದತೀರ್ಥ ಪ್ರಸಾದವ ಕೊಳಲಾಗದು.
ಅದೇನು ಕಾರಣವೆಂದಡೆ :
ಜಂಗಮದ ಪಾದತೀರ್ಥ ಪ್ರಸಾದವ ಕೊಳದಂತಹ
ಗುರುವಿಂಗೆಯೂ ಲಿಂಗಕ್ಕೆಯೂ ಜಂಗಮಕ್ಕೆಯೂ
ಮುಕ್ತಿಯಿಲ್ಲ ಕಾಣಾ, ರೇಕಣ್ಣಪ್ರಿಯ ನಾಗಿನಾಥಾ.