ಹರಿಬ್ರಹ್ಮಾದಿ ದೇವರ್ಕಳ ಸಲಹುವರೆ, ಮಾತಾ ಪಿತರುಂಟು.
ಅಜಾತಲಿಂಗವ ಸಲಹುವರೆ,
ಮಾತಾಪಿತರಿಲ್ಲವೆಂದು ಅಮ್ಮವ್ವೆ ಮರುಗುತ್ತಿರಲು,
ಅಮ್ವವ್ವೆಯರ ಮರುಕಕ್ಕೆ ಮೆಚ್ಚಿ ಶಿಶುವಾದನು.
ಅಮ್ವವ್ವೆ ಮೊಲೆಯನುಣ ಕಲಿಸಿದಳು.
ಕೊಡಗೂಸು ಹಾಲನಾರೋಗಿಸ ಕಲಿಸಿದಳು.
ಚೋಳಿಯಕ್ಕ ಸಕಲದ್ರವ್ಯಂಗಳು, ಅಪವಿತ್ರಗಳೆಂದವ ಮುಟ್ಟಲೀಯದೆ,
ತನ್ನ ಪ್ರಸಾದವನಾರೋಗಿಸಲು ಕಲಿಸಿದಳು.
ಇಂತೀ ಪ್ರಸಾದವಲ್ಲದೆ ಅನರ್ಪಿತವ ಮುಟ್ಟಲೊಲ್ಲನೆಂದು,
ಸಂಗನಬಸವಣ್ಣನು ಜಂಗಮಪ್ರಸಾದವ ಲಿಂಗಕ್ಕೆ ಸಮರ್ಪಿಸಿ,
ಆ ಪ್ರಸಾದವ ಸ್ವೀಕರಿಸಿ ಪ್ರಸಾದಿಯಾದ
ಕಾಣಾ, ದೇವರಾಯ ಸೊಡ್ಡಳಾ.