ಮ ಪದದಿಂದ ಪ್ರಾರಂಭವಾಗುವ ವಚನಗಳು:
ಮುಕ್ತ್ಯಾಂಗನೆಯ ಕೊಟ್ಟಿಗೆಯಲ್ಲಿ ಮೂರು ಎತ್ತು ಕಟ್ಟಿದವು.ಉಳುವುದಕ್ಕೆ ಹೆಗಲಿಲ್ಲ , ನಡೆವುದಕ್ಕೆ ಕಾಲಿಲ್ಲ ,ಮೇವುದಕ್ಕೆ ಬಾಯಿಲ್ಲ , ಎರಡಾರಿಂಗೆ ಎಣೆಯಿಲ್ಲ .ಎತ್ತು ವಿಚ್ಛಂದವಾಯಿತ್ತು ,ಎತ್ತು ಕಾವ ಹೈದ, ಎತ್ತ ಹೋದನೆಂದರಿಯೆ.ಕೊಟ್ಟಿಗೆ ಬಚ್ಚಬಯಲಾಯಿತ್ತು , ಬಂಕೇಶ್ವರಲಿಂಗಾ.
ಮಾಧವನ ಪಟ್ಟಣದಿಂದ ಓಡಿದರು ಮೂವರು ಸೂಳೆಯರು.ಅವರು ಹೋದ ಹಾದಿಯಲ್ಲದೆ, ಬೇರೊಂದು ಹಾದಿಯಲ್ಲಿಅರಸಿ ಕಂಡರು ಸೂಳೆಯರ.ಅವರ ಮೂವರ ಸೆರೆಯ ವಿವರ:ಬಾಯಿಗೆ ಕೋಳ, ಕಾಲಿಗೆ ನೂಲೆಳೆಯ ಕಟ್ಟು,ಕೈಹೋಗದಂತೆ ಕೂರಲಗಿನ ಸಂಭವ ಕಟ್ಟು,ಮೂವರ ಅಗಡ ಹಿಂಗಿತ್ತು.ಇನ್ನೈವರ ಕೇಳಿ, ಬಂಕೇಶ್ವರಲಿಂಗವ.
ಮೊದಲು ಬಂದ ಬಾಯಿ ಕಚ್ಚಿದುದಿಲ್ಲ.ಕಡೆಯಲ್ಲಿ ಹುಟ್ಟಿದ ಹುಲ್ಲು, ಕಠಿಣವು ಕಡಿವುತ್ತಿದೆ ನೋಡಾ.ಮೊದಲು ಬಂದ ಮರವೆ, ಕಡೆಯಲ್ಲಿ ಬಂದ ಅರಿದರಿವು,ಬಂಕೇಶ್ವರಲಿಂಗವ ಒಡಗೂಡಿತ್ತು, ನೋಡಾ.
ಮುತ್ತು ಮೊಲೆಯ ನುಂಗಿತ್ತು, ಮೊಲೆ ಅಬಲೆಯ ನುಂಗಿತ್ತು.ಅಬಲೆಯ ಬಲೆಯಲ್ಲಿ, ಬಲವಂತರೆಲ್ಲರು ಸಿಕ್ಕಿದರು.ಸುಂಕಕ್ಕಡಹಿಲ್ಲ, ಬಂಕೇಶ್ವರಲಿಂಗಾ.
ಮಹಿಮಾಪದದಲ್ಲಿ ಒಂದು ಮನೋಹರದ ಪಟ್ಟಣ.ಪಟ್ಟಣದ ಸುತ್ತುವಳೆಯದಲ್ಲಿ ಇಕ್ಕಿದ ಕೋಟೆ.ರಸಮಂದಿರದ ಮಣ್ಣು, ನಿರಂಜನದ ಅಗಳು.ತತ್ವಾರ್ಥದ ಆಳುವೇರಿ, ಮಂಡೆಗೆಮರೆ ತೆನೆ.ಮುಕ್ತಿ ನಿಶ್ಚಯವಾದ ಪೃಥ್ವಿಪಟ.ಅದರೊಳಗಾದ ಎಂಬತ್ತನಾಲ್ಕುಲಕ್ಷ ಮನೆಯಲ್ಲಿಹೊಂದುವರೊಬ್ಬರೂ ಇಲ್ಲ.ಪಟ್ಟಣ ಆರಿಗೂ ಸಾಧ್ಯವಲ್ಲ, ಬಂಕೇಶ್ವರಲಿಂಗವನರಿತವರಿಗಲ್ಲದೆ.
ಮನ ಬುದ್ಧಿ ಚಿತ್ತ ಅಹಂಕಾರವೆಂಬಿವು ತನಗೆ ವೈರಿಗಳು.ನಿರ್ಮಲ ಸುಚಿತ್ತ ದಿವ್ಯಜ್ಞಾನವೆ ತನಗೆ ಕೂಪರು.ಮರೆದಡೆ ಹಗೆ.ತನ್ನ ತಾನರಿತಡೆ, ತನ್ನಯ ಪರಿಸ್ಪಂದ ದಿವ್ಯಜ್ಞಾನ.ಇಂತೀ ಉಭಯವ ತಿಳಿ, ಬಂಕೇಶ್ವರಲಿಂಗದಲ್ಲಿ.
ಮೇಲೇರಿದ ಹುಗಿಲ ತಾಳ ಪುಟಕ್ಕೆ ಅಗೆದು,ಕೇಳಿನ ಹುಗಿಲ ಮೇಗಳ ತಾಳು ನುಂಗಿತ್ತು.ಕೀಳಿನ ಮೇಲಿನ ದ್ವಾರವ ಕೀಲು ನುಂಗಿತ್ತು.ಕೀಲು ಕೀಳುವ ಸಕೀಲವ ಇನ್ನಾರುವ ಕಾಣೆ.ಬಂಕೇಶ್ವರಲಿಂಗದಲ್ಲಿ ಲೀಯವಾದವಂಗಲ್ಲದೆ ಇಲ್ಲ.