ಬಯಲಿಂದ ಹುಟ್ಟಿದ ಪರವೆಂಬ ತಾಯಿಗೆ
ಐವರು ಮಕ್ಕಳು ಜನಿಸಿದರೆಂತೆಂಬೆ :
ಒಬ್ಬ ಭಾವದ ರೂಪು, ಒಬ್ಬ ಪ್ರಾಣದ ರೂಪು.
ಒಬ್ಬ ಕಾಯದ ರೂಪು, ಒಬ್ಬನೈಮುಖನಾಗಿ
ವಿಷಯಕ್ಕೆ ಕಾಯರೂಪನಾದ. ಒಬ್ಬನೆಲ್ಲರ ಕೂಡಿಕೊಂಡು ನಿರವಯವಾಗಿರ್ಪ.
ಇಂತಿವರ ಕೂಡಿಕೊಂಡು ಈ ಲೋಕಕ್ಕೆ ಬಂದೆನು.
ಆನು ಹೋಗೆನಯ್ಯಾ, ಇನ್ನು ಹೋದೆನಾದಡೆ ಎನಗಿರ ಠಾವಿಲ್ಲ.
ಮುನ್ನ ಹೋದವರೆಲ್ಲಾ ತಗಹಿನಲ್ಲಿ ಕುಳ್ಳಿರ್ದರು.
ಆನು ಆ ತಗಹನರಿತೆನಾಗಿ ಬಲ್ಲಡೆ ಬಂದೆನಿಲ್ಲಿಗೆ.
ಇಲ್ಲೆನ್ನೊ ಮದ್ದಳಿಗ, ಒಲ್ಲೆನ್ನೊ ಕಹಳೆಕಾರ.
ಬಿಂದುವ ಹರಿದು ತಿಂದು ಹಾಕಿರೊ, ತಂತಿಯ ಹರಿಯಿರೊ.
ತಾಳ ವಿತಾಳವಾಯಿತ್ತಲ್ಲಾ ಕೇಳಿರೆ ಕೇಳಿರೆ.
ನಿಃಶೂನ್ಯವಾಯಿತ್ತಲ್ಲಾ ಕೇಳಯ್ಯ ಕೇಳಯ್ಯ.
ರೇಕಣ್ಣಪ್ರಿಯ ನಾಗಿನಾಥಾ ಬಸವಣ್ಣನಿಂದ ಬದುಕಿತೀ ಲೋಕವೆಲ್ಲಾ.