ತಮ್ಮ ಪುತ್ರರಂಗದ ಮೇಲೆ, ತಮ್ಮ ಶ್ರೀಗುರುವಿನ ಹಸ್ತದಲ್ಲಿ, ಲಿಂಗಸಾಹಿತ್ಯವ ಮಾಡಿದ ಬಳಿಕ, ಆ ಗುರುವಿನ ಪುತ್ರರಲ್ಲದೆ, ತಮ್ಮ ಪುತ್ರರಲ್ಲ. ತಾವವರೂ ಗುರುವಿನ ಸೊಮ್ಮೆಂದರಿದು, ಮತ್ತೆ ತಮ್ಮ ಪುತ್ರಿಯರೆಂದು ಮಾರಿಕೊಂಡುಂಡು, ನಾನು ಭಕ್ತ, ನಾನು ಮಹೇಶ್ವರನೆಂಬ ಶಿವಾಚಾರ ಭ್ರಷ್ಟರುಗಳ ವೀರಸೊಡ್ಡಳ ಮೆಚ್ಚುವನೆ, ಚನ್ನಬಸವಣ್ಣಾ ?
ತನ್ನ ಶ್ರೀಗುರುವಿಂಗೆ ಸಕಲಪದಾರ್ಥವ ಕೊಟ್ಟು ಕೊಂಡಡೆ ಪ್ರಸಾದ. ತನ್ನ ಪ್ರಾಣಲಿಂಗಕ್ಕೆ ಸಕಲಪದಾರ್ಥವ ಕೊಟ್ಟು ಕೊಂಡಡೆ ಪ್ರಸಾದ. ಜಂಗಮಕ್ಕೆ ಸಕಲಪದಾರ್ಥವ ಕೊಟ್ಟು ಕೊಂಡಡೆ ಪ್ರಸಾದ. ಇದೇ ಪ್ರಸಾದದ ಹಾದಿ ಕಂಡಯ್ಯಾ. ಮುನ್ನಾದಿಯ ಪುರಾತನರು ನಡೆದ ಪಥವು ಕಂಡಯ್ಯಾ. ಇಂತೀ ಶ್ರೀಗುರುವಿಂಗೆ ಕೊಡದೆ, ಲಿಂಗಕ್ಕೆ ಕೊಡದೆ, ಜಂಗಮಕ್ಕೆ ಕೊಡದೆ ತಾನೆ ಉಂಡನಾದಡೆ, ಹುಳುಗೊಂಡದಲ್ಲಿಕ್ಕುವ, ನಮ್ಮ ದೇವರಾಯ ಸೊಡ್ಡಳ.