ಸದಾಚಾರವೆ ಸಾಕಾರವಾಗಿ, ಸತ್ಪ್ರಣಮವೆ ಪ್ರಾಣವಾಗಿ, ಮಾಡುವ ಮಾಟವೆ ಕೈಯಾಗಿ, ಅರಿವೆಂಬ ಬಾಯಿಗೆ ಕುರುಹಿನ ಕೈ ಮರೆಯದೆ ಅರ್ಪಿಸಿತ್ತು. ಅಂಗಪ್ರಾಣ ಅರಿವು ಸಂಬಂಧ, ಅದು ಪ್ರಾಣಲಿಂಗಯೋಗ, ಬಂಕೇಶ್ವರಲಿಂಗದಲ್ಲಿ.
ಸುಧೆಯ ಸುಮ್ಮಾನದ ಗಿರಿಯಲ್ಲಿ ಒಂದು ಮಲಯಜದ ಮರ ಹುಟ್ಟಿತ್ತು. ಬೇರಿಲ್ಲದೆ ನೀರಿಲ್ಲದೆ ಭೂಮಿಯೊಳಗಲ್ಲದೆ ಬೆಳೆವುತ್ತದೆ ನೋಡಾ. ಅದಕ್ಕೆ ಬೇರಿನೊಳಗಣ ಹಣ್ಣು, ಮರದ ಮಧ್ಯದಲ್ಲಿ ಕಾಯಿ, ತುದಿಯಲ್ಲಿ ಹೂ. ತುದಿಯಲ್ಲಿ ಕುಸುಮ ಬಲಿದು, ಮರದ ಮಧ್ಯದಲ್ಲಿ ಕಾಯಿ ಬಲಿದು, ರಸ ಬೇರಿಗಿಳಿಯಿತ್ತು. ಬೇರಿನ ಹಣ್ಣು ಬಂಕೇಶ್ವರಲಿಂಗಕ್ಕೆ ಆರೋಗಣೆಯಾಯಿತ್ತು.